ಬೆಂಗಳೂರು : ನನ್ನ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಐಟಿ ಇಲಾಖೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ''ಐಟಿ ಅಧಿಕಾರಿಗಳಿಗೆ ನಾನು ಈಗಾಗಲೇ ಎಲ್ಲ ಮಾಹಿತಿ ನೀಡಿದ್ದೇನೆ. ನ 7ರಂದು ನಿಮಗೆ ಎಲ್ಲ ಮಾಹಿತಿ ಲಭಿಸುತ್ತದೆ. ಆಗ ಇದೆಲ್ಲ ಬೆಳವಣಿಗೆ ಬಗ್ಗೆ ನೀವೇ ವಿಶ್ಲೇಷಣೆ ಮಾಡಬಹುದು. ನನ್ನನ್ನು ವಾಯ್ಸ್ಲೆಸ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ,''ಎಂದು ಹೇಳಿದರು.
''ಇಂಧನ ಖರೀದಿ ಅವ್ಯವಹಾರ ತನಿಖೆ ಸದನ ಸಮಿತಿ ವರದಿ ವಿಚಾರದಲ್ಲಿ ಕುಮಾರಸ್ವಾಮಿ ಅವರು ಇಷ್ಟು ದಿನ ಹೊಂದಿದ್ದ ನಿಲುವು ಬದಲಾಗಿದ್ದೇಕೆ ? ಕುಮಾರಸ್ವಾಮಿ ಸದನ ಸಮಿತಿ ಸದಸ್ಯರು. ಅವರ ಪಕ್ಷ ದ ಅಭಿಪ್ರಾಯ ಕೊಟ್ಟಿದ್ದಾರೆ. 7 ನೇ ತಾರೀಖು ವರದಿಗೆ ಸಹಿ ಹಾಕುವುದಾಗಿ ಹೇಳಿದ್ದರು. ಆದರೆ ಇಷ್ಟು ದಿನ ಇದ್ದ ನಿಲುವು ಈಗ್ಯಾಕೆ ಬದಲಾಗಿದೆ ?,'' ಎಂದು ಪ್ರಶ್ನಿಸಿದರು.
''ವರದಿಯಲ್ಲಿ ನಾವು ಏನು ಬಿಂಬಿಸಿದ್ದೇವೆ ಎಂಬುದು ಅವರಿಗೆ ಹೇಗೆ ಗೊತ್ತಾಗಲು ಸಾಧ್ಯ ? ಅವರು ಸದಸ್ಯರಾಗಿರುವುದರಿಂದ ಬಂದು ಮಾಹಿತಿ ಕೊಡಬೇಕು. ಕುಮಾರಸ್ವಾಮಿ ಅವರ ಬಾಯಿ ಮುಚ್ಚಿಸುವುದಕ್ಕೆ ಆಗುವುದಿಲ್ಲ ,ಅವರು ಸ್ವತಂತ್ರರಿದ್ದಾರೆ,'' ಎಂದು ಅಭಿಪ್ರಾಯಪಟ್ಟರು.
ಪಿಎಫ್ಐ ಜತೆಗೆ ಆರ್ಎಸ್ಎಸ್ ಕೂಡಾ ಬ್ಯಾನ್ ಆಗಲಿ
ಪಿಎಫ್ಐ ಜತೆಗೆ ತಮ್ಮ ಸಿದ್ಧಾಂತಗಳನ್ನ ಒತ್ತಾಯಪೂರ್ವಕವಾಗಿ ಜನರ ಮೇಲೆ ಹೇರುವ ಎಲ್ಲ ಸಂಘಟನೆಗಳು ಬ್ಯಾನ್ ಆಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಮಹಿಳಾ ಕಾಂಗ್ರೆಸ್ ಕಾರ್ಯಕಾರಿಣಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು,''ಪಿಎಫ್ಐ ಜತೆಗೆ ಆರ್ಎಸ್ಎಸ್ ಮತ್ತು ಭಜರಂಗದಳವೂ ಬ್ಯಾನ್ ಆಗಬೇಕು.ಯಡಿಯೂರಪ್ಪ ಪರಿವರ್ತನಾ ಯಾತ್ರೆ ಮಾಡಿದಷ್ಟು ಕಾಂಗ್ರೆಸ್ಗೆ ಲಾಭ,'' ಎಂದು ಹೇಳಿದರು.