ಆ್ಯಪ್ನಗರ

ಮೂವರು ಎಂಎಲ್‌ಸಿಗಳಿಗೆ ಸಚಿವ ಸ್ಥಾನ, ಸೋಮವಾರ ಹೈಕೋರ್ಟ್‌ನಿಂದ ಮಹತ್ವದ ತೀರ್ಪು

ಮೂವರು ನೂತನ ಎಂಎಲ್‌ಸಿಗಳಾದ ಎಂಟಿಬಿ ನಾಗರಾಜ್‌, ಎಚ್. ವಿಶ್ವನಾಥ್‌ ಹಾಗೂ ಆರ್.‌ ಶಂಕರ್‌ಗೆ ಸಚಿವ ಸ್ಥಾನ ನೀಡಬಾರದೆಂದು ಕೋರಿ ವಕೀಲ ಎ.ಎಸ್‌. ಹರೀಶ್‌ ಕುಮಾರ್‌ ಮತ್ತಿತರರು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು.

Vijaya Karnataka 27 Nov 2020, 8:26 pm
ಬೆಂಗಳೂರು: ವಿಧಾನ ಪರಿಷತ್‌ ಸದಸ್ಯರಾದ ಎಂಟಿಬಿ ನಾಗರಾಜ್‌, ಎಚ್.‌ ವಿಶ್ವನಾಥ್‌ ಹಾಗೂ ಆರ್.‌ ಶಂಕರ್‌ಗೆ ಸಚಿವ ಸ್ಥಾನ ನೀಡದಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್‌ ಸೋಮವಾರ (ನ.30) ತೀರ್ಪು ನೀಡಲಿದೆ.
Vijaya Karnataka Web Karnataka High Court


ಮೂವರು ನೂತನ ಎಂಎಲ್‌ಸಿಗಳಿಗೆ ಸಚಿವ ಸ್ಥಾನ ನೀಡಬಾರದೆಂದು ಕೋರಿ ವಕೀಲ ಎ.ಎಸ್‌. ಹರೀಶ್‌ ಕುಮಾರ್‌ ಮತ್ತಿತರರು ಸಲ್ಲಿಸಿರುವ ಪಿಐಎಲ್‌ ಕುರಿತು ಸಿಜೆ ಎ.ಎಸ್‌. ಓಕಾ‌ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ನಂತರ ಮಧ್ಯಂತರ ಆದೇಶದ ಉಕ್ತಲೇಖನವನ್ನೂ ಸಹ ಆರಂಭಿಸಿತ್ತು. ಬಳಿಕ ಸಮಯಾವಕಾಶದ ಕೊರತೆ ಕಾರಣ ಸೋಮವಾರ ಮಧ್ಯಾಹ್ನ ತೀರ್ಪು ಉಕ್ತಲೇಖನ ಮುಂದುವರಿಸುವುದಾಗಿ ನ್ಯಾಯಪೀಠ ಹೇಳಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಪ್ರಶಾಂತ್‌ ಭೂಷಣ್‌, ಅರ್ಜಿಯಲ್ಲಿ ಪ್ರತಿಪಾದಿಗಳ ಪಟ್ಟಿಯಿಂದ ರಾಜ್ಯಪಾಲರನ್ನು ಮತ್ತು ಅರ್ಜಿಯಲ್ಲಿನ ಕೆಲವು ಆಕ್ಷೇಪಾರ್ಹ ಪದಗಳನ್ನು ತೆಗೆದುಹಾಕುವ ಕುರಿತು ಮೆಮೋ ಸಲ್ಲಿಸಿದ್ದರು. ನ್ಯಾಯಾಲಯ ಅದನ್ನು ಮಾನ್ಯ ಮಾಡಿತು.

ಕಾನೂನು ಕಂಟಕ: ಗೃಹ ಸಚಿವರನ್ನು ಭೇಟಿಯಾದ ವಿಶ್ವನಾಥ್, ಎಂಟಿಬಿ ಮತ್ತು ಶಂಕರ್‌
ನಂತರ ಪ್ರಶಾಂತ್‌ ಭೂಷಣ್‌, "ಎಚ್‌ ವಿಶ್ವನಾಥ್‌, ಎಂ.ಟಿ.ಬಿ. ನಾಗರಾಜ್‌, ಆರ್‌ ಶಂಕರ್‌ ಚುನಾವಣೆಯಲ್ಲಿ ಜನರಿಂದ ನೇರವಾಗಿ ಆಯ್ಕೆಯಾಗಿಲ್ಲ. ಸುಪ್ರೀಂ ಕೋರ್ಟ್‌ನ ಆದೇಶದಂತೆ ಈ ಮೂವರೂ ಜನರಿಂದ ಆಯ್ಕೆಯಾಗಿಲ್ಲ. ಬದಲಿಗೆ ಚುನಾಯಿತ ಶಾಸಕರಿಂದ ಆಯ್ಕೆಯಾಗಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಹಾಗಾಗಿ, ಅವರನ್ನು ಸಚಿವರನ್ನಾಗಿ ನೇಮಿಸಬಾರದು," ಎಂದು ‌ ತಮ್ಮ ವಾದ ಮಂಡಿಸಿದರು.

ಪ್ರತಿವಾದಿಗಳ ಶಾಸಕರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿಗಳಾದ ಉದಯ್‌ ಹೊಳ್ಳ ಮತ್ತು ಅಶೋಕ್‌ ಹಾರನಹಳ್ಳಿ, "ಸುಪ್ರೀಂ ಕೋರ್ಟ್‌ ಎಲ್ಲೂಅವರಿಗೆ ಮಂತ್ರಿ ಸ್ಥಾನ ನೀಡಬಾರದು ಎಂದು ಹೇಳಿಲ್ಲ. ಅರ್ಜಿದಾರರು ಸುಪ್ರೀಂ ಆದೇಶವನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ. ವಿಧಾನ ಪರಿಷತ್‌ನ ಸದಸ್ಯರಾಗಿ ಅವರು ಆಯ್ಕೆಯಾಗಿರುವ ಕಾರಣ ಸಹಜವಾಗಿಯೇ ಅವರಿಗೆ ಸಚಿವರಾಗುವ ಅರ್ಹತೆ ಇದೆ," ಎಂದರು.

ವಿಶ್ವನಾಥ್‌, ಎಂಟಿಬಿ, ಶಂಕರ್‌ಗೆ ಸಚಿವ ಸ್ಥಾನ; ಹೈಕೋರ್ಟ್‌ನಿಂದ ಮಧ್ಯಂತರ ಆದೇಶ
ಸರಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, "ಎಂ.ಟಿ.ಬಿ. ನಾಗರಾಜ್‌, ಆರ್‌. ಶಂಕರ್‌ ವಿಧಾನಸಭೆಯಿಂದ ಎಂಎಲ್‌ಸಿಯಾಗಿ ಆಯ್ಕೆಯಾಗಿದ್ದಾರೆ. ರಾಜ್ಯಪಾಲರು ಎಚ್‌. ವಿಶ್ವನಾಥ್‌ ಅವರನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ನಾಮನಿರ್ದೇಶನ ಮಾಡಿದ್ದಾರೆ. ನಾಮ ನಿರ್ದೇಶನ ಮಾಡುವ ಅಧಿಕಾರ ರಾಜ್ಯಪಾಲರಿಗಿದೆ. ಅವರನ್ನು ಸಚಿವರನ್ನಾಗಿ ನೇಮಕ ಮಾಡಲು ಯಾವುದೇ ಅಡ್ಡಿ ಇಲ್ಲ," ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ