ಬೆಂಗಳೂರು : ಐಎಂಎ ವಂಚನೆ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಂಚಕ ಮನ್ಸೂರ್ಖಾನ್ ಮತ್ತೊಂದು ವಿಡಿಯೊ ಬಿಡುಗಡೆ ಮಾಡಿದ್ದು ಈ ಬಾರಿ ಕೂಡ ತಾನು ಭಾರತಕ್ಕೆ ಮರಳಲು ಸಿದ್ಧನಿದ್ದು ಪೊಲೀಸರು ತನಗೆ ರಕ್ಷಣೆ ಕೊಡುತ್ತಾರೆಯೇ ಎಂದು ಪ್ರಶ್ನಿಸಿದ್ದಾನೆ.
ಐಎಂಎ ಕಂಪನಿಯ ಅಧಿಕೃತ ಯು-ಟ್ಯೂಬ್ ಚಾನೆಲ್ನಲ್ಲಿ ವಿಡಿಯೊ ಅಪ್ಲೋಡ್ ಮಾಡಲಾಗಿದ್ದು , ಈ ಹಿಂದೆಯೂ ನಾನು ಭಾರತಕ್ಕೆ ಬರುವುದಾಗಿ ಹೇಳಿದ್ದೆ. ಆದರೆ ಸಕ್ಕರೆ ಕಾಯಿಲೆ ಮತ್ತು ಇನ್ನಿತರೆ ಅನಾರೋಗ್ಯದ ಕಾರಣದಿಂದ ಭಾರತಕ್ಕೆ ಬರಲು ಸಾಧ್ಯ ಆಗಿರಲಿಲ್ಲ. ಈಗ ಮುಂದಿನ 24 ಗಂಟೆಗಳಲ್ಲಿ ನಾನು ಭಾರತಕ್ಕೆ ಬರಲು ತಯಾರಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ವಿಡಿಯೊದಲ್ಲಿ ಏನಿದೆ ?
'ಐಎಂಎ ಗ್ರೂಪ್' ಎಂಬ ಯುಟ್ಯೂಬ್ ಖಾತೆಯಲ್ಲಿ ಹೊಸ ವಿಡಿಯೊ ಅಪ್ಲೋಡ್ ಮಾಡಿರುವ ಮನ್ಸೂರ್ ಖಾನ್, ತಾನು ಪ್ರಾಮಾಣಿಕ, ಇನ್ನೊಬ್ಬರ ಕಾರಣದಿಂದಲೇ ನಾನು ದೇಶ ಬಿಡಬೇಕಾಗಿ ಬಂತು ಎನ್ನುವ ಸಾರ್ವಜನಿಕರ ಅನುಕಂಪ ಗಿಟ್ಟಿಸುವ ಮಾತುಗಳನ್ನು ಆಡಿದ್ದಾನೆ. ವಿಡಿಯೊದ ಮಾತುಗಳು ಹೀಗಿವೆ, ''ನನಗಿರುವ ಕಾಯಿಲೆಯಿಂದ ಹಾಸಿಗೆ ಹಿಡಿದು ಮಲಗುವುದು ಅನಿವಾರ್ಯವಾಗಿತ್ತು.ಹೃದಯದಲ್ಲಿ ಮೂರು ರಂಧ್ರಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಜತೆಗೆ ಸಕ್ಕರೆ ಕಾಯಿಲೆಗೂ ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ಈಗಿರುವ ಸ್ಥಿತಿಯಲ್ಲಿ ನನ್ನ ಬಳಿ ಚಿಕಿತ್ಸಾ ವೆಚ್ಚ ಭರಿಸಲು ಕೂಡ ಹಣ ಇಲ್ಲ. ಹಿಂದಿನ ವಿಡಿಯೊ ಮಾಡಿದ ಬಳಿಕ ನಿತ್ರಾಣವಾಗಿ ಹಾಸಿಗೆ ಹಿಡಿದಿದ್ದೆ. ಈಗ ಸ್ವಲ್ಪ ಚೇತರಿಸಿಕೊಂಡಿರುವ ಕಾರಣದಿಂದ ಮತ್ತೊಂದು ವಿಡಿಯೊ ಮೂಲಕ ನನ್ನ ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಐಎಂಎನಲ್ಲಿ ಹಣ ಹೂಡಿಕೆ ಮಾಡಿರುವವರು ದೇವರನ್ನು ನಂಬಿ. ನನಗೆ ದೇಶದ ಕಾನೂನು ವ್ಯವಸ್ಥೆ ಹಾಗೂ ನ್ಯಾಯಾಂಗ ವ್ಯವಸ್ಥೆ ಮೇಲೆ ಪೂರ್ಣ ನಂಬಿಕೆ ಇದೆ. ಒಂದು ವೇಳೆ ಬೆಂಗಳೂರಿಗೆ ಬಂದರೆ ಪೊಲೀಸರು ಸಮಾಜಘಾತುಕ ಶಕ್ತಿಗಳಿಂದ ನನಗೆ ಸೂಕ್ತ ಭದ್ರತೆ ನೀಡುತ್ತಾರಾ,'' ಎಂದು ಮನ್ಸೂರ್ ಪ್ರಶ್ನಿಸಿದ್ದಾನೆ.
ಕುಟುಂಬ ಸದಸ್ಯರ ಸಂಪರ್ಕವಿಲ್ಲ :
ವಿಡಿಯೊದಲ್ಲಿ ಮಾತನಾಡುತ್ತಲೇ ಕಣ್ಣೀರು ಹಾಕಿರುವ ಮನ್ಸೂರ್ ''ನನಗೆ ನನ್ನ ಕುಟುಂಬ ಸದಸ್ಯರು ಎಲ್ಲಿದ್ದಾರೆ ಎನ್ನುವುದೇ ಗೊತ್ತಿಲ್ಲ. ಅವರು ಹೇಗಿದ್ದಾರೆ ಎನ್ನುವುದೂ ಗೊತ್ತಿಲ್ಲ. ಅವರನ್ನು ಸಂಪರ್ಕಿಸಲೂ ಆಗುತ್ತಿಲ್ಲ . ನಾನು ಈ ಬಾರಿ ಭಾರತಕ್ಕೆ ಬರಲು ಮನಸ್ಸು ಮಾಡಿರುವುದು ಹೂಡಿಕೆದಾರರ ಹಣ ಹಿಂದಿರುಗಿಸಲು ಮತ್ತು ಅಧಿಕಾರಿಗಳಿಗೆ ಸಹಕರಿಸುವ ಉದ್ದೇಶದಿಂದ. ಯಾರಿಂದ ಹಣ ಬರಬೇಕಿದೆ, ಯಾರಿಂದ ಎಷ್ಟು ಹಣ ವಸೂಲಿ ಮಾಡಬೇಕಿದೆ ಎನ್ನುವ ವಿವರವಾದ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದೇನೆ. ಅದನ್ನು ನ್ಯಾಯಾಲಯಕ್ಕೆ ಕೊಡಲು ಸಿದ್ಧನಿದ್ದೇನೆ. ನನ್ನ ಬಳಿಯಿರುವ ಚಿರಾಸ್ಥಿ ಮತ್ತು ಚರಾಸ್ಥಿ ಮಾರಾಟ ಮಾಡಿ ಹೂಡಿಕೆದಾರರಿಗೆ ಅವರ ಹಣವನ್ನು ನ್ಯಾಯಾಂಗದ ಮೂಲಕವೇ ವಾಪಸ್ ನೀಡುತ್ತೇನೆ. ಐಎಂಎ ಆಸ್ತಿ ಇರುವ ಪಟ್ಟಿಯೊಂದನ್ನು ತಯಾರಿಸಿ ಇಟ್ಟುಕೊಂಡಿದ್ದೇನೆ. ಅದನ್ನು ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ನೀಡುತ್ತೇನೆ. ಅದೆಲ್ಲವನ್ನೂ ಮಾರಾಟ ಮಾಡಿ ಹೂಡಿಕೆದಾರರಿಗೆ ಸಂಪೂರ್ಣ ಹಣ ವಾಪಸ್ ಕೊಟ್ಟುಬಿಡಬೇಕೆಂದು ಕೊಂಡಿದ್ದೇನೆ,''ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾನೆ.
ನನಗೆ ವಕೀಲರಿಲ್ಲ
''ನಾನು ಭಾರತಕ್ಕೆ ವಾಪಸ್ಸಾಗುತ್ತಿದ್ದಂತೆ ಕಾನೂನು ಹೋರಾಟ ಮಾಡಲು ಸಿದ್ಧನಾಗಿದ್ದೇನೆ. ಆದರೆ ಸದ್ಯ ನನ್ನ ಪರ ವಕಾಲತು ವಹಿಸಲು ವಕೀಲರು ಇಲ್ಲದ ಸ್ಥಿತಿ ಇದೆ. ಭಾರತಕ್ಕೆ ವಾಪಸ್ಸಾದ ಮೇಲಾದರೂ ವಕೀಲರ ವ್ಯವಸ್ಥೆ ಆಗಬಹುದು ಎನ್ನುವ ನಂಬಿಕೆಯಲ್ಲಿದ್ದೇನೆ. ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದವರ ಮೇಲೆ ದೇವರ ಕೃಪೆ ಇದೆ. ಕಂಪನಿಯ ಆಸ್ತಿ ಹಾಗೂ ಹಣವನ್ನೆಲ್ಲ ಜಪ್ತಿ ಮಾಡಿಸಿ, ಗ್ರಾಹಕರ ಖಾತೆಗೆ ನೇರವಾಗಿ ಜಮೆ ಮಾಡುತ್ತೇನೆ,'' ಎಂದು ಮನ್ಸೂರ್ ವಿಡಿಯೊದಲ್ಲಿ ಹೇಳಿಕೊಂಡಿದ್ದಾನೆ.
ತನಿಖೆ ಹಾದಿತಪ್ಪಿಸುವ ಯತ್ನ
ಜೂ.23 ರಂದು ಮೊದಲ ವಿಡಿಯೊ ಬಿಡುಗಡೆ ಮಾಡಿದ್ದ ಮನ್ಸೂರ್ ಆಗಲೂ ತಾನು ಭಾರತಕ್ಕೆ ವಾಪ್ಸಾಗುತ್ತಿದ್ದು ಅಧಿಕಾರಿಗಳು ನನಗೆ ರಕ್ಷಣೆ ನೀಡುತ್ತಾರೆಯೇ ಎಂದೇ ಪ್ರಶ್ನಿಸಿದ್ದ. ಆ ಪ್ರಶ್ನೆಗೆ ಉತ್ತರಿಸಿದ್ದ ಎಸ್ಐಟಿ ಮುಖ್ಯಸ್ಥರಾದ ಡಿಐಜಿ ರವಿಕಾಂತೇಗೌಡರು, ''ಆತ ತನ್ನನ್ನು ಕಾನೂನಿಗೆ ಒಪ್ಪಿಸಿಕೊಳ್ಳಲು ಸಿದ್ಧನಿದ್ದರೆ ಅವನಿಗೆ ಮತ್ತು ಅವನ ಕುಟುಂಬಕ್ಕೆ ಅಗತ್ಯವಾದ ಎಲ್ಲಾ ರೀತಿಯ ರಕ್ಷಣೆಯನ್ನೂ ಎಸ್ಐಟಿ ಕೊಡಲಿದೆ,'' ಎಂದು ಮಾಧ್ಯಮಗಳ ಮೂಲಕವೇ ತಿಳಿಸಿದ್ದರು. ಆ ಬಳಿಕವೂ ಭಾರತಕ್ಕೆ ಬಾರದ ಆರೋಪಿಯು ಮತ್ತೊಂದು ವಿಡಿಯೊ ಮಾಡಿ ಕೇವಲ ಜನರ ಅನುಕಂಪ ಗಿಟ್ಟಿಸಿ, ತನಿಖೆಯ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದ್ದಾನೆ,'' ಎಂದು ಎಸ್ಐಟಿ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ರೋಷನ್ ಬೇಗ್ಗೆ ಮತ್ತೊಂದು ನೋಟಿಸ್
ಐಎಂಎ ಕಂಪನಿಯಿಂದ ಹಣ ಪಡೆದಿರುವ ಆರೋಪ ಹೊತ್ತಿರುವ ಶಾಸಕ ರೋಷನ್ ಬೇಗ್ ಸೋಮವಾರವೂ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಲಿಲ್ಲ. ಮೊದಲ ನೋಟಿಸ್ ನೀಡಿದಾಗ ಪತ್ನಿಯ ಆರೋಗ್ಯದ ನೆಪ ಹೇಳಿ 15 ದಿನ ಸಮಯಾವಕಾಶ ಕೇಳಿದ್ದರು.ಅದಕ್ಕೆ ಒಪ್ಪದ ಎಸ್ಐಟಿ ಕೇವಲ ಒಂದು ವಾರ ಕಾಲಾವಕಾಶ ನೀಡಿ ಸೋಮವಾರವೇ ವಿಚಾರಣೆಗೆ ಬರಬೇಕು ಎಂದು ನೋಟಿಸ್ ನೀಡಿತ್ತು. ಆದರೆ ಸೋಮವಾರ ಕೂಡ ವಿಚಾರಣೆಗೆ ಹಾಜರಾಗದ ಬೇಗ್,, ಹುಟ್ಟು ಹಬ್ಬ ಹಾಗೂ ತಮ್ಮ ಆರೋಗ್ಯದ ನೆಪ ಹೇಳಿ ಜು.25ರ ಬಳಿಕ ವಿಚಾರಣೆಗೆ ಹಾಜರಾಗುವುದಾಗಿ ಎಸ್ಐಟಿ ಎದುರು ಸಮಯಾವಕಾಶ ಕೇಳಿದ್ದರು. ಇದಕ್ಕೆ ಒಪ್ಪದ ಎಸ್ಐಟಿ ಜು.19ರಂದು ವಿಚಾರಣೆಗೆ ಹಾಜರಾಗಲು ಮತ್ತೊಂದು ನೋಟಿಸ್ ಜಾರಿ ಮಾಡಿದೆ.