ಆ್ಯಪ್ನಗರ

ಮೋದಿಯಂತೆ ಸಿಎಂ ಅಭಯ, ಪೌರತ್ವ ತಿದ್ದುಪಡಿ ಕಾಯಿದೆಯಿಂದ ಯಾರಿಗೂ ಸಮಸ್ಯೆ ಇಲ್ಲ

ಪೌರತ್ವ ತಿದ್ದುಪಡಿ ಕಾಯಿದೆಯಿಂದ ಭಾರತದ ಯಾವುದೇ ಪ್ರಜೆಗೆ ಸಮಸ್ಯೆಯಾಗುವುದಿಲ್ಲಎಂಬ ಸ್ಪಷ್ಟ ಸಂದೇಶವನ್ನು ಪ್ರಧಾನಿ ಮೋದಿ ದಿಲ್ಲಿಯಲ್ಲಿ ನೀಡಿದ್ದಾರೆ. ಇದೇ ಮಾದರಿಯಲ್ಲಿ ಯಡಿಯೂರಪ್ಪ ಅವರೂ ಈ ಹೇಳಿಕೆ ನೀಡಿದ್ದಾರೆ.

Vijaya Karnataka Web 23 Dec 2019, 7:47 am
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆಯಿಂದ ಭಾರತದ ಯಾವುದೇ ಪ್ರಜೆಗೆ ಸಮಸ್ಯೆಯಾಗುವುದಿಲ್ಲಎಂಬ ಸ್ಪಷ್ಟ ಸಂದೇಶವನ್ನು ಪ್ರಧಾನಿ ಮೋದಿ ದಿಲ್ಲಿಯಲ್ಲಿ ನೀಡಿದ್ದಾರೆ. ಇದೇ ಮಾದರಿಯಲ್ಲಿ ಸಿಎಂ ಯಡಿಯೂರಪ್ಪ ಅವರೂ ರಾಜ್ಯದಲ್ಲಿ ಹೇಳಿಕೆ ನೀಡಿದ್ದಾರೆ.
Vijaya Karnataka Web Bengaluru


''ಈ ವಿಚಾರದಲ್ಲಿ ಕಾಂಗ್ರೆಸ್‌ನವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಜತೆಗೆ ಮಂಗಳೂರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ರಾಜಕೀಯ ಪ್ರೇರಿತ,'' ಎಂದು ಆಕ್ಷೇಪಿಸಿದ್ದಾರೆ.

''ಸಿಎಎ ಮತ್ತು ಎನ್‌ಆರ್‌ಸಿಯಿಂದ ಭಾರತದ ಮುಸ್ಲಿಂ ಸಮುದಾಯಕ್ಕೆ ಏನು ತೊಂದರೆಯಾಗಲಿದೆ ಎನ್ನುವುದನ್ನು ಸಿದ್ದರಾಮಯ್ಯ ಮತ್ತು ಎಚ್‌ಡಿಕೆ ತಿಳಿಸಲಿ,'' ಎಂದು ಸವಾಲು ಹಾಕಿದರು. ಹಾಗೇಯೇ ಇದು ರಾಷ್ಟ್ರೀಯ ಕಾಯಿದೆ. ಮುಸ್ಲಿಮರೂ ಸೇರಿ ಭಾರತದ ಯಾವುದೇ ಪ್ರಜೆಗಳ ಹಕ್ಕಿಗೂ ತೊಂದರೆಯಾಗುವುದಿಲ್ಲ,''ಎಂದು ಖಚಿತಪಡಿಸಿದರು.

ಮಂಗಳೂರು ಗೋಲಿಬಾರ್‌ ಪ್ರಕರಣ, ತನಿಖೆಗೆ ಸಿದ್ಧವಾದ ಸರಕಾರ

''ರಾಜ್ಯದ ಜನರಿಗೂ ಕಾಯಿದೆಯಿಂದ ತೊಂದರೆ ಇಲ್ಲಎಂಬ ಭರವಸೆಯನ್ನು ನಾನೂ ಕೊಡುತ್ತೇನೆ. ನಾನು ಮುಸ್ಲಿಂ ಬಾಂಧವರನ್ನು ಭೇಟಿಯಾದಾಗಲೂ ಇದರಿಂದ ಅನ್ಯಾಯವಾಗುವುದಾಗಿ ಅವರಲ್ಲಿಒಬ್ಬರೂ ಹೇಳಿಲ್ಲ,'' ಎಂದಿದ್ದಾರೆ.

ಎಚ್‌ಡಿಕೆ ವಿರುದ್ಧ ಕಿಡಿ
''ದೊಡ್ಡ ಮುತ್ಸದ್ದಿಯಂತೆ ಮಾತನಾಡುತ್ತಿರುವ ಹೆಚ್‌.ಡಿ. ಕುಮಾರಸ್ವಾಮಿ ಅಲ್ಪಸಂಖ್ಯಾತರನ್ನು ಒಲೈಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಮಂಗಳೂರಿಗೆ ತೆರಳಿ ಬೆಂಕಿ ಹತ್ತಿರುವ ಮನೆಯಲ್ಲಿಗಳ ಹಿರಿಯುವ ಕೆಲಸ ಮಾಡಿದ್ದಾರೆ. ಅಮಾಯಕರ ಮೇಲೆ ದೌರ್ಜನ್ಯವೆಸಗಲಾಗಿದೆ ಎಂದು ಹೇಳುವ ಅವರು ತಮ್ಮ ಕೀಳುತನ ಪ್ರದರ್ಶಿಸಿದ್ದಾರೆ.

‘ಎಚ್‌ಡಿಕೆಯಿಂದ ಮುಸ್ಲಿಮರ ದಾರಿ ತಪ್ಪಿಸುವ ಪ್ರಯತ್ನ’ : ಬಿಎಸ್‌ವೈ ಕಿಡಿ

ಅವರಿಗೆ ಗೊತ್ತಿರಲಿ. ಅಲ್ಲಿ ಗಲಭೆಯಲ್ಲಿ ಪಾಲ್ಗೊಂಡವರು ಸಂಭಾವಿತ ನಾಗರಿಕರಲ್ಲ. ಸಂಭಾವಿತರೇಕೆ ಗಲಭೆಯಲ್ಲಿ ತೊಡಗಿಸಿಕೊಳ್ಳುತ್ತಾರೆ? ಗಲಭೆಕೋರರು, ಪೊಲೀಸ್‌ ಠಾಣೆಗೆ ನುಗ್ಗಿ ಶಸ್ತ್ರಾಗಾರದ ಗುಂಡು, ಗೋಲಿಗಳನ್ನು ಕದಿಯುವ ದುಸ್ಸಾಹಸಕ್ಕೆ ಕೈಹಾಕಿದ್ದರು. ಪೊಲೀಸರು ಪರಿಸ್ಥಿತಿ ಕೈಮೀರಿದಾಗ ಗುಂಡು ಹಾರಿಸಿದ್ದಾರೆ. ಕುಮಾರಸ್ವಾಮಿಯವರು ಜನರು ಯುದ್ಧಕ್ಕೆ ಬಂದಿರಲಿಲ್ಲ. ಪ್ರತಿಭಟನೆಗೆ ಬಂದಿದ್ದರು ಎನ್ನುತ್ತಾರೆ. 144 ಕಲಂ ಜಾರಿಯಲ್ಲಿದ್ದರೂ ಏಕೆ ಪ್ರತಿಭಟಿಸಿ ಕಾನೂನು ಉಲ್ಲಂಸಿದರು? ಮಂಗಳೂರು ಗಲಭೆಗೆ ಕಾರಣರಾರೆಂದು ಎಚ್‌ಡಿಕೆ ಹೇಳಲಿ. ಕಾಂಗ್ರೆಸ್‌ ಮತ್ತು ಬೇರೆ ಪ್ರತಿಪಕ್ಷಗಳ ಮುಖಂಡರ ಹೇಳಿಕೆಯಿಂದ ಇಂಥ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಶಾಸಕ ಯು.ಟಿ.ಖಾದರ್‌ ಪ್ರಚೋದನಕಾರಿ ಹೇಳಿಕೆಯಿಂದ ಗಲಭೆಯಾಗಿದೆ,'' ಎಂದು ಆಕ್ಷೇಪಿಸಿದರು.

ಮಂಗಳೂರು ಗಲಭೆಯಲ್ಲಿ ಮೃತಪಟ್ಟ ಇಬ್ಬರ ಕುಟುಂಬಸ್ಥರಿಗೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧವೂ ಪ್ರಹಾರ ಮಾಡಿದ ಅವರು, '' ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರೈತರು ಆತ್ಮಹತ್ಯೆ ಮಾಡಿಕೊಂಡಾಗ ರೈತ ಕುಡಿದ ಅಮಲಿನಲ್ಲಿವಿಷ ಕುಡಿದಿದ್ದಾನೆ. ಸಾಲದಿಂದಲ್ಲಎಂದು ಹೇಳಿ ಇಡೀ ರೈತ ಸಮೂಹಕ್ಕೆ ಅವಮಾನ ಮಾಡಿದ್ದರು. ಮಹದಾಯಿ ಹೋರಾಟ ಸಂದರ್ಭದಲ್ಲಿ ರೈತರ ಮೇಲೆ ಗೋಲಿಬಾರ್‌ ಮಾಡಿ ರೈತರನ್ನು ಮನಸೋ ಇಚ್ಛೆ ಥಳಿಸಿದ್ದರು. ವಿಜಯಪುರದ ಎನ್‌ಟಿಟಿಪಿಸಿ ಭೂಸ್ವಾಧೀನ ವೇಳೆ ರೈತರ ಮೇಲೆ ಗೋಲಿಬಾರ್‌ ಮಾಡಿದಾಗ ನಿಮ್ಮ ಜನಪರ ಕಾಳಜಿ ಎಲ್ಲಿಹೋಗಿತ್ತು?,'' ತರಾಟೆಗೆ ತೆಗೆದುಕೊಂಡರು.

‘ಅತೀ ಶೀಘ್ರದಲ್ಲೇ ಜನ ನಿಮಗೆ ನನ್ನ ಅಡ್ರೆಸ್‌ ತೋರಿಸುತ್ತಾರೆ’ ! ಮಾರ್ಮಿಕ ಮಾತಲ್ಲಿ ಬಿಎಸ್‌ವೈಗೆ ಎಚ್‌ಡಿಕೆ ಟಾಂಗ್

ಎಚ್‌ಡಿಕೆಗೆ ಭ್ರಮನಿರಸನ
''ಉಪ ಚುನಾವಣೆಯಲ್ಲಿಒಂದೂ ಸ್ಥಾನ ಗೆಲ್ಲಲಾಗದ್ದರಿಂದ ಭ್ರಮನಿರಸನರಾದ ಎಚ್‌ಡಿಕೆ ನಮ್ಮ ಅಧಿಕಾರದ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ನಮ್ಮ ಸರಕಾರ ಸುಭದ್ರವಾಗಿದೆ ಮತ್ತು ಮೂರುವರೆ ವರ್ಷ ಅಧಿಕಾರದಲ್ಲಿರುತ್ತದೆ. ನಮ್ಮ ಬಗ್ಗೆ ಕುಮಾರಸ್ವಾಮಿಯವರು ಕಾಳಜಿ ತೋರಿಸುವ ಅಥವಾ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ. ನಿಮ್ಮ ಪರಿಸ್ಥಿತಿ ಈಗಲೇ ಹೀಗಾಗಿದೆ. ಮುಂದೆ ಅಡ್ರೆಸ್‌ ಇಲ್ಲದಂತಾಗುತ್ತದೆ,'' ಎಂದು ಸಿಎಂ ವ್ಯಂಗ್ಯವಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ