ಆ್ಯಪ್ನಗರ

ಮೀಸಲು ಪಟ್ಟಿ ವಾಪಸ್‌; ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಇನ್ನಷ್ಟು ವಿಳಂಬ

ಏಕೆಂದರೆ ರಾಜ್ಯ ಸರಕಾರ 2018ರ ಸೆ. 3ರಂದು ಮೀಸಲು ನಿಗದಿಪಡಿಸಿ ಹೊರಡಿಸಿದ್ಧ ಅಧಿಸೂಚನೆ ವಾಪಸ್‌ ಪಡೆದಿದ್ದು, ಒಂದು ತಿಂಗಳಲ್ಲಿ ಹೊಸ ಮೀಸಲು ಹೊರಡಿಸುವುದಾಗಿ ಹೈಕೋರ್ಟ್‌ಗೆ ತಿಳಿಸಿದೆ.

Vijaya Karnataka 7 Nov 2019, 9:16 pm
ಬೆಂಗಳೂರು: ಮೂರು ಮಹಾನಗರ ಪಾಲಿಕೆ ಸೇರಿ ಮೊದಲ ಹಂತದಲ್ಲಿ ಚುನಾವಣೆ ನಡೆದಿರುವ 105ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ಮೇಯರ್‌-ಉಪಮೇಯರ್‌, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಶೀಘ್ರವೇ ಚುನಾವಣೆ ನಡೆಯುವ ಸಾಧ್ಯತೆಗಳಿಲ್ಲ.
Vijaya Karnataka Web VidhanSoudha


ಏಕೆಂದರೆ ರಾಜ್ಯ ಸರಕಾರ 2018ರ ಸೆ. 3ರಂದು ಮೀಸಲು ನಿಗದಿಪಡಿಸಿ ಹೊರಡಿಸಿದ್ಧ ಅಧಿಸೂಚನೆ ವಾಪಸ್‌ ಪಡೆದಿದ್ದು, ಒಂದು ತಿಂಗಳಲ್ಲಿ ಹೊಸ ಮೀಸಲು ಹೊರಡಿಸುವುದಾಗಿ ಹೈಕೋರ್ಟ್‌ಗೆ ತಿಳಿಸಿದೆ. ಇದರಿಂದಾಗಿ 2018ರಲ್ಲಿ ಆಗಸ್ಟ್‌ನಲ್ಲಿ ಚುನಾವಣೆ ನಡೆದರೂ ಇನ್ನೂ 105ಕ್ಕೂ ಅಧಿಕ ಸ್ಥಳೀಯ ಸಂಸ್ಥೆಗಳಿಗೆ ಚುನಾಯಿತ ಮುಖ್ಯಸ್ಥರಿಲ್ಲದೆ ಮುಂದುವರಿಯುವಂತಾಗಿದೆ.

2019ರ ಜ. 18ರಂದು ಹೈಕೋರ್ಟ್‌ನ ಏಕಸದಸ್ಯಪೀಠ ಸರಕಾರ ಸೆ. 3ರಂದು ಹೊರಡಿಸಿದ್ದ ಮೀಸಲು ಪಟ್ಟಿಯನ್ನು ಎತ್ತಿಹಿಡಿದಿತ್ತು. ಅದನ್ನು ಪ್ರಶ್ನಿಸಿ ಸಿಂಧನೂರಿನ ಆಲಂ ಭಾಷಾ ಮತ್ತಿತರರು ಸಲ್ಲಿಸಿದ್ದ ಹಲವು ಮೇಲ್ಮನವಿಗಳು ಗುರುವಾರ ಸಿಜೆ ಎ.ಎಸ್‌. ಓಕ್‌ ಮತ್ತು ನ್ಯಾ.ಎಸ್‌.ಆರ್‌. ಕೃಷ್ಣಕುಮಾರ್‌ ಅವರಿದ್ದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದವು.

ಆ ವೇಳೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ''ಅಧ್ಯಕ್ಷ-ಉಪಾಧ್ಯಕ್ಷರ ಮೀಸಲು ನಿಗದಿ ಮಾಡಿ ಸರಕಾರ 2018ರ ಸೆ. 3ರಂದು ಹೊರಡಿಸಿದ್ದ ಅಧಿಸೂಚನೆಯನ್ನು ವಾಪಸ್‌ ಪಡೆಯಲಾಗುವುದು. ಅದರ ಬದಲಿಗೆ ಬಂದು ತಿಂಗಳೊಳಗೆ ಹೊಸ ಅಧಿಸೂಚನೆ ಹೊರಡಿಸಲಾಗುವುದು ," ಎಂದು ಹೇಳಿದರು.

ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಹಾಗಿದ್ದರೆ ಮೇಲ್ಮನವಿ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲವೆಂದು ಎಲ್ಲ ಮೇಲ್ಮನವಿಗಳನ್ನು ವಿಲೇವಾರಿ ಮಾಡಿತು.

ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ಮಹಾನಗರ ಪಾಲಿಕೆಗಳು ಸೇರಿದಂತೆ 105 ನಗರ ಸ್ಥಳೀಯ ಸಂಸ್ಥೆಗಳಿಗೆ 2018ರ ಆ. 31ರಂದು ಚುನಾವಣೆ ನಡೆದು, ಸೆ. 3ರಂದು ಫಲಿತಾಂಶ ಹೊರಬಿದ್ದಿತ್ತು. ಅದೇ ದಿನ ಮೇಯರ್‌, ಉಪಮೇಯರ್‌, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿತ್ತು. ಈ ಮಧ್ಯೆ ಮೊದಲ ಅಧಿಸೂಚನೆಯಲ್ಲಿ ಕೆಲ ಬದಲಾವಣೆ ಮಾಡಿ ಸೆ. 6ರಂದು ಪರಿಷ್ಕೃತ ಅಧಿಸೂಚನೆ ಹೊರಡಿಸಿತ್ತು. ನಂತರ ಕೆಲವರು ಸೆ. 6 ಅಧಿಸೂಚನೆ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಮುಂದೆ, ಸೆ. 6ರ ಪರಿಷ್ಕೃತ ಅಧಿಸೂಚನೆ ವಾಪಸ್‌ ಪಡೆದು, ಸೆ. 3ರಂದು ಹೊರಡಿಸಿದ್ದ ಮೂಲ ಅಧಿಸೂಚನೆ ಪ್ರಕಾರವೇ ಮುಂದುವರಿಯುವುದಾಗಿ ಸರಕಾರ ಅ. 9ರಂದು ಹೇಳಿತ್ತು. ಅದನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ಏಕಸದಸ್ಯಪೀಠ ವಿಲೇವಾರಿ ಮಾಡಿ ಸೆ. 3ರ ಅಧಿಸೂಚನೆಯನ್ನು ಎತ್ತಿಹಿಡಿದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ