ಆ್ಯಪ್ನಗರ

ತೆರಿಗೆ ವಂಚನೆ: ಸಚಿವ ಡಿಕೆಶಿಗೆ ಜಾಮೀನು ಮಂಜೂರು

ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ಗೆ ಜಾಮೀನು ಮಂಜೂರು

Vijaya Karnataka Web 23 Mar 2018, 10:18 am
ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಸಾಕ್ಷ್ಯ ನಾಶ ಯತ್ನ ಹಾಗೂ ತೆರಿಗೆ ವಂಚನೆ ಆರೋಪ ಪ್ರಕರಣದಲ್ಲಿ ಇಂಧನ ಸಚಿವ ಡಿ.ಕೆ ಶಿವಕುಮಾರ್‌ ಅವರಿಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಗುರುವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
Vijaya Karnataka Web minister shivakumar appears court on tax evasion case
ತೆರಿಗೆ ವಂಚನೆ: ಸಚಿವ ಡಿಕೆಶಿಗೆ ಜಾಮೀನು ಮಂಜೂರು


25 ಸಾವಿರ ರೂ. ಮೊತ್ತದ ಶ್ಯೂರಿಟಿ ಬಾಂಡ್‌, ಇಬ್ಬರ ಭದ್ರತೆ ಸಹಿ, ಸಾಕ್ಷಿ ನಾಶಕ್ಕೆ ಯತ್ನಿಸಬಾರದು, ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು, ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿ ನ್ಯಾಯಾಧೀಶ ಎಂ.ಎಸ್‌.ಆಳ್ವಾ ಆದೇಶ ನೀಡಿದರು.

ಡಿಕೆಶಿ ಪರ ವಾದಿಸಿದ ವಕೀಲರಾದ ಶೇಷಾಚಲ ''ಈಗಲ್‌ಟನ್‌ ರೆಸಾರ್ಟ್‌ನಲ್ಲಿ ನಡೆದ ಐಟಿ ದಾಳಿಯ ಬಗ್ಗೆ ಇನ್ನೂ ಗೊಂದಲಗಳಿವೆ. ಯಾವ ಅಧಿಕಾರಿಗೆ ದಾಳಿ ನಡೆಸುವ ಅಧಿಕಾರವಿತ್ತು ಎಂಬ ಬಗ್ಗೆ ಖಚಿತವಾಗಿ ತಿಳಿಸಿಲ್ಲ. ಸಾಕ್ಷಿನಾಶ ಯತ್ನ ಎಂದು ಆರೋಪಿಸಿರುವ ಪ್ರಕರಣದಲ್ಲಿ ಅರ್ಜಿದಾರರು ದಾಖಲೆ ಹರಿದು ಹಾಕಿರುವ ಬಗ್ಗೆ ಅನಗತ್ಯ ಆರೋಪ ಮಾಡಲಾಗಿದೆ. ಅದರಲ್ಲಿ ಅರ್ಜಿದಾರರ ಹೆಸರೂ ಇಲ್ಲ. ದಾಳಿ ವೇಳೆ ಸಿಕ್ಕಿರುವ ಯಾವ ದಾಖಲೆಗಳಲ್ಲಿಯೂ ಅರ್ಜಿದಾರರ ಹೆಸರಿಲ್ಲ. ಹೀಗಿದ್ದರೂ, ಉದ್ದೇಶಪೂರ್ವಕವಾಗಿ ಸಂಬಂಧವಿಲ್ಲದ ವ್ಯಕ್ತಿಗಳೊಡನೆ ಅರ್ಜಿದಾರರ ಹೆಸರನ್ನು ತಳುಕು ಹಾಕಿ ತನಿಖೆ ನಡೆಸಲಾಗುತ್ತಿದೆ. ಅರ್ಜಿದಾರರ ವಿರುದ್ಧ ದಾಖಲಾದ ಪ್ರಕರಣ ಜಾಮೀನಿಗೆ ಅರ್ಹವಾಗಿದ್ದು, ಜಾಮೀನು ಮಂಜೂರು ಮಾಡಬೇಕು,'' ಎಂದು ನ್ಯಾಯಾಲಯಕ್ಕೆ ಕೋರಿದರು.

ಐಟಿ ಪರ ವಾದ ಮಂಡಿಸಿದ ವಕೀಲರಾದ ಪ್ರಭುಲಿಂಗ ನಾವಡಗಿ ''ಅರ್ಜಿದಾರರ ವಿರುದ್ಧ ಯಾವುದೇ ಹಿತಾಸಕ್ತಿ ಇಲ್ಲದೇ ಕಾನೂನು ಪ್ರಕಾರವಾಗಿಯೇ ದಾಳಿ ನಡೆಸಲಾಗಿದೆ. ದಾಳಿಗೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಿಕೊಳ್ಳಲು ಈಗಲ್‌ಟನ್‌ ರೆಸಾರ್ಟ್‌ಗೆ ಅಧಿಕಾರಿಗಳು ತೆರಳಿದ್ದರು. ಅವರನ್ನು ಕಂಡ ಕೂಡಲೇ ಆರೋಪಿತರು ಮಹತ್ವದ ಚೀಟಿಯನ್ನು ಹರಿದುಹಾಕಿ ತನಿಖೆಗೆ ಅಸಹಕಾರ ತೋರಿದ್ದಾರೆ. ಈ ಮೂಲಕ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ. ಈ ಚೀಟಿಯಲ್ಲಿ ವಿವಿಧ ಸಂಸ್ಥೆಗಳಿಗೆ 10 ಕೋಟಿ ರೂ. ಹಣಕಾಸಿನ ವ್ಯವಹಾರ ಕುರಿತು ಮಾಹಿತಿ ಇತ್ತು. ಈ ಬಗ್ಗೆ ತನಿಖೆ ಮುಂದುವರಿದಿದೆ,'' ಎಂದು ತಿಳಿಸಿದರು.

''ಹಣದ ಅವ್ಯವಹಾರ ನಡೆದಿರುವ ಬಗ್ಗೆ ಈಗಾಗಲೇ ಹಲವು ಮಂದಿಯನ್ನು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆದರೆ, ಕೆಲವೇ ದಿನಗಳಲ್ಲಿ ಹೇಳಿಕೆ ನೀಡಿದವರು ಇದೀಗ ನಾವು ಗೊಂದಲಕ್ಕೊಳಗಾಗಿ ಹೇಳಿಕೆ ನೀಡಿದ್ದಾಗಿ ಎನ್ನುತ್ತಿದ್ದಾರೆ. ಪ್ರಭಾವಿ ವ್ಯಕ್ತಿಯಾಗಿರುವ ಅರ್ಜಿದಾರರು, ಈಗಾಗಲೇ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿರುವುದು ಕಾಣುತ್ತಿದೆ. ಜಾಮೀನು ನೀಡಬಹುದಾದ ಪ್ರಕರಣ ಇದಾಗಿದ್ದರೂ, ಗಂಭೀರ ಸ್ವರೂಪದ ಅರ್ಥಿಕ ಅಪರಾಧ ಪ್ರಕರಣ ಇದಾಗಿರುವುದರಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ. ಹೀಗಾಗಿ, ಜಾಮೀನು ಮಂಜೂರು ಮಾಡಬಾರದು,'' ಎಂದು ನ್ಯಾಯಾಲಯಕ್ಕೆ ವಕೀಲ ಪ್ರಭುಲಿಂಗ ಅವರು ಮನವಿ ಮಾಡಿದರು.

ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ, ಡಿ.ಕೆ ಶಿವಕುಮಾರ್‌ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.

ಬಾಕ್ಸ್‌:

ಮುಂದಿನ ಸಿಎಂ ಡಿಕೆಶಿ

ಎಂದು ಘೋಷಣೆ

ನ್ಯಾಯಾಲಯದ ವಿಚಾರಣೆಗೆ ಗುರುವಾರ ಬೆಳಗ್ಗೆ ಡಿ.ಕೆ ಶಿವಕುಮಾರ್‌ ಜತೆ ಅವರ ಸಹೋದರ ಡಿ.ಕೆ ಸುರೇಶ್‌ ಕೂಡಾ ಆಗಮಿಸಿದ್ದರು. ಜಾಮೀನು ಅರ್ಜಿ ವಿಚಾರಣೆ ವೇಳೆ ಕೈ ಕಟ್ಟಿಕೊಂಡು ನ್ಯಾಯಾಧೀಶರ ಎದುರು ನಿಂತಿದ್ದರು. ಜಾಮೀನು ಅರ್ಜಿ ಆದೇಶವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿತ್ತು. ಮಧ್ಯಾಹ್ನ ಸಚಿವರು ಬಂದ ಬಳಿಕ ಶಾಸಕ ಅನಿಲ್‌ ಲಾಡ್‌ ಕೂಡಾ ಆಗಮಿಸಿದ್ದರು. ಜಾಮೀನು ಮಂಜೂರಾದ ನಂತರ ಸಚಿವರು ನ್ಯಾಯಾಲಯದ ಆವರಣದಿಂದ ಹೊರ ಬಂದರು. ಈ ವೇಳೆ ಅವರ ಬೆಂಬಲಿಗರು ಮುಂದಿನ ಸಿಎಂ ಡಿ.ಕೆ ಶಿವಕುಮಾರ್‌ ಎಂದು ಘೋಷಣೆ ಕೂಗಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ