Please enable javascript.ರಾಜ್ಯದ ಗ್ರಾಮ ಹಾಗೂ ನಗರಗಳಲ್ಲಿ ಕೊಳವೆ ಬಾವಿಗಳಿಗೂ ಕನಿಷ್ಟ ಶುಲ್ಕ ನಿಗದಿ ಮಾಡಬೇಕು - ಡಿಸಿಎಂ ಡಿಕೆ ಶಿವಕುಮಾರ್ - minimum charges should be fixed for borewells in villages and cities of the state said dcm dk shivakumar - Vijay Karnataka

ರಾಜ್ಯದ ಗ್ರಾಮ ಹಾಗೂ ನಗರಗಳಲ್ಲಿ ಕೊಳವೆ ಬಾವಿಗಳಿಗೂ ಕನಿಷ್ಟ ಶುಲ್ಕ ನಿಗದಿ ಮಾಡಬೇಕು - ಡಿಸಿಎಂ ಡಿಕೆ ಶಿವಕುಮಾರ್

Authored by ಜಯಪ್ರಕಾಶ್‌ ಬಿರಾದಾರ್‌ | Vijaya Karnataka Web 28 Nov 2023, 7:08 pm
Subscribe

Government Ready To Minimum Charges For Borewell: ಕೊಳವೆ ಬಾವಿಗಳ ಲೆಕ್ಕ ಮತ್ತು ಅವುಗಳ ಬಳಕೆ ಉದ್ದೇಶವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಕಡ್ಡಾಯವಾಗಿ ಕನಿಷ್ಟ ಶುಲ್ಕ ವಿಧಿಸಬೇಕು ಎಂದು ಸ್ಥಳೀಯ ಸಂಸ್ಥೆಗಳಿಗೆ ಡಿಸಿಎಂ ಡಿಕೆ ಶಿವಕುಮಾರ್‌ ತಿಳಿಸಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೈಲೈಟ್ಸ್‌:

  • ಕುಡಿಯುವ ನೀರು, ಒಳಚರಂಡಿ, ತ್ಯಾಜ್ಯ ವಿಲೇವಾರಿ, ನೈರ್ಮಲ್ಯಕ್ಕಾಗಿ ಸ್ಥಳೀಯ ಸಂಸ್ಥೆಗಳಿಗೆ 2000 ಕೋಟಿ ರೂ. ಅನುದಾನ.
  • ಕೊಳವೆ ಬಾವಿ ಕೊರೆಯಲು ಅನುಮತಿ ಸೇರಿದಂತೆ ಇತರೇ ಮಾರ್ಗಸೂಚಿಗಳನ್ನು ಅಧಿಕಾರಿಗಳು ಅನುಸರಿಸಬೇಕು ಎಂದು ಡಿಸಿಎಂ ಸೂಚನೆ.
  • ಕೊಳವೆ ಬಾವಿಗಳಿಗೆ ಕನಿಷ್ಟ ರೂ. 50 ಶುಲ್ಕ ನಿಗದಿ ಮಾಡಬೇಕು ಎಂದ ಡಿಕೆ ಶಿವಕುಮಾರ್‌.
bb (5)
ಸಾಂದರ್ಭಿಕ ಚಿತ್ರ
ಬೆಂಗಳೂರು: " ಕೊಳವೆ ಬಾವಿ ಕೊರೆಯಲು ಅನುಮತಿ ಸೇರಿದಂತೆ ಇತರೇ ಮಾರ್ಗಸೂಚಿಗಳನ್ನು ಅಧಿಕಾರಿಗಳು ಅನುಸರಿಸಬೇಕು. ಇನ್ನು ಕೊಳವೆ ಬಾವಿಗಳಿಗೆ ಕನಿಷ್ಟ ರೂ. 50 ಶುಲ್ಕ ನಿಗದಿ ಮಾಡಬೇಕು ಎಂದು '' ಡಿಕೆ ಶಿವಕುಮಾರ್‌ ಅವರು ತಿಳಿಸಿದರು.
ನಗರದ ಅರಮನೆ ಮೈದಾನದಲ್ಲಿ ನಡೆದ 17 ನೇ ಅಂತರರಾಷ್ಟ್ರೀಯ ಮುನಿಸಿಪಾಲಿಕ- 23 ಸಮ್ಮೇಳನದ ವಸ್ತುಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು. ಆದಾಯ ಹೆಚ್ಚಳ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ನಾನು, ಬೈರತಿ ಸುರೇಶ್ ಮತ್ತು ಪೌರಾಡಳಿತ ಸಚಿವರಾದ ರಹೀಂಖಾನ್ ಅವರು ಸೇರಿ ಸಭೆ ನಡೆಸಿ ಸೂಕ್ತ ತೀರ್ಮಾನಕ್ಕೆ ಬರುತ್ತೇವೆ ಎಂದರು.

ಪ್ರತಿ ಊರಿನಲ್ಲಿ ಎಷ್ಟು ಕೊಳವೆಬಾವಿಗಳನ್ನು ಕೊರೆಯುತ್ತಿದ್ದಾರೆ, ಎಷ್ಟು ಆಳ ಕೊರೆಯುತ್ತಿದ್ದಾರೆ ಎನ್ನುವ ಲೆಕ್ಕ ಸ್ಥಳೀಯ ಸಂಸ್ಥೆಗಳ ಬಳಿ ಇರಬೇಕು. ಕೊಳವೆ ಬಾವಿ ಕೊರೆಯಲು ಅನುಮತಿ ಸೇರಿದಂತೆ ಇತರೇ ಮಾರ್ಗಸೂಚಿಗಳನ್ನು ಅಧಿಕಾರಿಗಳು ಅನುಸರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಈ ಬಗ್ಗೆ ಮಾರ್ಗಸೂಚಿಗಳಿದ್ದು ಇದನ್ನು ಸರಿಯಾಗಿ ಪಾಲಿಸಬೇಕು ಎಂದು ತಿಳಿಸಿದರು.

ಕೊಳವೆ ಬಾವಿಗೆ ಕನಿಷ್ಟ ಶುಲ್ಕ ನಿಗದಿ ಮಾಡಿ

ಕನಿಷ್ಟ ರೂ. 50 ಶುಲ್ಕ ನಿಗದಿ ಮಾಡಿದರೆ, ಒಟ್ಟು ಕೊಳವೆಬಾವಿಗಳ ಲೆಕ್ಕ ಸರ್ಕಾರಕ್ಕೆ ಸಿಗುತ್ತದೆ. ಜನರಿಂದ ಹಣ ವಸೂಲಿ ಮಾಡಬೇಕು ಎನ್ನುವ ಅರ್ಥದಲ್ಲಿ ನಾನು ಹೇಳುತ್ತಿಲ್ಲ ಹಾಗೂ ಈ ಹಣದಿಂದ ಸರ್ಕಾರಕ್ಕೆ ಯಾವುದೇ ಆದಾಯ ಬರುವುದಿಲ್ಲ ಆದರೆ ಕೃಷಿ, ಗೃಹೋಪಯೋಗಿ, ವಾಣಿಜ್ಯ ಬಳಕೆಗೆ ಎಷ್ಟು ಕೊಳವೆಬಾವಿಗಳನ್ನು ಬಳಸಲಾಗುತ್ತಿದೆ ಎನ್ನುವ ಮಾಹಿತಿ ದೊರೆಯುತ್ತದೆ ಎಂದು ಡಿಸಿಎಂ ತಿಳಿಸಿದರು.

"ಇತ್ತೀಚಿನ ದಿನಗಳಲ್ಲಿ ಪಂಪ್ ಮಾಡಿ ನೀರನ್ನು ತರುವ ವೆಚ್ಚ ಹೆಚ್ಚುತ್ತಿದ್ದು, ಕಳೆದ 12 ವರ್ಷಗಳಿಂದ ಬೆಂಗಳೂರಿನಲ್ಲಿ ನೀರಿನ ದರವನ್ನು ರಾಜಕೀಯ ಕಾರಣಗಳಿಂದ ಏರಿಕೆ ಮಾಡಿಲ್ಲ. ನೀರು ಅತ್ಯಮೂಲ್ಯವಾದುದು. ಆದ ಕಾರಣ ಲೆಕ್ಕಾಚಾರದಿಂದ ಸ್ಥಳೀಯ ಸಂಸ್ಥೆಗಳು ನೀರು ಸರಬರಾಜು ಮಾಡಬೇಕು'' ಎಂದು ಸೂಚಿಸಿದರು.

ನೀರಿನ ಬಳಕೆ ಲೆಕ್ಕಾಚಾರ ಜನಪ್ರತಿನಿಧಿಗಳ ಬಳಿ ಇರಬೇಕು

ಪ್ರತಿಯೊಂದು ಹನಿ ನೀರನ್ನು ಜವಾಬ್ದಾರಿಯುತವಾಗಿ ಬಳಸುವ ಕೆಲಸವಾಗಬೇಕಿದೆ. ಇದು ಸ್ಥಳೀಯ ಸಂಸ್ಥೆಗಳ ಮೊದಲ ಆದ್ಯತೆಯಾಗಬೇಕಿದೆ. ಕೆಲವು ಪಟ್ಟಣಗಳಲ್ಲಿ ವಾರಕ್ಕೊಮ್ಮೆ ನೀರು ಸರಬರಾಜು ಮಾಡುವ ಪರಿಸ್ಥಿತಿಯಿದೆ. ಕುಡಿಯುವ ನೀರನ್ನೇ ಬಟ್ಟೆ, ವಾಹನ, ಮನೆ ತೊಳೆಯಲು ಬಳಸುತ್ತಿದ್ದಾರೆ. ಅತ್ಯಮೂಲ್ಯವಾದ ನೀರನ್ನು ಹೀಗೆ ಬಳಸಬಾರದು ಎಂದು ಜನರಲ್ಲಿ ಅರಿವು ಮೂಡಿಸಬೇಕು. ಅಂತರ್ಜಲ ನೀರಿನ ಬಳಕೆ, ಅದರ ಮಾಲಿನ್ಯದ ವಿರುದ್ದ ಜಾಗೃತಿ ಮೂಡಿಸಬೇಕು. ಹನಿ ನೀರಿನ ಬಳಕೆಯ ಲೆಕ್ಕಾಚಾರವೂ ಜನಪ್ರತಿನಿಧಿಗಳ ಬಳಿ ಇರಬೇಕು ಎಂದರು.

2 ಸಾವಿರ ಕೋಟಿ ರೂ. ನಿಗದಿ

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಒಳಚರಂಡಿ, ನೈರ್ಮಲ್ಯಕ್ಕಾಗಿ ಸುಮಾರು 2 ಸಾವಿರ ಕೋಟಿ ರೂ. ಹಣ ನಿಗದಿ ಮಾಡಲಾಗಿದೆ" ಎಂದು ಹೇಳಿದರು.

ಬೆಂಗಳೂರು ಆಸ್ತಿ ಡಿಜಿಟಲೀಕರಣ

ರೈತ ಹಾಲು ಉತ್ಪಾದಿಸಲು ಸಾಕಷ್ಟು ಶ್ರಮವಹಿಸಿದರು, ಒಂದು ಲೀಟರ್ ಹಾಲಿಗೆ 35- 40 ರೂಪಾಯಿ ಸಿಗುತ್ತದೆ. ಆದರೆ ನೀರಿನ ಬಾಟಲಿಗೆ 20 ರೂ ನೀಡುತ್ತಿದ್ದೇವೆ. ಶುದ್ಧ ಕುಡಿಯುವ ನೀರಿನ ಬಗ್ಗೆ ಸ್ಥಳೀಯ ಸಂಸ್ಥೆಗಳು ಸಾಕಷ್ಟು ಕ್ರಮ ವಹಿಸಬೇಕು. ಬಿಡಿಎ, ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳು ಇದಕ್ಕೆ ಒಳಪಡಲಿದ್ದು, ಬೆಂಗಳೂರಿನ ಆಸ್ತಿ ಪತ್ರ ಮತ್ತು ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಕೆಲವೇ ದಿನಗಳಲ್ಲಿ ಸ್ವತ್ತಿನ ಪತ್ರಗಳನ್ನು ಜನರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲಾಗುವುದು ಎಂದು ಹೇಳಿದರು.

ನವದೆಹಲಿ, ಚಂಡೀಗಡದಂತೆ ನಮ್ಮ ರಾಜ್ಯಗಳಲ್ಲಿ ಯೋಜಿತವಾದ ನಗರಗಳಿಲ್ಲ. 20 ವರ್ಷಗಳ ಹಿಂದೆಯೇ ಕಾಂಗ್ರೆಸ್ ಸರ್ಕಾರ ಭೂಮಿ ತಂತ್ರಾಶದ ಮೂಲಕ ಪಹಣಿ ನೀಡುವ ಯೋಜನೆ ಜಾರಿಗೆ ತಂದಿತ್ತು. ಪ್ರಸ್ತುತ ಆಸ್ತಿಮೌಲ್ಯವನ್ನು ನಿಖರವಾಗಿ ಲೆಕ್ಕಾಚಾರ ಮಾಡಲು ಅನೇಕ ತಂತ್ರಜ್ಞಾನಗಳು ನಮ್ಮ ನಡುವೆ ಇವೆ. ಡ್ರೋನ್ ಸೇರಿದಂತೆ ಇತರೇ ತಂತ್ರಜ್ಞಾನ ಬಳಸಿ ನಿಖರವಾಗಿ ಆಸ್ತಿಮೌಲ್ಯವನ್ನು ಲೆಕ್ಕ ಹಾಕಲಾಗುವುದು. ಸರ್ಕಾರದಿಂದ ಬರಬೇಕಾದ ಅನುದಾನ ಜನಸಂಖ್ಯೆಗೆ ಅನುಗುಣವಾಗಿ ಬಂದೇ ಬರುತ್ತದೆ. ಆದರೆ, ಹೆಚ್ಚಿನ ತೆರಿಗೆ ಸಂಗ್ರಹದ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದಲ್ಲಿ ಇರುವವರು ಅವರ ಕ್ಷೇತ್ರಗಳನ್ನು ಆರ್ಥಿಕವಾಗಿ ಸದೃಢ ಮಾಡಬೇಕು. ನಿಮ್ಮ ಆದಾಯವನ್ನು ನೀವೆ ಉತ್ಪತ್ತಿ ಮಾಡಿಕೊಂಡು, ಸರ್ಕಾರದ ಯಾವುದೇ ಸಹಾಯವೇ ಇಲ್ಲದೇ ಬಲಿಷ್ಠವಾಗಬೇಕು ಎಂದರು.

ಅರ್ಧದಷ್ಟು ಜನ ನಗರದಲ್ಲಿ ವಾಸ

ಕರ್ನಾಟಕದ ಜನಸಂಖ್ಯೆಯ 7 ಕೋಟಿ ಶೇ 40 ರಷ್ಟು ಅಂದರೆ 3.25 ಕೋಟಿ ಜನರು ನಗರ ಪ್ರದೇಶಗಳಲ್ಲಿ ವಾಸವಿದ್ದಾರೆ. ಬೆಂಗಳೂರಿನ ಜನಸಂಖ್ಯೆ 1 ಕೋಟಿ 40 ಲಕ್ಷಕ್ಕೆ ಮುಟ್ಟಿದೆ. ಏಕೆ ಜನರು ನಗರ ಪ್ರದೇಶಗಳಿಗೆ ಬರುತ್ತಿದ್ದಾರೆ ಎನ್ನುವ ಕುರಿತು ನಾವೆಲ್ಲಾ ಯೋಚನೆ ಮಾಡಬೇಕಿದೆ.
 ಜಯಪ್ರಕಾಶ್‌ ಬಿರಾದಾರ್‌
ಲೇಖಕರ ಬಗ್ಗೆ
ಜಯಪ್ರಕಾಶ್‌ ಬಿರಾದಾರ್‌
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. ಚಿನ್ನದ ಪದಕದೊಂದಿಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಆರು ವರ್ಷಗಳಿಂದ ರಾಜ್ಯಮಟ್ಟದ ವಿವಿಧ ಪತ್ರಿಕೆಗಳಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ಆರೋಗ್ಯ, ಅರಣ್ಯ, ಸಾರಿಗೆ, ರಾಜಕೀಯ, ಕೊರೊನಾ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯದ ಕುರಿತು ಒಂದು ಸಾವಿರಕ್ಕೂ ಅಧಿಕ ವಿಶೇಷ ವರದಿಗಳನ್ನು ಬರೆದಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೊಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ