ಬೆಂಗಳೂರು: ಬೆಂಗಳೂರಿನ ಫ್ಲ್ಯಾಟ್ವೊಂದರಲ್ಲಿ ಡಿ.1ರಂದು ಸುಮಾರು 4.8ಕೋಟಿ ಮೌಲ್ಯದ ಹೊಸ ಕರೆನ್ಸಿ ನೋಟು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಲ್ ಗುತ್ತಿಗೆದಾರ ಇಬ್ರಾಹಿಂ ಷರೀಫ್ನನ್ನು ಬಂಧಿಸದಂತೆ ಸಿಬಿಐಗೆ ಶುಕ್ರವಾರ ಹೈಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿ ಆನಂದ್ ಬೈರಾರೆಡ್ಡಿ ಅವರಿದ್ದ ಏಕಸದಸ್ಯಪೀಠ ಈ ಮಧ್ಯಾಂತರ ಆದೇಶ ನೀಡಿದೆ. ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್ ''ಅರ್ಜಿದಾರರು ಏಜೆನ್ಸಿ ನಡೆಸುತ್ತಿರುವ ತನಿಖೆಗೆ ಎಲ್ಲ ಸಹಕಾರ ನೀಡುವುದಾಗಿ ನ್ಯಾಯಾಲಯಕ್ಕೆ ವಾಗ್ದಾನ ನೀಡಿದರೆ ಅವರನ್ನು ಬಂಧಿಸುವುದಿಲ್ಲ, ''ಎಂದರು. ಅದಕ್ಕೆ ಅರ್ಜಿದಾರರ ಪರ ವಕೀಲರೂ ಒಪ್ಪಿದರು. ಎರಡೂ ಹೇಳಿಕೆಗಳನ್ನು ದಾಖಲಿಸಿಕೊಂಡ ನ್ಯಾಯಪೀಠ ನಂತರ ಈ ಆದೇಶ ನೀಡಿತು.
ಸಿಬಿಐ ದಾಖಲಿಸಿರುವ ಪ್ರಕರಣವನ್ನು ಪ್ರಶ್ನಿಸಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಷರೀಫ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ವಿಚಾರಣೆ ವೇಳೆ ನ್ಯಾಯಮೂರ್ತಿಗಳು ''ಈ ಪ್ರಕರಣದಲ್ಲಿ ಸಿಬಿಐ ಹೇಗೆ ಬಂತು? ಮನೆಯಲ್ಲಿ ಕರೆನ್ಸಿ ನೋಟುಗಳನ್ನು ಇಟ್ಟುಕೊಳ್ಳುವುದು ಅಪರಾಧವೇ''ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಅದಕ್ಕೆ ಉತ್ತರಿಸಿದ ಸಿಬಿಐ ವಕೀಲರು ''ಅರ್ಜಿದಾರರ ವಿರುದ್ಧ ಅಪರಾಧಿಕ ಪಿತೂರಿ ನಡೆಸಿರುವ ಆರೋಪವೂ ಇದೆ. ನ್ಯಾಯಾಲಯ ಮಧ್ಯಾಂತರ ಆದೇಶ ನೀಡಿದರೆ ತನಿಖೆಗೆ ತೊಂದರೆಯಾಗುತ್ತದೆ, ಪಿತೂರಿಯ ಜಾಲವನ್ನು ಭೇದಿಸುವುದು ಕಷ್ಟವಾಗುತ್ತದೆ,''ಎಂದು ಹೇಳಿದರು.
''ಆರ್ಬಿಐ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ವ್ಯಕ್ತಿಯೊಬ್ಬರಿಗೆ ನಿಗದಿತ ಹೆಚ್ಚಿನ ಹಣವನ್ನು ಖಾತೆಯಿಂದ ಡ್ರಾ ಮಾಡಿಕೊಳ್ಳಲು ಅವಕಾಶವಿಲ್ಲ. ಆದರೆ ಅರ್ಜಿದಾರರ ಮನೆಯಲ್ಲಿ 4.8ಕೋಟಿ ಮೌಲ್ಯದ ಹೊಸ ಕರೆನ್ಸಿ ನೋಟುಗಳು ಸಿಕ್ಕಿವೆ. ಅಧಿಕ ಮೌಲ್ಯದ ನೋಟುಗಳ ರದ್ದತಿ ನಂತರ ಮೊದಲ 20-25ದಿನಗಳಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ನಗದು ಹೊಂದಲು ಸಾಧ್ಯವಿಲ್ಲ. ಆದರೂ ಸಹ ಅವರು ಹೊಂದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ,''ಎಂದು ನ್ಯಾಯಪೀಠಕ್ಕೆ ವಿವರಿಸಿದರು.
''ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯಡಿ ಇಬ್ಬರು ಖಾಸಗಿ ಬ್ಯಾಂಕರ್ಗಳ ವಿರುದ್ಧವೂ ಸಿಬಿಐ ತನಿಖೆ ನಡೆಸುತ್ತಿದೆ,'' ಎಂದೂ ಅವರು ಹೇಳಿದರು.
ಅರ್ಜಿದಾರರ ಪರ ವಕೀಲ ಸಿ.ಎಚ್.ಜಾದವ್ ''ಖಾಸಗಿ ವ್ಯಕ್ತಿಗಳು ಹಾಗೂ ಎರಡು ಖಾಸಗಿ ಬ್ಯಾಂಕುಗಳ ವಿರುದ್ಧ ಕೇಸು ದಾಖಲಿಸಲು ಸಿಬಿಐಗೆ ಅಧಿಕಾರವಿಲ್ಲ, ಅದು ಅದರ ವ್ಯಾಪ್ತಿಗೆ ಬರುವುದೂ ಇಲ್ಲ. ಅರ್ಜಿದಾರರು ತಮ್ಮ ಬಳಿ ಹೇಗೆ ಅಷ್ಟೊಂದು ಪ್ರಮಾಣದ ಕರೆನ್ಸಿ ನೋಟುಗಳು ಇದ್ದವು ಎನ್ನುವುದಕ್ಕೆ ವಿವರಣೆ ನೀಡಲು ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 69ಎ ಪ್ರಕಾರ, 2017ರ ಮಾ.31ರವರೆಗೆ ಕಾಲಾವಕಾಶ ಇದೆ. ಅರ್ಜಿದಾರರ ಪುತ್ರಿ ಮದುವೆ 2017ರ ಜ.12 ರಿಂದ14ರವರೆಗೆ ನಿಗದಿಯಾಗಿತ್ತು.ಅದಕ್ಕಾಗಿ ಅವರು ಹಣ ಹೊಂದಿಸುತ್ತಿದ್ದರು,''ಎಂದು ನ್ಯಾಯಪೀಠಕ್ಕೆ ತಿಳಿಸಿದರು.