ಆ್ಯಪ್ನಗರ

ಸಂಸದರಿಗೆ ದುಬಾರಿ ಐಫೋನ್ ಗಿಫ್ಟ್ ನೀಡಿದ ರಾಜ್ಯ ಸರಕಾರ

ಸಮ್ಮಿಶ್ರ ಸರಕಾರದಲ್ಲಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಎಚ್‌ ಡಿ ಕುಮಾರಸ್ವಾಮಿ ಅವರು ಒಂದೆಡೆ ಸರಕಾರದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿಕೆ ನೀಡುತ್ತಿದ್ದರೆ, ಮತ್ತೊಂದೆಡೆ ಕಾವೇರಿ ಸಮಸ್ಯೆ ಕುರಿತು ಕರೆದಿರುವ ರಾಜ್ಯದ ಎಲ್ಲ ಸಂಸದರ ಸಭೆಯ ಆಮಂತ್ರಣದ ಜತೆಗೆ ದುಬಾರಿ ಐಫೋನ್ ಮತ್ತು ಮೂಚಿ ಲೆದರ್ ಬ್ಯಾಗ್ ನೀಡಲಾಗಿದೆ.

Vijaya Karnataka Web 17 Jul 2018, 3:42 pm
ಬೆಂಗಳೂರು: ಸಮ್ಮಿಶ್ರ ಸರಕಾರದಲ್ಲಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಎಚ್‌ ಡಿ ಕುಮಾರಸ್ವಾಮಿ ಅವರು ಒಂದೆಡೆ ಸರಕಾರದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿಕೆ ನೀಡುತ್ತಿದ್ದರೆ, ಮತ್ತೊಂದೆಡೆ ಕಾವೇರಿ ಸಮಸ್ಯೆ ಕುರಿತು ಕರೆದಿರುವ ರಾಜ್ಯದ ಎಲ್ಲ ಸಂಸದರ ಸಭೆಯ ಆಮಂತ್ರಣದ ಜತೆಗೆ ದುಬಾರಿ ಐಫೋನ್ ಮತ್ತು ಮೂಚಿ ಲೆದರ್ ಬ್ಯಾಗ್ ನೀಡಲಾಗಿದೆ.
Vijaya Karnataka Web Press Note Story2.

ಆದರೆ ದುಬಾರಿ ಉಡುಗೊರೆಯನ್ನು ಸಂಸದ ರಾಜೀವ್ ಚಂದ್ರಶೇಖರ್ ಹಿಂದಿರುಗಿಸಿದ್ದು, ಸಿಎಂಗೆ ಪತ್ರ ಬರೆದು, ಉಡುಗೊರೆ ಹಿಂದಿರುಗಿಸುತ್ತಿರುವುದಾಗಿ ಮತ್ತು ಸಭೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಟೀಕೆಗೆ ಗುರಿಯಾದ ರಾಜ್ಯ ಸರಕಾರದ ನಡೆ

ರಾಜ್ಯ ಸರಕಾರ ಬುಧವಾರ ಹೊಸದಿಲ್ಲಿಯಲ್ಲಿ ಕಾವೇರಿ ಸಮಸ್ಯೆ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಇತರೆ ವಿಚಾರಗಳ ಕುರಿತು ಕೇಂದ್ರದ ಜತೆ ಚರ್ಚಿಸುವ ಸಲುವಾಗಿ ರಾಜ್ಯದ ಎಲ್ಲ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ಸಭೆ ಕರೆದಿದೆ. ಆದರೆ ಸಭೆಯ ಆಮಂತ್ರಣ ಜತೆಗೆ ಸುಮಾರು 1 ಲಕ್ಷ ರೂ. ಬೆಲೆಬಾಳುವ ದುಬಾರಿ ಐಫೋನ್‌ ಎಕ್ಸ್ ಮತ್ತು ಮೂಚಿ ಲೆದರ್ ಬ್ಯಾಗ್ ಗಿಫ್ಟ್‌ ನೀಡಿದ್ದಾರೆ.

ಸಂಸದರು ಬರೆದ ಪತ್ರದಲ್ಲೇನಿದೆ?

ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರಕಾರ, ಸಂಸದರಿಗೆ ಕೊಡಲು ದುಬಾರಿ ಉಡುಗೊರೆ ನೀಡುತ್ತಿರುವುದು ಸರಿಯಲ್ಲ. ಇದಕ್ಕಾಗಿ ಜನರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ. ಆದರೆ ಬೆಂಗಳೂರು ನಗರದ ಪೌರಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡುತ್ತಿಲ್ಲ. ರೈತರು ಸಾಲದ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಉಡುಗೊರೆ ಸ್ವೀಕರಿಸಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಅದನ್ನು ಹಿಂದಿರುಗಿಸುತ್ತಿದ್ದೇನೆ. ಸಾರ್ವಜನಿಕ ಹಣ ಸದುಪಯೋಗವಾಗಲಿ ಎಂದು ಒತ್ತಾಯಿಸುತ್ತೇನೆ ಎಂದು ರಾಜೀವ್ ಚಂದ್ರಶೇಖರ್ ಮಂಗಳವಾರ ಸಿಎಂ ಕಚೇರಿಗೆ ಪತ್ರ ಬರೆದು ಉಡುಗೊರೆ ಹಿಂದಿರುಗಿಸಿದ್ದಾರೆ.

ಸಿಎಂ ಕಚೇರಿ ಸ್ಪಷ್ಟನೆ: ಐಫೋನ್ ಮತ್ತು ಮೂಚಿ ಬ್ಯಾಗ್ ಅನ್ನು ಸಿಎಂ ನೀಡಿಲ್ಲ, ಬದಲಾಗಿ ನೀರಾವರಿ ಇಲಾಖೆ ನೀಡಿದೆ. ಸಂಸದರ ಸಭೆ ಕರೆದಾಗ ಅವರಿಗೆ ಉಡುಗೊರೆ ನೀಡುವ ಕ್ರಮವಿದೆ, ಅದನ್ನು ಪಾಲಿಸಲಾಗಿದೆ. ಆದರೆ ಶಾಸಕರಿಗೆ ಉಡುಗೊರೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ