ಆ್ಯಪ್ನಗರ

ಕಾಂಗ್ರೆಸ್‌ನ ಮೇಕೆದಾಟು ಹೋರಾಟಕ್ಕೆ ಮೆತ್ತಗಾದ ಸರ್ಕಾರ? ಸರ್ವಪಕ್ಷ ಸಭೆ ಕರೆದ ಬಸವರಾಜ ಬೊಮ್ಮಾಯಿ

ಮೇಕೆದಾಟು ಯೋಜನೆ ಈಗ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪ್ರತಿಷ್ಠೆಯಾಗಿದೆ. ಈ ಬಗ್ಗೆ ಮುಂದಿನ ವಾರ ಸರ್ವಪಕ್ಷ ಸಭೆ ಕರೆದು ಯೋಜನೆ ಜಾರಿ ಬಗ್ಗೆ ಚರ್ಚಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ. ಸರ್ವಪಕ್ಷ ಸಭೆಯ ನಿರ್ಣಯ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

Reported byಇರ್ಷಾದ್ ಉಪ್ಪಿನಂಗಡಿ | Edited byಅವಿನಾಶ ವಗರನಾಳ | Vijaya Karnataka Web 8 Mar 2022, 5:32 pm

ಹೈಲೈಟ್ಸ್‌:


  • ಮೇಕೆದಾಟು ಯೋಜನೆಯಲ್ಲಿ ಕಾಂಗ್ರೆಸ್‌ನ ಹೋರಾಟಕ್ಕೆ ಮೆತ್ತಗಾಯ್ತಾ ಸರ್ಕಾರ
  • ಮುಂದಿನ ವಾರ ಸರ್ವಪಕ್ಷ ಸಭೆ ಕರೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
  • ಸರ್ವಪಕ್ಷ ಸಭೆಯ ನಿರ್ಣಯ ಆಧರಿಸಿ ಮುಂದಿನ ಕ್ರಮ ಎಂದು ಸಿಎಂ ಬೊಮ್ಮಾಯಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Basavaraj Bommai
ಬೆಂಗಳೂರು: ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ‌ ಮುಂದಿನ ವಾರ ಸರ್ವಪಕ್ಷಗಳ ಸಭೆ ಕರೆಯುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ಜಾರಿ ಬಗ್ಗೆ ಸಿದ್ದರಾಮಯ್ಯ ಆರೋಪಕ್ಕೆ ಉತ್ತರಿಸಿದ ಸಿಎಂ, ಈ ವಿಚಾರವಾಗಿ ಚರ್ಚೆ ನಡೆಸಲು ಮುಂದಿನ ವಾರ ಸರ್ವ ಪಕ್ಷಗಳ ಸಭೆ ಕರೆಯುತ್ತೇನೆ. ನಾವೆಲ್ಲರೂ ಸೇರಿ ಅಭಿಪ್ರಾಯ ರೂಪಿಸಿ ಮುಂದುವರಿಸಬೇಕು.‌ ಒಂದು ವಾರದ ಒಳಗಡೆ ಸಭೆ ಕರೆಯುತ್ತೇನೆ ಎಂದರು.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಮಿಳುನಾಡು ಹಾಗೂ ಕರ್ನಾಟಕ ಪರಸ್ಪರ ಮಾತುಕತೆ ನಡೆಸಿ ಬಗೆಹರಿಸಬೇಕು ಎಂದಿದ್ದಾರೆ. ಸಿಎಂ ಸಭೆಯಲ್ಲಿ ಇದ್ದರೂ ಇದಕ್ಕೆ ಏಕೆ ಉತ್ತರ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಜಲಜೀವನ್ ಮಿಷನ್ ಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಆಗಿಲ್ಲ. ಬಳಿಕ ಸುದ್ದಿಗೋಷ್ಠಿಯಲ್ಲಿ ಈ‌ ಮಾತು ಹೇಳಿದ್ದಾರೆ. ಮೇಕೆದಾಟು ವಿಚಾರವಾಗಿ ಚರ್ಚೆ ಆಗುತ್ತಿದೆ.‌ ಮೇಕೆದಾಟು ಯೋಜನೆಗೆ ಪರಿಸರ ಅನುಮತಿ ಪ್ರಯತ್ನವೂ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನಲ್ಲೂ ಪ್ರಕರಣ ಇದೆ ಎಂದರು.


ಇದರೆಲ್ಲದ ನಡುವೆ ಮೇಕೆದಾಟು ಯೋಜನೆಗೆ ಡಿಪಿಆರ್ ಅಪ್ರೂವಲ್ ಹಾಗೂ ಪರಿಸರ ಅನುಮತಿ ಪಡೆಯಬೇಕಾದದ್ದು‌ ನಮ್ಮ ಮುಂದಿರುವ ಟಾಸ್ಕ್. ಯೋಜನೆಯ ಬಗ್ಗೆ ಕಾನೂನು ಅಂಶಗಳ ಬಗ್ಗೆ ತಜ್ಞರ ಜೊತೆ ಚರ್ಚೆ ನಡೆಸಲಾಗಿದೆ. ತಮಿಳುನಾಡು ಯಾವುದೇ ಯೋಜನೆಗೂ ವಿರೋಧ ಮಾಡುತ್ತದೆ. ಅದರ ಹಿಂದೆ ರಾಜಕೀಯ ಇದೆ.‌ ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಸರ್ವ ಪಕ್ಷದ ಸಭೆಯ ನಿರ್ಣಯ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೇಕೆದಾಟು ಯೋಜನೆ: ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಕೇಂದ್ರ ಸಚಿವರ ಹೇಳಿಕೆ! ಸದನದಲ್ಲಿ ಪ್ರಸ್ತಾಪಕ್ಕೆ ‘ಕೈ’ ಚಿಂತನೆ
ಮೇಕೆದಾಟು ವಿಚಾರವಾಗಿ, ತಮಿಳುನಾಡು ಜೊತೆಗೆ ಮಾತುಕತೆ ವಿಚಾರ ನಮ್ಮ ಮುಂದೆ ಇಲ್ಲ. ಡಿಪಿಆರ್ ಅನುಮತಿ ಪಡೆದುಕೊಳ್ಳುವುದು ಹಾಗೂ ಪರಿಸರ ಇಲಾಖೆಯ ಅನುಮತಿ ಪಡೆದುಕೊಳ್ಳುವುದು ನಮ್ಮ ಮುಂದಿನ ಅಜೆಂಡಾ ಹಾಗೂ ಕೆಲಸ. ನಾನು‌ ಸಿಎಂ ಆದ ಬಳಿಕ ಮೂರು ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಮೇಕೆದಾಟು ಸಂಬಂಧ ರಾಜ್ಯಗಳು ಮಾತುಕತೆಗೆ ಆಸಕ್ತಿ ವ್ಯಕ್ತಪಡಿಸಿದರೆ ಮಧ್ಯಸ್ಥಿಕೆಗೆ ಕೇಂದ್ರ ಸಿದ್ಧ - ಗಜೇಂದ್ರ ಸಿಂಗ್ ಶೇಖಾವತ್
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಸಮಸ್ಯೆ ಇಲ್ಲ, ಇದು ಕುಡಿಯುವ ನೀರಿನ ಯೋಜನೆ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಸರ್ವ ಪಕ್ಷದ ಸಭೆಯ ನಿರ್ಣಯವನ್ನು ಕೂಡಾ ಕೇಂದ್ರಕ್ಕೆ ಬರೆಯುತ್ತೇನೆ. ಸಭೆಯ ಬಳಿಕ ನಾನು ಹೋಗಿ ಡಿಪಿಆರ್ ಅನುಮತಿಯನ್ನು ಪಡೆದು ಕೆಲಸ ಕಾರ್ಯ ಆರಂಭಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ನೀಡಿದರು.

Mekedatu: ಎಲ್ಲ ನಾವೇ ಮಾಡಿಕೊಳ್ಳೋದಾದ್ರೆ ಇವರು ಏಕೆ ಬೇಕು? ಕೇಂದ್ರ ಸಚಿವರ ಹೇಳಿಕೆಗೆ ಡಿಕೆ ಶಿವಕುಮಾರ್‌ ಆಕ್ರೋಶ
ರಾಜೀನಾಮೆ ನೀಡಲಿ ಎಂದಿದ್ದ ಡಿಕೆ ಶಿವಕುಮಾರ್‌!
ಮೇಕೆದಾಟು ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ನಿರಂತರ ಕಿಡಿಕಾರುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಕೇಂದ್ರ ಜಲಶಕ್ತಿ ಸಚಿವರು ಸಂಧಾನದ ಮಾತುಕತೆ ಆಡಿದಾಗ ಸಿಎಂ ಮೌನವಹಿಸಿದ್ದಾರೆ. ಅದರ ಬಗ್ಗೆ ಉತ್ತರಿಸಲಿ. ಇಲ್ಲದಿದ್ದರೆ ರಾಜೀನಾಮೆ ನೀಡಿ ಹೋಗಲಿ ಎಂದಿದ್ದರು. ಎಲ್ಲ ನಾವೇ ಮಾಡಿಕೊಳ್ಳುವ ರೀತಿ ಇದ್ದಿದ್ದರೆ, ಕೇಂದ್ರ ಸರ್ಕಾರ ಏಕೆ ಬೇಕಿತ್ತು ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದರು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ