ಆ್ಯಪ್ನಗರ

ರಾಜಕೀಯ, ಮಾಧ್ಯಮಕ್ಕæ್ಕ ಸ್ವಯಂ ನಿಯಂತ್ರಣ ಅಗತ್ಯ: ಪರಮೇಶ್ವರ್‌

ಸಮಾಜದ ಸ್ವಾಸ್ಥ್ಯ ಕಾಪಾಡಲು ರಾಜಕೀಯ ಕ್ಷೇತ್ರದಲ್ಲಿ ಕಡಿವಾಣ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ...

Vijaya Karnataka 12 Feb 2019, 5:00 am
ಬೆಂಗಳೂರು: ಸಮಾಜದ ಸ್ವಾಸ್ಥ್ಯ ಕಾಪಾಡಲು ರಾಜಕೀಯ ಕ್ಷೇತ್ರದಲ್ಲಿ ಕಡಿವಾಣ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಪ್ರತಿಪಾದಿಸಿದ್ದಾರೆ.
Vijaya Karnataka Web BNG-1102-2-2-NADHAF


ಕರ್ನಾಟಕ ಮಾಧ್ಯಮ ಅಕಾಡೆಮಿಯು ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಂಡಿದ್ದ 2018ನೇ ಸಾಲಿನ ಪ್ರಶಸ್ತಿ ಪ್ರದಾನ ಹಾಗೂ ಎಂಟು ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ'' ಸತ್ಯಕ್ಕೆ ಹತ್ತಿರವಾದ ಸುದ್ದಿಗಳನ್ನು ಬಿತ್ತರಿಸದಿದ್ದಲ್ಲಿ ಭವಿಷ್ಯದಲ್ಲಿ ಪತ್ರಿಕೋದ್ಯಮಕ್ಕೆ ಮಾರಕವಾಗಲಿದೆ'' ಎಂದು ಎಚ್ಚರಿಸಿದರು.

''ಶಾಸಕರ ಖರೀದಿ ವಿಚಾರವನ್ನೇ ದಿನವಿಡೀ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಆದರೆ, ಪತ್ರಿಕೋದ್ಯಮಕ್ಕೂ ಅದೇ ಕಳಂಕ ಅಂಟಿದೆ. ನಮಗೆ ನಾವು ಕಡಿವಾಣ ಹಾಕಿಕೊಳ್ಳದಿದ್ದರೆ ಜನ ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ'' ಎಂದು ಸೂಚ್ಯವಾಗಿ ಹೇಳಿದರು.

''ಪ್ರಸ್ತುತ ಸನ್ನಿವೇಶದಲ್ಲಿ ಮಾಧ್ಯಮಗಳು ರಾಜಕಾರಣಿಗಳನ್ನು ಕಾಮೆಡಿ ರೀತಿಯಲ್ಲಿ ತೋರಿಸುತ್ತಿವೆ. ಕೋಟಿ ಕೋಟಿ ಲಂಚ, ಜೈಲು, ಬೈಲ್‌ಗೆ ಸಂಪರ್ಕ ಕಲ್ಪಿಸಿ ದಿನವಿಡೀ ತೋರಿಸಿ ನಮ್ಮನ್ನು ಸಮಾಜ ಕಳ್ಳನಂತೆ ನೋಡುವ ಸನ್ನಿವೇಶ ಸೃಷ್ಟಿಸಿವೆ. ಹೀಗಾಗಿ, ನಾವೆಷ್ಟೇ ಸತ್ಯ, ಪ್ರಾಮಾಣಿಕತೆಯಿಂದ ನಡೆದುಕೊಂಡರೂ ಸಮಾಜ ನಮ್ಮನ್ನು ಎಕ್ಸ್‌-ರೇ ಕಣ್ಣಿನಲ್ಲಿ ನೋಡುವ ಸ್ಥಿತಿ ನಿರ್ಮಾಣವಾಗಿದೆ'' ಎಂದು ಸಚಿವ ಡಿ.ಕೆ. ಶಿವಕುಮಾರ್‌ ವಿಷಾದಿಸಿದರು.

ಢಮ್‌, ಢಮಾರ್‌ ಅಂತ ಹೊಡೆದು ಸಾಯಿಸಿದ್ರೆ ಬದುಕೋದು ಹೇಗೆ?:

''ನನ್ನ ಮನೆಯ ಮೇಲೆ ಐಟಿ ದಾಳಿ ನಡೆದಾಗ ಜೈಲು, ಇ.ಡಿ ಬಗ್ಗೆಯೆಲ್ಲಾ ಮಾಧ್ಯಮಗಳು ಪ್ರಸ್ತಾಪಿಸಿದವು. ನಾನು ಕಾನೂನು ರೀತ್ಯ ಪ್ರಕರಣ ಎದುರಿಸಲು ಸಿದ್ಧನಿದ್ದೇನೆ. ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲೂ ಸಿದ್ಧ. ಆದರೆ, ನೀವೇ ಸಬ್‌ ಇನ್ಸ್‌ಪೆಕ್ಟರ್‌, ಸರ್ಕಲ್‌ ಇನ್ಸ್‌ಪೆಕ್ಟರ್‌, ಜಡ್ಜ್‌ ಸ್ಥಾನದಲ್ಲಿ ಕೂತು ಕರ್ತವ್ಯ ನಿರ್ವಹಿಸಿದರೆ ಹೇಗೆ? ಢಮ್‌, ಢಮಾರ್‌ ಅಂತ ಒಂದೇ ಏಟಿನಲ್ಲಿ ಹೊಡೆದು ಸಾಯಿಸಿದ್ರೆ ಬದುಕೋದು ಹೇಗೆ'' ಎಂದು ಪ್ರಶ್ನಿಸಿದರು.

''ಸತ್ಯ ನುಡಿಯಲು ಶಪಥ ಮಾಡಬೇಕಿಲ್ಲ. ಮಾಧ್ಯಮ ಕೂಡ ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡುವ ಮೂಲಕ ಸಮಾಜವನ್ನು ಉಳಿಸಬೇಕಿದೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ನಾವು- ನೀವು ಒಟ್ಟಾಗಿ ಕೆಲಸ ಮಾಡಬೇಕಿದೆ'' ಎಂದು ಮನವಿ ಮಾಡಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು ಸ್ವಾಗತಿಸಿದರು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು, ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಎಚ್‌.ಬಿ. ದಿನೇಶ್‌, ಅಕಾಡೆಮಿ ಕಾರ್ಯದರ್ಶಿ ಸಿ. ರೂಪಾ ಉಪಸ್ಥಿತರಿದ್ದರು.

ಜೀವಮಾನ ಸಾಧನೆಗಾಗಿ ಹಿರಿಯ ಪತ್ರಕರ್ತ ಧರ್ಮಾವರ ಬಾಲಾಜಿ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. 'ವಿಜಯ ಕರ್ನಾಟಕ'ದ ಹಾವೇರಿ ಜಿಲ್ಲಾ ವರದಿಗಾರ ರಾಜು ನದಾಫ್‌ ಸೇರಿದಂತೆ 49 ಮಂದಿ ಪತ್ರಕರ್ತರಿಗೆ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ, 'ವಿಜಯ ಕರ್ನಾಟಕ' ಮುಖ್ಯ ವರದಿಗಾರ ಡಾ. ಕೂಡ್ಲಿ ಗುರುರಾಜ ಅವರ 'ಪತ್ರಿಕಾ ಮಾಧ್ಯಮದ ವಾಣಿಜ್ಯಿಕ ಆಯಾಮ' ಸೇರಿದಂತೆ ಒಟ್ಟು ಎಂಟು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ