ಆ್ಯಪ್ನಗರ

ಲೋಕಾಯುಕ್ತ ಕಚೇರಿಗೆ ಬೆಂಕಿ, ದುಷ್ಕರ್ಮಿಗಳ ಕೃತ್ಯ

ಭ್ರಷ್ಟರ ನಿದ್ದೆಗೆಡಿಸಿದ್ದ ಲೋಕಾಯುಕ್ತ ಸಂಸ್ಥೆಯ ಮೇಲೆ ದುಷ್ಕರ್ಮಿಗಳ ಕಣ್ಣು ಬಿದ್ದಿದ್ದು, ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಪಕ್ಕದಲ್ಲೇ ಇರುವ ಲೋಕಾಯುಕ್ತ ಸಂಸ್ಥೆ ಕಚೇರಿಯ ಪ್ರವೇಶ ದ್ವಾರಕ್ಕೆ ದುಷ್ಕರ್ಮಿಗಳು ಮಂಗಳವಾರ ರಾತ್ರಿ ವೇಳೆ ಬೆಂಕಿ ಹಚ್ಚಿದ್ದಾರೆ.

ವಿಕ ಸುದ್ದಿಲೋಕ 20 Oct 2016, 4:00 am
ಬೆಂಗಳೂರು: ಭ್ರಷ್ಟರ ನಿದ್ದೆಗೆಡಿಸಿದ್ದ ಲೋಕಾಯುಕ್ತ ಸಂಸ್ಥೆಯ ಮೇಲೆ ದುಷ್ಕರ್ಮಿಗಳ ಕಣ್ಣು ಬಿದ್ದಿದ್ದು, ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಪಕ್ಕದಲ್ಲೇ ಇರುವ ಲೋಕಾಯುಕ್ತ ಸಂಸ್ಥೆ ಕಚೇರಿಯ ಪ್ರವೇಶ ದ್ವಾರಕ್ಕೆ ದುಷ್ಕರ್ಮಿಗಳು ಮಂಗಳವಾರ ರಾತ್ರಿ ವೇಳೆ ಬೆಂಕಿ ಹಚ್ಚಿದ್ದಾರೆ.
Vijaya Karnataka Web mischief mongers set fire to entrance of lokayukta office
ಲೋಕಾಯುಕ್ತ ಕಚೇರಿಗೆ ಬೆಂಕಿ, ದುಷ್ಕರ್ಮಿಗಳ ಕೃತ್ಯ


ಅದೃಷ್ಟವಶಾತ್ ಲೋಕಾಯುಕ್ತ ಸಂಸ್ಥೆಯ ಯಾವುದೇ ದಾಖಲೆಗಳು, ಕಂಪ್ಯೂಟರ್‌ಗಳಿಗೆ ಹಾನಿ ಉಂಟಾಗಿಲ್ಲ. ಕೃತ್ಯದ ಹಿಂದೆ ಲೋಕಾಯುಕ್ತದಲ್ಲಿ ತನಿಖೆ ಎದುರಿಸುತ್ತಿರುವ ಪ್ರಭಾವಿಗಳ ಕೈವಾಡವಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ.

ಮಂಗಳವಾರ ರಾತ್ರಿ 9.30 ರಿಂದ 10 ಗಂಟೆ ನಡುವೆ ಲೋಕಾಯುಕ್ತ ಕಚೇರಿಯ ಲಾಕ್ ಮಾಡಿರುವ ಗೇಟ್ ಹತ್ತಿ ಆವರಣದ ಒಳಗೆ ನುಗ್ಗಿರುವ ದುಷ್ಕರ್ಮಿಗಳು, ಸಾರ್ವಜನಿಕರು ಪ್ರವೇಶಿಸುವ ಮುಖ್ಯ ದ್ವಾರವನ್ನು ಬಿಟ್ಟು, ಗೋಡೆ ಪಕ್ಕದಲ್ಲಿರುವ ಮೂರನೇ ದ್ವಾರಕ್ಕೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಈ ವೇಳೆ ಮೊದಲನೇ ಮಹಡಿಯಲ್ಲಿ ಮಲಗಿದ್ದ ಖಾಸಗಿ ಭದ್ರತಾ ಸಿಬ್ಬಂದಿ ವೆಂಕರಮಣಪ್ಪ ಹಾಗೂ ಇತರ ಮೂವರು ಪೊಲೀಸ್ ಕಾನ್ಸ್‌ಟೇಬಲ್‌ಗಳು ಎಚ್ಚರಗೊಂಡು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಬಳಿಕ ಠಾಣೆಗೆ ಮಾಹಿತಿ ನೀಡಿದ್ದಾರೆ.

ಬಾಗಿಲು ಭಾಗಶಃ ಸುಟ್ಟು ಹೋಗಿದ್ದು, ಅದರ ಗಾಜು ಒಡೆದು ಹೋಗಿದೆ. ಬೆಂಕಿ ಹಚ್ಚಿರುವ ಬಾಗಿಲಿನ ಹಿಂಬದಿಯಲ್ಲೇ ಇರುವ ಲೋಕಾಯುಕ್ತ ಸಹಾಯವಾಣಿ ಕೇಂದ್ರದ ಕಂಪ್ಯೂಟರ್, ದಾಖಲೆಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಕಚೇರಿ ಸಿಬ್ಬಂದಿ ಮಾಹಿತಿ ನೀಡಿದರು.

ಈ ಘಟನೆ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ವಿಧಾನಸೌಧ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾನ್ಸ್‌ಟೇಬಲ್‌ಗಳ ವಿಚಾರಣೆ:

ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ವೆಂಕಟರಮಣಪ್ಪ ಸೇರಿದಂತೆ ಮೂವರು ಕಾನ್ಸ್‌ಟೇಬಲ್‌ಗಳನ್ನು ಲೋಕಾಯುಕ್ತ ರಿಜಿಸ್ಟ್ರಾರ್ ನಂಜುಂಡಸ್ವಾಮಿ ಅವರು ಪ್ರತ್ಯೇಕವಾಗಿ 1 ತಾಸಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿ, ಮಾಹಿತಿ ಕಲೆ ಹಾಕಿದ್ದಾರೆ.

ಆವರಣದಲ್ಲಿ ಸಿಸಿ ಕ್ಯಾಮೆರಾ ಇಲ್ಲ

ಲೋಕಾಯುಕ್ತ ಸಂಸ್ಥೆ ಹಿಂದಿನ ಐಜಿಪಿ ಪ್ರಣವ್ ಮೊಹಂತಿ ಅವರ ಕಚೇರಿ ಮುಂದೆ ಮಾಟ-ಮಂತ್ರ ಮಾಡಿಸಿದ್ದ ಘಟನೆ ಬಳಿಕ ಕಚೇರಿಯ ಒಳಗೆ ಬಹಳಷ್ಟು ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆದರೆ, ಆವರಣದಲ್ಲಿ ಅಥವಾ ಗೇಟ್ ಬಳಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ. ಹೀಗಾಗಿ, ದುಷ್ಕರ್ಮಿಗಳು ಆವರಣಕ್ಕೆ ಪ್ರವೇಶಿಸಿದ ವಿಡಿಯೋ ಲಭ್ಯವಾಗಿಲ್ಲ. ಆದರೂ, ಸುತ್ತ ಮುತ್ತ ಇರುವ ಸರಕಾರಿ ಕಚೇರಿಗಳು, ಟ್ರಾಫಿಕ್ ಸಿಗ್ನಲ್‌ನಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿ ದುಷ್ಕರ್ಮಿಗಳ ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ.

-----

ಘಟನೆ ನಡೆದ ಸ್ಥಳಕ್ಕೆ ರಾತ್ರಿಯೇ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಹಾಗೂ ಅತಿಕ್ರಮ ಪ್ರವೇಶ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

- ಸಂದೀಪ್ ಪಾಟೀಲ್, ಡಿಸಿಪಿ, ಕೇಂದ್ರ ವಿಭಾಗ

ರಾತ್ರಿ 10 ಗಂಟೆ ಸುಮಾರಿಗೆ ನಾನು ಹಾಗೂ ಮೂವರು ಪೊಲೀಸ್ ಪೇದೆಗಳು ಲೋಕಾಯುಕ್ತ ಕಚೇರಿಯೊಳಗೆ ಇದ್ದೆವು. ಏಕಾಏಕಿ ಬಾಗಿಲಿಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿತ್ತು. ಕೂಡಲೇ ನೀರು ಹಾಕಿ ಬೆಂಕಿ ನಂದಿಸಿ, ಪೊಲೀಸರಿಗೆ ಮಾಹಿತಿ ನೀಡಿದೆವು.

-ವೆಂಕಟರಮಣಪ್ಪ, ಸೆಕ್ಯುರಿಟಿ ಗಾರ್ಡ್

ಶಾರ್ಟ್ ಸರ್ಕ್ಯೂಟ್ ಮಾಡುವ ಸಂಚು?

ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಬಾಗಿಲು ಪಕ್ಕದಲ್ಲಿಯೇ ವಿದ್ಯುತ್ ಸ್ವಿಚ್ ಬೋರ್ಡ್ ಇದೆ. ವಿದ್ಯುತ್ ಸ್ವಿಚ್ ಬೋರ್ಡ್‌ಗೆ ಬೆಂಕಿ ಹೊತ್ತಿಕೊಂಡರೆ ಅದು ಇಡೀ ಕಟ್ಟಡವನ್ನೇ ಆವರಿಸಿ ಕಚೇರಿಯಲ್ಲಿ ಅಗ್ನಿ ಅವಘಡ ಉಂಟಾಗುತ್ತದೆ. ಇದರಿಂದ ಒಳಗಿರುವ ದಾಖಲೆಗಳು ಸುಟ್ಟು ಹೋಗುತ್ತವೆ. ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಪ್ರಕರಣಗಳ ತನಿಖೆ ಎದುರಿಸುತ್ತಿರುವ ಪ್ರಭಾವಿಗಳು, ಉದ್ದೇಶ ಪೂರ್ವಕವಾಗಿ ದಾಖಲೆ ನಾಶಪಡಿಸಲು ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ