ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶ ಮಾಡಲಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ಒತ್ತಾಯಿಸಿದರು.
ವಿಧಾನಸೌಧದ ಮುಂಭಾಗದಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾತನಾಡಿ ''ಕುಡಿಯುವ ನೀರಿನ ಯೋಜನೆಗೆ ಕರ್ನಾಟಕ ನೀರು ಕೇಳಿದರೆ ಕೇಂದ್ರ ಸರಕಾರ ನಿರ್ಲಿಪ್ತವಾಗಿದೆ. ಸ್ವತ: ಸಿಎಂ ಪತ್ರ ಬರೆದು ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಒತ್ತಾಯಿಸಿದ್ದರೂ, ಈವರೆಗೂ ಸ್ಪಂದಿಸಿಲ್ಲ. ಈಗಲಾದರು ಪ್ರಧಾನಿ ಸಭೆ ಕರೆಯುವ ಸೌಜನ್ಯ ಪ್ರದರ್ಶಿಸಲಿ,'' ಎಂದರು.
''ಬಿಜೆಪಿ ಅಧಿಕಾರದಲ್ಲಿದ್ದಾಗ ಮಹದಾಯಿ ಕುರಿತು ಚಕಾರ ಎತ್ತಿರಲಿಲ್ಲ. ಪ್ರತಿಪಕ್ಷದಲ್ಲಿದ್ದ ಕಾರಣ ಈಗ ಪದೇ ಪದೆ ವಿಷಯ ಪ್ರಸ್ತಾಪಿಸುತ್ತಿದೆಯೇ ಹೊರತು ಪರಿಹಾರ ಒದಗಿಸಿಲ್ಲ. ರಾಜ್ಯದಿಂದ ಹೆಚ್ಚು ಸಂಸದರು ಬಿಜೆಪಿಯವರೇ ಆಗಿದ್ದರೂ, ಪ್ರಧಾನಿ ಮೇಲೆ ಒತ್ತಡ ಹೇರುತ್ತಿಲ್ಲ. ಬಿಜೆಪಿ ಮುಖಂಡರಿಗೆ ಮೋದಿ ಎದುರು ಬಾಯಿ ತೆರೆಯುವ ಅವಕಾಶವೇ ಸಿಗುತ್ತಿಲ್ಲ,'' ಎಂದು ಲೇವಡಿ ಮಾಡಿದರು.
''ಯಡಿಯೂರಪ್ಪ ರೈತರ ಮೇಲೆ ಪ್ರಮಾಣ ಮಾಡಿ ಸಿಎಂ ಆದರು. ಅತ್ತ ಹಾವೇರಿಯಲ್ಲಿ ರೈತರ ಮೇಲೆ ಗುಂಡು ಹಾರಿಸಿ ತಮ್ಮ ರೈತ ಕಾಳಜಿ ಪ್ರದರ್ಶಿಸಿದರು. ಅವರ ಹಸಿರು ಶಾಲಿನ ಮೇಲೆ ರಕ್ತದ ಕಲೆಗಳು ಹಾಗೆಯೆ ಉಳಿದಿದ್ದರೂ, ರೈತ ಬಂಧು ಎಂಬ ಬಿರುದು ಪಡೆಯಲು ಮುಂದಾಗಿರುವ ಯಡಿಯೂರಪ್ಪ ನಡೆ ಸರಿಯೇ?,'' ಎಂದು ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.
ಯಡಿಯೂರಪ್ಪ ಎಂಥ ರೈತ ಬಂಧು ಬಿಡ್ರಿ
'ರೈತರ ಮೇಲೆ ಗೋಲಿಬಾರ್ ಮಾಡಿಸಿ ಎರಡು ಜೀವ ತೆಗೆದವರು ರೈತ ಬಂಧುಗಳಾ? ಸಾಲ ಮನ್ನಾ ಮಾಡಿ ಅಂದ್ರೆ ನೋಟ್ಪ್ರಿಂಟ್ ಮಷಿನ್ ಇಲ್ಲ ಎಂದಿದ್ದ ಯಡಿಯೂರ್ಪಪ ಎಂಥ 'ರೈತ ಬಂಧು' ಬಿಡ್ರಿ''.
- ಸಿದ್ದರಾಮಯ್ಯ, ಸಿಎಂ