ಆ್ಯಪ್ನಗರ

ಪ್ರತಿಭಟಿಸಿ ಪ್ರತಿಕೃತಿ ದಹಿಸಿದರೆ ಅದನ್ನು ಸ್ವಚ್ಛಗೊಳಿಸುವೆ ಎಂದ ಸಚಿವ ಡಿ.ಕೆ.ಶಿವಕುಮಾರ್‌

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಯುವುದೇ ನನ್ನ ಗುರಿ...

Vijaya Karnataka Web 6 Jul 2019, 5:00 am
ಕನಕಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಯುವುದೇ ನನ್ನ ಗುರಿ. ಇದಕ್ಕಾಗಿ ಯಾರು ಏನೇ ಆರೋಪಿಸಲಿ, ಪ್ರತಿಭಟನೆ ಮಾಡಲಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ವಿರುದ್ಧ ಪ್ರತಿಭಟನೆ ನಡೆಸಿ ಪ್ರತಿಕೃತಿ ದಹಿಸಿದರೆ, ಬೇಸರ ಮಾಡಿಕೊಳ್ಳದೇ ಅದನ್ನು ಸ್ವಚ್ಛಗೊಳಿಸುವೆ.
Vijaya Karnataka Web dks


-ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ ಮಾತು. ಕನ್ನಡ ಮತ್ತು ಸಂಸ್ಕೃತಿ ಖಾತೆಯಿಂದ ತಮ್ಮನ್ನು ಬದಲಿಸಬೇಕು ಎಂದು ಆಗ್ರಹಿಸಿ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಅವರು ನೀಡಿದ ಪ್ರತಿಕ್ರಿಯೆ ಇದು.

ಸುದ್ದಿಗಾರರ ಜತೆ ಮಾತನಾಡಿದ ಅವರು, ''ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಪ್ರತಿ ವರ್ಷ 20 ಕೋಟಿ ಹಣ ಲೂಟಿಯಾಗುತ್ತಿದೆ. ಕಲಾವಿದರೆಂಬ ವೇಷ ತೊಟ್ಟವರು ಹಣ ಲೂಟಿ ಮಾಡುತ್ತಿದ್ದವರ ಕಳ್ಳಾಟ ಬಯಲಾಗಿದೆ. ಅದನ್ನು ತಡೆಯದೇ ನಾನು ಸುಮ್ಮನುಳಿಯುವುದಿಲ್ಲ. ಇದಕ್ಕಾಗಿ ಎಂತಹ ಉಗ್ರ ಪ್ರತಿಭಟನೆ ಎದುರಿಸಬೇಕಾಗಿ ಬಂದರೂ ತಲೆ ಕೆಡಿಸಿಕೊಳ್ಳುವುದಿಲ್ಲ,'' ಎಂದರು.

ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್‌:

''ಇಲಾಖೆಯ ಅಧಿಕಾರಿಗಳನ್ನು ಬೆದರಿಸಿ ಬ್ಲ್ಯಾಕ್‌ಮೇಲ್‌ ಮಾಡಿ ಸರಕಾರದ ಬೊಕ್ಕಸದ ಹಣವನ್ನು ಕೊಳ್ಳೆ ಹೊಡೆದು ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಇದನ್ನು ತಡೆಯುವ ಉದ್ದೇಶದಿಂದಲೇ ನೂತನ ನಿಯಮ ಜಾರಿಗೆ ತಂದಿದ್ದೇನೆ. ರಾಜ್ಯದಲ್ಲಿ ನಿಜವಾದ ಕಲಾವಿದರು ಉಳಿಯಬೇಕು ಅದಕ್ಕೆ ತಕ್ಕ ವೇದಿಕೆ ಮತ್ತು ಸಹಕಾರ ಬೇಕು ಆಗ ಮಾತ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಅದಕ್ಕಾಗಿ ಪ್ರತಿ ತಾಲೂಕು ಕೇಂದ್ರದಲ್ಲಿ ಇಲಾಖೆಯಿಂದಲೇ, ಎಲ್ಲವನ್ನು ನಿರ್ವಹಿಸುವಂತೆ ಮಾಡುವ ಹೊಸ ನಿಯಮ ಜಾರಿಗೆ ತರಲಾಗಿದೆ. ಇದನ್ನು ವಿರೋಧಿಸುವ ಕೆಲವರ ಪಟ್ಟಿ ನನ್ನ ಬಳಿ ಇದೆ. ಯಾರು ಹತ್ತು ವರ್ಷಗಳಿಂದ ಎಷ್ಟು ಹಣ ಪಡೆದಿದ್ದಾರೆ ಎಂದು ತಿಳಿದಿದೆ ಅದನ್ನು ಬಿಡುಗಡೆ ಮಾಡುತ್ತೇನೆ,'' ಎಂದರು.

ನೇರ ಚರ್ಚೆಗೆ ಬನ್ನಿ:

''ನನ್ನ ವಿರುದ್ಧ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗುತ್ತಿರುವವರು ನೇರ ಚರ್ಚೆಗೆ ಬರಲಿ, ಆಗ ಅವರಿಗೆ ಉತ್ತರ ನೀಡುತ್ತೇನೆ, ಇಲ್ಲದಿದ್ದರೆ ಅವರೇ ನನ್ನ ಸ್ಥಾನದಲ್ಲಿ ಕುಳಿತು ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಲಿ. ಅದನ್ನು ಬಿಟ್ಟು ಇಲಾಖೆಯ ಹಣ ದುರುಪಯೋಗವಾಗಲು ಬಿಡುವುದಿಲ್ಲ ,''ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ