ಆ್ಯಪ್ನಗರ

ಹುಟ್ಟು ಹಬ್ಬ ಆಚರಿಸಿಕೊಳ್ಳಲು ಹೋಗುವಾಗ ಡಿಕ್ಕಿ: ಯುವಕ ಸಾವು

ಬೆಂಗಳೂರು ನಗರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಸ್ನೇಹಿತರ ಜತೆ ಹುಟ್ಟು ಹಬ್ಬ ಆಚರಿಸಲು ತೆರಳುತ್ತಿದ್ದ ಯುವಕ ಸೇರಿ ಇಬ್ಬರು ಮೃತಪಟ್ಟಿದ್ದು ಓರ್ವ ಗಾಯಗೊಂಡಿದ್ದಾರೆ.

Vijaya Karnataka Web 14 Jul 2018, 10:08 am
ಬೆಂಗಳೂರು: ನಗರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಸ್ನೇಹಿತರ ಜತೆ ಹುಟ್ಟು ಹಬ್ಬ ಆಚರಿಸಲು ತೆರಳುತ್ತಿದ್ದ ಯುವಕ ಸೇರಿ ಇಬ್ಬರು ಮೃತಪಟ್ಟಿದ್ದು ಓರ್ವ ಗಾಯಗೊಂಡಿದ್ದಾರೆ.
Vijaya Karnataka Web bike accident


ಸ್ನೇಹಿತರ ಜತೆ ಹುಟ್ಟು ಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದಾಗ ನೈಸ್‌ ರಸ್ತೆಯಲ್ಲಿ ಬ್ಯಾರಿಕೇಡ್‌ಗೆ ಬೈಕ್‌ ಡಿಕ್ಕಿ ಹೊಡೆದು ಖಾಸಗಿ ಕಂಪನಿ ಉದ್ಯೋಗಿ ಮೃತಪಟ್ಟು, ಆತನ ಸ್ನೇಹಿತ ಗಾಯಗೊಂಡಿರುವ ಘಟನೆ ನೈಸ್‌ ರಸ್ತೆ ಸೋಂಪುರ ಬಳಿ ನಡೆದಿದೆ. ಸುಂಕದಕಟ್ಟೆ ನಿವಾಸಿ ರಂಜಿತ್‌ ಕುಮಾರ್‌(24) ಮೃತಪಟ್ಟಿದ್ದು, ಈತನ ಸ್ನೇಹಿತ ವಿನುತ್‌ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಗುರುವಾರ ರಂಜಿತ್‌ ಹುಟ್ಟು ಹಬ್ಬವಿತ್ತು. ಸ್ನೇಹಿತರ ಜತೆ ಸೇರಿ ರಂಜಿತ್‌ ಸೋಂಪುರದ ನೈಸ್‌ ರಸ್ತೆಯಲ್ಲಿರುವ ವರಹಾ ಸೇತುವೆ ಬಳಿ ಪಾರ್ಟಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಅದಕ್ಕಾಗಿ ರಾತ್ರಿ 9 ಗಂಟೆ ಸುಮಾರಿಗೆ ರಂಜಿತ್‌ ಮತ್ತು ವಿನುತ್‌ ಬೈಕ್‌ನಲ್ಲಿ ತೆರಳುವಾಗ ಸೋಂಪುರ ಟೋಲ್‌ ಗೇಟ್‌ ಬಳಿ ಹಾಕಲಾಗಿದ್ದ ಬ್ಯಾರಿಕೇಡ್‌ ಗಮನಿಸದೆ ಡಿಕ್ಕಿಯಾಗಿದೆ. ರಂಜಿತ್‌ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಾಳು ವಿನುತ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಕುಮಾರಸ್ವಾಮಿ ಲೇಔಟ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಸಾವು

ಟಿಪ್ಪರ್‌ ಲಾರಿ ಹರಿದು ಖಾಸಗಿ ಲೆಕ್ಕ ಪರಿಶೋಧನಾ ಕಂಪನಿಯ ಉದ್ಯೋಗಿ ಕೆ.ಪದ್ಮಾ (46) ಎಂಬುವವರು ಮೃತಪಟ್ಟಿರುವ ಘಟನೆ ಮೈಸೂರು ರಸ್ತೆಯ ನಳಂದ ಚಿತ್ರಮಂದಿರ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಕಾಟನ್‌ಪೇಟೆ ನಿವಾಸಿಯಾಗಿರುವ ಪದ್ಮಾ, ಚಂದ್ರಲೇಔಟ್‌ನಲ್ಲಿರುವ ಕಚೇರಿಗೆ ಶುಕ್ರವಾರ ಬೆಳಗ್ಗೆ 9.30ರ ಸುಮಾರಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್‌, ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಕೆಳಗೆ ಬಿದ್ದ ಮಹಿಳೆ ಮೇಲೆ ಟಿಪ್ಪರ್‌ ಲಾರಿಯ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಚಾಲಕನನ್ನು ಬಂಧಿಸಲಾಗಿದೆ ಎಂದು ಚಿಕ್ಕಪೇಟೆ ಸಂಚಾರ ಠಾಣೆ ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ