ಆ್ಯಪ್ನಗರ

ನಿತ್ಯಾ ಆಶ್ರಮದಲ್ಲಿ ಯುವತಿಯ ನಿಗೂಢ ಸಾವು: ಸಿಬಿಐ ತನಿಖೆ ಕೋರಿ ಮೃತಳ ತಾಯಿ ಅರ್ಜಿ

ನಾಲ್ಕು ವರ್ಷಗಳ ಹಿಂದೆ ಬಿಡಿದಿಯ ನಿತ್ಯಾನಂದ ಆಶ್ರಮದಲ್ಲಿ ನಡೆದ 24ವರ್ಷದ ಯುವತಿ ಸಂಗೀತಾಳ ನಿಗೂಢ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ...

Vijaya Karnataka 30 May 2018, 5:00 am
ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಬಿಡಿದಿಯ ನಿತ್ಯಾನಂದ ಆಶ್ರಮದಲ್ಲಿ ನಡೆದ 24ವರ್ಷದ ಯುವತಿ ಸಂಗೀತಾಳ ನಿಗೂಢ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂಬ ಅರ್ಜಿಗೆ ಸಂಬಂಧಿಸಿ ಪ್ರಮಾಣ ಪತ್ರ ಸಲ್ಲಿಸುವಂತೆ ಪೊಲೀಸರಿಗೆ ಹೈಕೋರ್ಟ್‌ ಆದೇಶ ನೀಡಿದೆ.
Vijaya Karnataka Web nityananda


ಮೃತ ಯುವತಿ ತಾಯಿ ತಮಿಳುನಾಡಿನ ತಿರುಚಿ ಜಿಲ್ಲೆಯ ನವಲೂರು ಕುಟಪಟ್ಟು ವಾಸಿ ಜಾನ್ಸಿರಾಣಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ಆಲಿಸಿದ ನ್ಯಾ. ಅರವಿಂದ್‌ ಕುಮಾರ್‌ ಅವರಿದ್ದ ಏಕಸದಸ್ಯ ಪೀಠ, ಜೂ 8ರೊಳಗೆ ಪೊಲೀಸರು ವಿವರಗಳುಳ್ಳ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸೂಚಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಅಡೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ ಅವರು ಸಲ್ಲಿಸಿದ ದಾಖಲೆಯನ್ನು ಸುರಕ್ಷಿತವಾಗಿಡಬೇಕು. ಮೂಲ ದಾಖಲೆಗಳ ನಕಲನ್ನು ಸರಕಾರಿ ವಕೀಲರಿಗೆ ನೀಡುವಂತೆ ರಿಜಿಸ್ಟ್ರಾರ್‌ ಜನರಲ್‌ಗೆ ಹೈಕೋರ್ಟ್‌ ಸೂಚಿಸಿದೆ. ಜೂನ್‌ 11ಕ್ಕೆ ವಿಚಾರಣೆ ಮುಂದೂಡಿದೆ.

ಸೋಮವಾರ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳು, ಪ್ರಕರಣದ ಬಗ್ಗೆ ಸಂದೇಹ ವ್ಯಕ್ತಪಡಿಸಿ ಮಂಗಳವಾರ ಎಲ್ಲ ದಾಖಲೆಗಳನ್ನು ಖುದ್ದು ಹಾಜರುಪಡಿಸುವಂತೆ ಎಎಜಿಗೆ ಸೂಚನೆ ನೀಡಿದ್ದರು.

ಅರ್ಜಿದಾರರ ಪರ ವಕೀಲರು ''2014ರ ಡಿ.28ರಂದು ಸಂಗೀತಾ ಬಿಡಿದಿಯ ನಿತ್ಯಾನಂದ ಆಶ್ರಮದಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದರು. ಪೋಲಿಸರು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಬೇಕು''ಎಂದು ಕೋರಿದರು.

ತಲೆಬರುಡೆಯಲ್ಲಿ ಬಟ್ಟೆ:

''ಸಂಗೀತಾ ಅತ್ಯಂತ ಆರೋಗ್ಯದಿಂದ ಇದ್ದಳು. ಆದರೆ ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆಂದು ಆಶ್ರಮದ ಸಿಬ್ಬಂದಿ ಹೇಳಿದ್ದಾರೆ. ನಿತ್ಯಾನಂದ ಸ್ವಾಮೀಜಿ ಹಾಗೂ ಅವರ ಭಕ್ತರು ಕೊಲೆಗೈಯ್ದಿರುವ ಸಾಧ್ಯತೆ ಇದೆ. ಆನಂತರ ಮರಣೋತ್ತರ ಪರೀಕ್ಷೆ ವೇಳೆ ಆಕೆಯ ಹೃದಯ , ಕಿಡ್ನಿ ಮತ್ತಿತರ ಪ್ರಮುಖ ಅಂಗಾಂಗಗಳನ್ನು ತೆಗೆಯಲಾಗಿದೆ. ಅಲ್ಲದೆ, ಆಕೆಯ ತಲೆಬರುಡೆಯಲ್ಲಿ ಆಕೆ ಧರಿಸಿದ್ದ ಜೀನ್ಸ್‌ ಹಾಗೂ ಬ್ಲೌಸ್‌ನ ತುಂಡು ಬಟ್ಟೆ ಇಡಲಾಗಿತ್ತು,'' ಎಂದು ಅರ್ಜಿದಾರರು ಅನುಮಾನ ವ್ಯಕ್ತಪಡಿಸಿದ್ದಾರೆ.

''2015ರ ಜ.3ರಂದು ರಾಮನಗರ ಡಿವೈಎಸ್‌ಪಿ, 2015ರ ಏ.17 ಹಾಗೂ 30ರಂದು ಕೇಂದ್ರ ವಲಯದ ಐಜಿಪಿಗೂ ನೀಡಿದ್ದರೂ ಪತ್ತೆ ಹಚ್ಚುವ ಪ್ರಯತ್ನವನ್ನೂ ನಡೆಸಿಲ್ಲ,'' ಎಂದು ಜಾನ್ಸಿರಾಣಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ