ಆ್ಯಪ್ನಗರ

ಬಿಜೆಪಿ-ಕಾಂಗ್ರೆಸ್‌ ನಡುವೆ ಮೀರ್‌ ಸಾದಿಕ್‌ ವಿವಾದ, ಡಿಕೆಸು-ಅಶ್ವತ್ಥ ನಾರಾಯಣ್‌ ಕೆಸರೆರೆಚಾಟ

ಸಮ್ಮಿಶ್ರ ಸರಕಾರದ ರಕ್ಷಣೆಗೆ 'ಬಂಡೆ' ಯಂತಿದ್ದವರೇ ಗುಂಡಿ ತೆಗೆದರು ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ. ಇದಕ್ಕೆ ಏಕವಚನದಲ್ಲೇ ತಿರುಗೇಟು ನೀಡಿರುವ ಡಿಕೆ ಸುರೇಶ್‌, ಬಿಎಸ್‌ವೈ ಕೆಳಗಿಳಿಸಲು ಮೀರ್‌ ಸಾದಿಕ್‌ ಕೆಲಸ ಮಾಡುತ್ತಿರುವುದು ಯಾರು? ಎಂದು ಪ್ರಶ್ನಿಸಿದ್ದಾರೆ.

Vijaya Karnataka 21 Oct 2020, 12:17 am
ಬೆಂಗಳೂರು: 'ಬಂಡೆ'ಯಂತೆ ರಕ್ಷಣೆ ನೀಡುತ್ತೇನೆ ಎಂದಿದ್ದ ಡಿ.ಕೆ. ಶಿವಕುಮಾರ್‌ ಅವರೇ, ಸರಕಾರ ಬೀಳಿಸುವುದಕ್ಕೆ 'ಗುಂಡಿ' ತೆಗೆಯುವ ಮೀರ್‌ ಸಾದಿಕ್‌ ಕೆಲಸ ಮಾಡಿದ್ದರು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ಹೊಸ ಬಾಂಬ್‌ ಸಿಡಿಸಿದ್ದಾರೆ. ಇದು ಕಾಂಗ್ರೆಸ್‌- ಬಿಜೆಪಿ ಮಧ್ಯೆ ಭಾರಿ ವಾಗ್ವಾದಕ್ಕೆ ಕಾರಣವಾಗಿದೆ.
Vijaya Karnataka Web Ashwath Narayana DK Shuresh


ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನೇ ದಿನೇ ರಂಗೇರುತ್ತಿದ್ದು, ಹಿಂದಿನ ಮೈತ್ರಿ ಸರಕಾರದ ಪತನ ವಿಚಾರವು ಈಗ ಮತ್ತೆ ಸದ್ದು ಮಾಡುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಶ್ವತ್ಥ ನಾರಾಯಣ, "ಡಿ.ಕೆ. ಶಿವಕುಮಾರ್‌ ಅವರು 13 ತಿಂಗಳಲ್ಲಿ 13 ಗುಂಡಿ ತೆಗೆದು ಮೈತ್ರಿ ಸರಕಾರವನ್ನು ಬೀಳಿಸುವ ಷಡ್ಯಂತ್ರ ನಡೆಸಿದರು. ಸರಕಾರದೊಳಗೇ ಇದ್ದು, ಸರಕಾರವನ್ನು ಬೀಳಿಸುವ ಮೀರ್‌ ಸಾದಿಕ್‌ತನವನ್ನು ಶಿವಕುಮಾರ್‌ ಪ್ರದರ್ಶಿಸಿದ್ದಾರೆ," ಎಂದರು.

ಜೆಡಿಎಸ್ ಪಕ್ಷವನ್ನು ಮುಗಿಸಿದ್ದೇ ಡಿಕೆಶಿ! ಆರ್‌. ಅಶೋಕ್‌ ಆರೋಪ
ಸದ್ಯದಲ್ಲೇ ವಿಡಿಯೋ ಬಿಡುಗಡೆ:

"ಮುನಿರತ್ನ ಅವರು ಡಿ.ಕೆ. ಶಿವಕುಮಾರ್‌ ಹಾಗೂ ಸುರೇಶ್‌ಗೆ ಭಾರಿ ಆತ್ಮೀಯರಾಗಿದ್ದರು. ಆದಾಗಿಯೂ ಅವರು ಏಕೆ ಪಕ್ಷ ಬಿಟ್ಟರು? ಅವರನ್ನು ಯಾರು ಕಳುಹಿಸಿಕೊಟ್ಟರು? ಇದಕ್ಕೆ ಸಂಬಂಧಪಟ್ಟ ವಿಡಿಯೋ ನಮ್ಮ ಬಳಿ ಇದೆ. ಅದನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ," ಎಂದು ಅಶ್ವತ್ಥ ನಾರಾಯಣ ಎಚ್ಚರಿಕೆ ನೀಡಿದರು.

"ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಇಷ್ಟು ಬೇಗ ಉಪಚುನಾವಣೆ ಎದುರಾಗುತ್ತದೆ ಎಂಬ ಕಲ್ಪನೆ ಕಾಂಗ್ರೆಸ್‌ನವರಿಗೆ ಇರಲಿಲ್ಲ. ನಿರೀಕ್ಷೆ ಹುಸಿಯಾಗಿರುವುದರಿಂದ ಹತಾಶೆಗೊಂಡಿದ್ದಾರೆ. ಅವರಿಗೆ ಇಲ್ಲಿ ಕಾರ್ಯಕರ್ತರು ಹಾಗೂ ಮತದಾರರು ಇಲ್ಲದಿರುವುದರಿಂದ ಷಡ್ಯಂತ್ರ ರೂಪಿಸುತ್ತಿದ್ದಾರೆ. ಮುನಿರತ್ನ ತಮ್ಮನ್ನು ಮಾರಿಕೊಂಡಿದ್ದಾರೆ ಎಂದು ವಿನಾಕಾರಣ ಆರೋಪಿಸುತ್ತಿದ್ದಾರೆ. ಅವರು 1 ರೂಪಾಯಿ ಕೂಡಾ ತೆಗೆದುಕೊಂಡಿಲ್ಲ. ಮುನಿರತ್ನ ಪಕ್ಷ ಬಿಡುವಂಥ ಸನ್ನಿವೇಶ ಸೃಷ್ಟಿಸಿದ್ದು ಯಾರು? ಬಿಜೆಪಿಗೆ ಹೋಗಿ ಎಂದು ಕಳುಹಿಸಿಕೊಟ್ಟಿದ್ದು ಯಾರು ಎಂಬ ಬಗ್ಗೆ ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೊದಲು ಉತ್ತರಿಸಲಿ," ಎಂದು ಸವಾಲು ಹಾಕಿದರು.

"ಜೋಡೆತ್ತು ಎಂದು ಹೇಳಿಕೊಂಡು ಜತೆಯಲ್ಲೇ ಇದ್ದು ಶಿವಕುಮಾರ್‌ ದ್ರೋಹ ಮಾಡಿದರು. ಪಕ್ಷಕ್ಕೆ ಸಿದ್ದರಾಮಯ್ಯ ಅನ್ಯಾಯ ಮಾಡಿದರು. ಕಾಂಗ್ರೆಸ್‌ನವರೇ ಸೇರಿಕೊಂಡು ಮೈತ್ರಿ ಸರಕಾರ ಪತನಗೊಳಿಸಿದರು. ಈಗ ನಕಲಿ ಕಾರ್ಡ್‌ ಮೂಲಕ ಹೊಸ ನಾಟಕ ಆಡುತ್ತಿದ್ದಾರೆ. ಶಿರಾ ಹಾಗೂ ರಾಜರಾಜೇಶ್ವರಿನಗರದಲ್ಲಿ ಅವರಿಗೆ ಸೋಲಿನ ಭಯ ಕಾಡುತ್ತಿದೆ," ಎಂದು ಹೇಳಿದರು.

ಮೌನಿಯಾದ ಮುನಿ

ನಿಮ್ಮ ಅಭಿಪ್ರಾಯವೇನು ಎಂಬ ಸುದ್ದಿಗಾರರ ಪ್ರಶ್ನೆಗೆ ಮುನಿರತ್ನ ಉತ್ತರಿಸುವುದಕ್ಕೆ ಅಶ್ವತ್ಥ ನಾರಾಯಣ ಅವಕಾಶವನ್ನೇ ನೀಡಲಿಲ್ಲ. ಎಲ್ಲ ಪ್ರಶ್ನೆಗಳಿಗೂ ತಾವೇ ಪ್ರತಿಕ್ರಿಯೆ ನೀಡಿದರು. ಪತ್ರಿಕಾಗೋಷ್ಠಿ ಮುಕ್ತಾಯವಾಗುವವರೆಗೂ ಮುನಿರತ್ನ ಮೌನಕ್ಕೆ ಶರಣಾಗಿದ್ದರು. "ಮುನಿರತ್ನ ಕತೆ, ಚಿತ್ರಕತೆ, ನಿರ್ದೇಶನ ಬಲ್ಲವರು. ಅವರೇ ಉತ್ತರಿಸಲಿ ಬಿಡಿ," ಎಂದು ಸುದ್ದಿಗಾರರು ಕಾಲೆಳೆದರೂ ಅಶ್ವತ್ಥ ನಾರಾಯಣ ಅವಕಾಶ ನೀಡಲೇ ಇಲ್ಲ.

ಈ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಸಚಿವ ಆರ್‌ ಅಶೋಕ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಪಾಲ್ಗೊಳ್ಳಲಿದ್ದಾರೆ ಎಂದು ಸಂದೇಶ ಕಳುಹಿಸಲಾಗಿತ್ತು. ಆದರೆ ಅವರಿಬ್ಬರು ಗೈರಾಗಿದ್ದು ಕುತೂಹಲ ಸೃಷ್ಟಿಸಿದೆ. ಇಬ್ಬರು ಹಿರಿಯ ನಾಯಕರ ಅನುಪಸ್ಥಿತಿ ಬಗ್ಗೆಯೂ ಅಶ್ವತ್ಥ ನಾರಾಯಣ ಉತ್ತರಿಸಲಿಲ್ಲ.

ಬಿಎಸ್‌ವೈ ಇಳಿಸೋಕೆ ಮೀರ್‌ ಸಾದಿಕ್‌ತನ ಮಾಡುವುದು ಯಾರು ?

ಅಶ್ವತ್ಥ್‌ ನಾರಾಯಣ ಹೇಳಿಕೆಗೆ ಏಕವಚನದಲ್ಲೇ ತಿರುಗೇಟು ನೀಡಿರುವ ಸಂಸದ ಡಿಕೆ ಸುರೇಶ್‌, ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕೆ ಮೀರ್‌ ಸಾದಿಕ್‌ ಕೆಲಸ ಮಾಡುತ್ತಿರುವುದು ಯಾರು ಯಾರು? ಯಾರ ಮನೆ ಹಿಂಬಾಗಿಲು ಯಾರು ತಟ್ಟುತ್ತಿದ್ದಾರೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಟೀಕಿಸಿದ್ದಾರೆ.

"ಅವರು ಉಪಮುಖ್ಯಮಂತ್ರಿ ಎಂಬ ಕಾರಣಕ್ಕೆ ಇಷ್ಟು ದಿನ ಸುಮ್ಮನಿದ್ದೆ. ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಡಿಕೆ ಶಿವಕುಮಾರ್‌ ಬಳಿ ಪ್ರಮಾಣ ಮಾಡಿಸುವ ಯೋಗ್ಯತೆ ಅವರಿಗೆ ಇದೆಯೇ? ಚಿಕ್ಕ ವಯಸ್ಸಿನಲ್ಲಿ ಬಿಜೆಪಿಯವರು ಅಧಿಕಾರ ಕೊಟ್ಟಿರುವುದನ್ನು ಸದ್ಬಳಕೆ ಮಾಡಿಕೊಳ್ಳಲಿ. ನಾಳೆ ಬೆಳಗ್ಗೆ ಬೇಕಾದರೂ ಆಡಿಯೋ ಬಿಡಲಿ. ಬಿಡುಗಡೆ ಮಾಡುವುದಕ್ಕೆ ಅದೇನು ಸಿನಿಮಾನಾ? ಮೀರ್‌ ಸಾದಿಕ್‌ತನದ ನಾಯಕತ್ವ ವಹಿಸಿರುವುದೇ ಅವರು. ನಾನು ಅವರ ಹೆಸರನ್ನೂ ಹೇಳುವುದಿಲ್ಲ," ಎಂದು ಏಕವಚನದಲ್ಲಿಯೇ ಕಿಡಿಕಾರಿದರು.

"ಯಡಿಯೂರಪ್ಪ ಇಳಿಸುವುದಕ್ಕೆ ಮೀರ್‌ ಸಾದಿಕ್‌ತನ ಮಾಡಿ ಆಗಾಗ ಮಾಧ್ಯಮದ ಎದುರು ಬಂದು ಪ್ರಾಮಾಣಿಕರಂತೆ ಪೋಸು ಕೊಡುತ್ತಿದ್ದಾರೆ. ಕೇಂದ್ರ ಸರಕಾರದಿಂದ ಒಂದು ರೂಪಾಯಿ ಅನುದಾನ ತರಲು ಯೋಗ್ಯತೆ ಇಲ್ಲದವರು ಬೆಂಗಳೂರನ್ನು ಲೂಟಿ ಹೊಡೆಯುತ್ತಿದ್ದಾರೆ. ಮಿತ್ರ ಮಂಡಳಿ ಜನ ಎಷ್ಟು ಲೂಟಿ ಮಾಡಿದ್ದಾರೆ ಎಂಬುದು ಗೊತ್ತು. ಇವರೆಲ್ಲ ಸೇರಿಕೊಂಡು 2,000 ಕೋಟಿ ರೂ. ಲೂಟಿ ಹೊಡೆದಿರುವ ಬಗ್ಗೆ ಉತ್ತರ ಕೊಡಲಿ. ಇದೊಂದು ಲೂಟಿಕೋರ ಸರಕಾರ. ಮೀರ್‌ ಸಾದಿಕ್‌ತನ ಬಿಜೆಪಿಗೆ ಸಂಬಂಧಪಟ್ಟಿದ್ದೇ ಹೊರತು ಡಿ.ಕೆ. ಶಿವಕುಮಾರ್‌ಗಲ್ಲ," ಎಂದು ತಿರುಗೇಟು ನೀಡಿದ್ದಾರೆ.

ಏನಿದು ಆಡಿಯೋ ಬಾಂಬ್‌ ?

ಬಿಜೆಪಿ, ಕಾಂಗ್ರೆಸ್‌ ನಾಯಕರಿಬ್ಬರೂ ಬಿಡುಗಡೆ ಮಾಡುತ್ತೇವೆ ಎಂದು ಅಬ್ಬರಿಸುತ್ತಿರುವ 'ಆಡಿಯೋ ಬಾಂಬ್‌' ಯಾವುದು ಎಂಬ ಬಗ್ಗೆ ಈಗ ಕುತೂಹಲ ಸೃಷ್ಟಿಯಾಗಿದೆ.

ಮೂಲಗಳ ಪ್ರಕಾರ ಆಪರೇಷನ್‌ ಕಮಲ ಸಂದರ್ಭದಲ್ಲಿ'ಮಿತ್ರ ಮಂಡಳಿ' ಸದಸ್ಯರು ಬಿಜೆಪಿ ಆಫರ್‌ ಬಗ್ಗೆ ತಮ್ಮ ತಮ್ಮಲ್ಲೇ ಮಾತನಾಡಿಕೊಂಡ ಆಡಿಯೋ ತುಣುಕು ಈಗ ಡಿ.ಕೆ. ಶಿವಕುಮಾರ್‌ ಕೈ ಸೇರಿದೆ. ಇದನ್ನು ಆಧರಿಸಿ ಮುನಿರತ್ನ ಮಾರಾಟವಾಗಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಈ ಆಡಿಯೋ ಬಿಡುಗಡೆಗೆ ಕಾಂಗ್ರೆಸ್‌ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಶಾಸಕರನ್ನು ಬಿಜೆಪಿಗೆ ಕಳುಹಿಸುವುದಕ್ಕೆ ಡಿ.ಕೆ. ಶಿವಕುಮಾರ್‌ ನಿರ್ದೇಶನ ನೀಡಿದ ಆಡಿಯೋ ತಮ್ಮ ಬಳಿ ಇದೆ. ಇದನ್ನು ಬಿಡುಗಡೆ ಮಾಡುತ್ತೇವೆ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ. ಆದರೆ ಯಾರ ಬಳಿ ನಿಜಕ್ಕೂ ಆಡಿಯೋ ಬಾಂಬ್‌ ಇದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ