ಬೆಂಗಳೂರು: ಮಹದಾಯಿ ವಿಚಾರದಲ್ಲಿ ಅಗತ್ಯ ಸಂದರ್ಭ ಎದುರಾದರೆ ಉಗ್ರ ಹೋರಾಟಕ್ಕೆ ತಾವು ಸಿದ್ಧ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಸೋಮವಾರ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಆನಂದ ಅಸ್ನೋಟಿಕರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ''ಮಹದಾಯಿ ವಿವಾದ ಪರಿಹಾರಕ್ಕಾಗಿ ನನ್ನ ಪಾಲಿನ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ'' ಎಂದರು.
''ಉತ್ತರ ಕರ್ನಾಟಕ ಭಾಗದ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮಹದಾಯಿ ವಿವಾದ ಬಗೆಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೇನೆ. ಸಮಸ್ಯೆ ಕುರಿತು ವಿವರಣೆ ನೀಡಿ ಪರಿಹಾರಕ್ಕಾಗಿ ನಡೆಸಬೇಕಾದ ಪ್ರಯತ್ನ ಕುರಿತು ಮನವರಿಕೆ ಮಾಡಿಕೊಟ್ಟಿದ್ದೇನೆ. ಆದರೂ ಪ್ರಧಾನಮಂತ್ರಿಗಳು ಏಕೆ ಹಿಂದೆ ಮುಂದೆ ನೋಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ,'' ಎಂದು ಹೇಳಿದರು.
''ಕಾವೇರಿ ವಿಚಾರದಲ್ಲಿ ನಿರಶನ ನಡೆಸಿದ್ದೆ. ಕಾವೇರಿ ವಿಚಾರದಲ್ಲಿ ನ್ಯಾಯಾಧೀಕರಣದ ತೀರ್ಪು ಹೊರಬಂದಿತ್ತು. ಆದರೆ, ಮಹದಾಯಿ ವಿವಾದದ ಸ್ವರೂಪ ಬೇರೆಯದೇ ಇದೆ. ಇನ್ನೂ ಅಂತಹ ಸ್ಥಿತಿ ತಲುಪಿಲ್ಲ ಮತ್ತು ರಾಜ್ಯಕ್ಕೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ಉಳಿದಿದೆ,'' ಎಂದು ಸ್ಪಷ್ಟಪಡಿಸಿದರು.
ಇದೆಂತಾ ಹಿಂದುತ್ವ?
''ಹಿಂದೂ ಧರ್ಮದ ಆದರ್ಶವೇ ಸಹನೆ ಮತ್ತು ಸಹೃದಯತೆ. ಮತ್ತೊಂದು ಧರ್ಮವನ್ನು ಸಹಿಸದಿರುವುದು ಹಿಂದುತ್ವ ಹೇಗಾಗುತ್ತದೆ? ಧರ್ಮ ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಒಳ್ಳೆಯದಲ್ಲ'' ಎಂದು ಅವರು ಪರೋಕ್ಷವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರಿಗೆ ಕಿವಿಮಾತು ಹೇಳಿದರು.
ಶತರುದ್ರಯಾಗ ಮಾಡಿಸಿದ್ದು ಶತ್ರುನಾಶಕ್ಕಲ್ಲ
''ನಾನು ದೇವರನ್ನು ನಂಬುತ್ತೇನೆ. ಬೇರೆ ಧರ್ಮಗಳ ಮೇಲೆ ಗೌರವ, ವಿಶ್ವಾಸವೂ ಇದೆ. ಪ್ರತಿ ಧರ್ಮವನ್ನೂ ರಕ್ಷಣೆ ಮಾಡುವ ಬಗ್ಗೆ ಅಂಬೇಡ್ಕರ್ ಅವರು ಸಂವಿಧಾನದಲ್ಲೇ ಹೇಳಿದ್ದಾರೆ. ನಮ್ಮ ಪಕ್ಷದ ಜಾತ್ಯತೀತ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ'' ಎಂದು ದೇವೇಗೌಡರು ಸ್ಪಷ್ಟಪಡಿಸಿದರು.
ಶೃಂಗೇರಿ ಶ್ರೀಗಳು ಆಚರಿಸುವುದು ನಿಜವಾದ ಹಿಂದುತ್ವ. ಇಂತಹ ಹಿಂದುತ್ವವನ್ನು ಎಲ್ಲರೂ ಆಚರಣೆ ಮಾಡಿದ್ದರೆ ಕರಾವಳಿ ಭಾಗದಲ್ಲಿ ಇಷ್ಟೊಂದು ಹತ್ಯೆಗಳಾಗುತ್ತಿರಲಿಲ್ಲ. ಶೃಂಗೇರಿ ಪೀಠಕ್ಕೆ ಹೈದರಾಬಾದ್ ನಿಜಾಮರು ವಜ್ರದ ಕಿರೀಟ ನೀಡಿದ್ದರು. ಇದು ಧಾರ್ಮಿಕ ಸಹಿಷ್ಣುತೆ'' ಎಂದರು.
''ತಾವು ಶೃಂಗೇರಿಯಲ್ಲಿ ಶತರುದ್ರಯಾಗ ಮಾಡಿಸಿದ್ದು ಶತ್ರುನಾಶಕ್ಕಲ್ಲ ಬದಲಿಗೆ, ಲೋಕ ಕಲ್ಯಾಣಕ್ಕೆ. ಶತ್ರುನಾಶಕ್ಕೆ ಯಾಗ ಮಾಡಿಸುವವರು ಶತಚಂಡಿಯಾಗ ಮಾಡುತ್ತಾರೆ, ಅದು ಇತ್ತೀಚೆಗೆ ಕೊಲ್ಲೂರಿನಲ್ಲಿ ನಡೆಯಿತು'' ಎಂದು ಹೇಳಿದರು.