ಆ್ಯಪ್ನಗರ

ಧನಿಕ ರೈತರಿಗಿಲ್ಲ ಸಾಲಮನ್ನಾ ಭಾಗ್ಯ: ರೈತರಲ್ಲೂ 'ಜೊಳ್ಳು-ಗಟ್ಟಿ' ಭೇದಕ್ಕೆ ಮುಂದಾದ ಸರಕಾರ

ರೈತರ ಸಾಲ ಮನ್ನಾ ಯೋಜನೆ ಜಾರಿಯನ್ನು ಇನ್ನಷ್ಟು ತ್ವರಿತಗೊಳಿಸಿರುವ ರಾಜ್ಯ ಸರಕಾರ ರೈತರಲ್ಲೂ 'ಜೊಳ್ಳು-ಗಟ್ಟಿ ' ಭೇದಕ್ಕೆ ಮುಂದಾಗಿದ್ದು, ಯಾವುದೇ ಬ್ಯಾಂಕ್‌ಗಳಲ್ಲಿ ಗಣನೀಯ ಪ್ರಮಾಣದ ಹಣವನ್ನು ಠೇವಣಿ ಇಟ್ಟ ರೈತರನ್ನು ಯೋಜನಾ ವ್ಯಾಪ್ತಿಯಿಂದ ಹೊರಗಿಡಲು ನಿರ್ಧರಿಸಿದೆ.

Vijaya Karnataka 26 Aug 2018, 7:59 am
ಬೆಂಗಳೂರು: ರೈತರ ಸಾಲ ಮನ್ನಾ ಯೋಜನೆ ಜಾರಿಯನ್ನು ಇನ್ನಷ್ಟು ತ್ವರಿತಗೊಳಿಸಿರುವ ರಾಜ್ಯ ಸರಕಾರ ರೈತರಲ್ಲೂ 'ಜೊಳ್ಳು-ಗಟ್ಟಿ ' ಭೇದಕ್ಕೆ ಮುಂದಾಗಿದ್ದು, ಯಾವುದೇ ಬ್ಯಾಂಕ್‌ಗಳಲ್ಲಿ ಗಣನೀಯ ಪ್ರಮಾಣದ ಹಣವನ್ನು ಠೇವಣಿ ಇಟ್ಟ ರೈತರನ್ನು ಯೋಜನಾ ವ್ಯಾಪ್ತಿಯಿಂದ ಹೊರಗಿಡಲು ನಿರ್ಧರಿಸಿದೆ.
Vijaya Karnataka Web no loan waiver for farmers who have deposited money in the bank
ಧನಿಕ ರೈತರಿಗಿಲ್ಲ ಸಾಲಮನ್ನಾ ಭಾಗ್ಯ: ರೈತರಲ್ಲೂ 'ಜೊಳ್ಳು-ಗಟ್ಟಿ' ಭೇದಕ್ಕೆ ಮುಂದಾದ ಸರಕಾರ


ಸಾಲ ಮನ್ನಾದ ಬಗ್ಗೆ ಈಗಾಗಲೇ ಹೊರಡಿಸಿರುವ ಮಾರ್ಗದರ್ಶಿ ಸೂತ್ರದಲ್ಲಿ ಠೇವಣಿ ವಿಚಾರ ಪ್ರಸ್ತಾಪಿಸಲಾಗಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಚರ್ಚೆ ನಡೆದಿದ್ದು, ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಎಷ್ಟು ಮಂದಿ ರೈತರು ಠೇವಣಿ ಇಟ್ಟಿದ್ದಾರೆ ? ಅದರ ಮೊತ್ತ ಎಷ್ಟಾಗುತ್ತದೆ ? ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಮೂಲಕ ಸಾಲ ಮನ್ನಾ ಯೋಜನೆ ವ್ಯಾಪ್ತಿಯಿಂದ 'ಧನಿಕ'ರನ್ನು ಹೊರಗಿಡುವ ಪ್ರಯತ್ನಕ್ಕೆ ಸರಕಾರ ಮುಂದಾಗಿದ್ದು, ಒಟ್ಟು ಮೊತ್ತದಲ್ಲಿ ಒಂದಿಷ್ಟು ಉಳಿಕೆ ಮಾಡುವುದಕ್ಕೆ ಪ್ರಯತ್ನ ಆರಂಭಿಸಲಾಗಿದೆ.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್‌, ''ತೀರಾ ಕಷ್ಟದಲ್ಲಿರುವ ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಸರಕಾರ ಸಾಲ ಮನ್ನಾ ಮಾಡುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹೀಗಾಗಿ ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟ ರೈತರನ್ನು ಯೋಜನಾ ವ್ಯಾಪ್ತಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ,'' ಎಂದರು.

''ಠೇವಣಿ ಇಟ್ಟ ರೈತರು ದೊಡ್ಡ ಪ್ರಮಾಣದಲ್ಲಿ ಇಲ್ಲ. 1 ಲಕ್ಷ ರೂ.ವರೆಗಿನ ಚಾಲ್ತಿ ಸಾಲ ಮನ್ನಾ ಮಾಡುವ ಸಂದರ್ಭದಲ್ಲಿ ಠೇವಣಿ ಹಣವನ್ನು ವಜಾ ಮಾಡುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಉದಾಹರಣೆಗೆ ಒಬ್ಬ ರೈತ 10 ಸಾವಿರ ರೂ.ನ್ನು ತನ್ನ ಹೆಸರಿನಲ್ಲಿ ಠೇವಣಿ ಇಟ್ಟುಕೊಂಡಿದ್ದರೆ, ಅದನ್ನು ವಜಾ ಹಾಕಿ 90 ಸಾವಿರ ರೂ. ವರೆಗಿನ ಸಾಲ ಮನ್ನಾ ಮಾಡಲಾಗುತ್ತದೆ,'' ಎಂದು ವಿವರಿಸಿದರು.

ಇದರಿಂದ ಪ್ರಾಮಾಣಿಕ ರೈತರಿಗೆ ಅನ್ಯಾಯ ಮಾಡಿದಂತಾಗುವುದಿಲ್ಲವೇ ಎಂಬ ಪ್ರಶ್ನೆಗೆ, ''ಇಂಥ ವ್ಯಾಖ್ಯಾನದ ಮೂಲಕ ರೈತರಲ್ಲಿ ಗೊಂದಲ ಮೂಡಿಸುವುದು ಬೇಡ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಸಾಲ ಕಟ್ಟಿದ ರೈತರಿಗೆ 25000 ರೂ.ವರೆಗೆ ಪ್ರೋತ್ಸಾಹ ಧನ ನೀಡುತ್ತೇವೆ. ಹೀಗಾಗಿ ಯಾರಿಗೂ ಅನ್ಯಾಯವಾಗುವುದಿಲ್ಲ,'' ಎಂದು ಪ್ರತಿಪಾದಿಸಿದರು.

ಶೇ.12ರಷ್ಟು ಬಡ್ಡಿ


ಸಾಲ ಮನ್ನಾ ಯೋಜನೆಗೆ ಸಹಕರಿಸುವುದಾಗಿ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳು ಒಪ್ಪಿಕೊಂಡಿವೆ. ಇದರಲ್ಲಿ ಯಾವುದೇ ಗೊಂದಲ ಬೇಡ. ನಾಲ್ಕು ವರ್ಷದಲ್ಲಿ ಸಾಲ ತೀರಿಸಲು ಸರಕಾರ ಭರವಸೆ ನೀಡಿದೆ. ಇದಕ್ಕಾಗಿ ಶೇ.12ರ ದರದಲ್ಲಿ ಬಡ್ಡಿ ಕಟ್ಟುವುದಕ್ಕೆ ಸರಕಾರ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದೆ. ಹಣಕಾಸು ಇಲಾಖೆಯೂ ಒಪ್ಪಿಗೆ ನೀಡಿದೆ,'' ಎಂದು ಹೇಳಿದರು.

ಋಣಮುಕ್ತ ಪ್ರಮಾಣ ಪತ್ರಕ್ಕೆ ಅಡ್ಡಿಯಿಲ್ಲ : ಶಿವಶಂಕರ ರೆಡ್ಡಿ

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ ಸಾಲವನ್ನು ಸರಕಾರ ನಾಲ್ಕು ಕಂತುಗಳಲ್ಲಿ ತೀರಿಸಲು ನಿರ್ಧರಿಸಿದೆಯಾದರೂ 'ಋಣಮುಕ್ತಿ' ಪ್ರಮಾಣ ಪತ್ರವನ್ನು ಒಂದೇ ಹಂತದಲ್ಲಿ ನೀಡಲಾಗುತ್ತದೆ ಎಂದು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ''ರೈತರಿಗೆ ಋಣಮುಕ್ತಿ ಪತ್ರ ನೀಡುವುದಕ್ಕೆ ಬ್ಯಾಂಕ್‌ಗಳು ಕರಾರು ವಿಧಿಸಿಲ್ಲ. ನಾಲ್ಕು ಕಂತುಗಳಲ್ಲಿ ಸರಕಾರ ಹಣ ಸಂದಾಯ ಮಾಡುವ ಜತೆಗೆ ಶೇ.12ರ ದರದಲ್ಲಿ ಬಡ್ಡಿಯನ್ನೂ ನೀಡುತ್ತದೆ. ಹೀಗಾಗಿ ಮುಂದಿನ ಒಂದು ತಿಂಗಳೊಳಗಾಗಿ ಋಣಮುಕ್ತಿ ಪ್ರಮಾಣ ಪತ್ರ ನೀಡಲಾಗುತ್ತದೆ. ಇದರ ಜತೆಗೆ ಶೂನ್ಯ ಬಂಡವಾಳ ಕೃಷಿ ಉತ್ತೇಜನಕ್ಕೂ ನಿರ್ಧರಿಸಲಾಗಿದೆ,'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ