ಆ್ಯಪ್ನಗರ

ಡಿಕೆಶಿ ಉಸ್ತುವಾರಿಗೆ ಆಕ್ಷೇಪವಿಲ್ಲ: ಸತೀಶ್‌ ವಾಗ್ದಾಳಿ

ವಿಕ ಸುದ್ದಿಲೋಕ ಬೆಂಗಳೂರು ಎರಡ್ಮೂರು ಶಾಸಕರು ರಾಜೀನಾಮೆ ನೀಡಿದರೆ ಸರಕಾರಕ್ಕೆ ಏನು ಸಮಸ್ಯೆಯಾಗುತ್ತೆ? ಇಂತಹ ಪ್ರಯತ್ನ ಮಾಡಿದ್ದ ರಮೇಶ್‌ ಜಾರಕಿಹೊಳಿ ಬಳಿ ಈಗ ಸಂಖ್ಯಾಬಲ ಇಲ್ಲ...

Vijaya Karnataka 1 May 2019, 5:00 am
ಬೆಂಗಳೂರು: ''ಸಚಿವ ಡಿ.ಕೆ.ಶಿವಕುಮಾರ್‌ಗೆ ಕುಂದಗೋಳ ವಿಧಾನಸಭೆ ಉಪಚುನಾವಣಾ ಉಸ್ತುವಾರಿ ವಿಚಾರದಲ್ಲಿ ನನ್ನದೇನೂ ಆಕ್ಷೇಪ ಇಲ್ಲ ಎಂದು ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web Satish Jarkiholi - cong

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿತನ ಆಧಾರದಲ್ಲಿ ಡಿ.ಕೆ.ಶಿವಕುಮಾರ್‌ಗೆ ಉಸ್ತುವಾರಿ ನೀಡಲಾಗಿದೆ. ಈ ವಿಚಾರದಲ್ಲಿ ನನಗೆ ಯಾವ ಅಸಮಧಾನವೂ ಇಲ್ಲ. ನಾನೇನೂ ಸದ್ದು ಮಾಡಿಲ್ಲ.ಇಂತಹ ವಿಚಾರ ಮಾಧ್ಯಮಗಳಲ್ಲಿ ಸದ್ದಾಗುತ್ತಿದೆ ಅಷ್ಟೇ. ನಾವೆಲ್ಲಾ ಒಟ್ಟಾಗಿ ಉಪಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕೆಲಸ ಮಾಡುತ್ತಿದ್ದೇವೆ'' ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.
'ಸತೀಶ್‌ ಜಾರಕಿಹೊಳಿ ಸಾಹುಕಾರ್‌, ನಾನು ಸಾಮಾನ್ಯ ಪ್ರಜೆ' ಎಂಬ ಶಿವಕುಮಾರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ''ನಾನು ಎಲ್ಲೂ ಡಿ.ಕೆ.ಶಿವಕುಮಾರ್‌ ಬಗ್ಗೆ ಮಾತನಾಡಿಲ್ಲ. ಅವರೂ ನನ್ನ ಬಗ್ಗೆ ಅಷ್ಟೊಂದು ಆತುರವಾಗಿ ಮಾತನಾಡಬಾರದಾಗಿತ್ತು. ಅನಾವಶ್ಯಕವಾಗಿ ಶಿವಕುಮಾರ್‌ ನನ್ನ ಬಗ್ಗೆ ಮಾತನಾಡಿದ್ದಾರೆ. ಯಾರ ಬಗ್ಗೆಯಾದರೂ ಹೇಳಿಕೆ ನೀಡುವ ಮೊದಲು ವಾಸ್ತವಾಂಶ ತಿಳಿದುಕೊಂಡು ಮಾತನಾಡಲಿ''ಎಂದು ತಿರುಗೇಟು ನೀಡಿದರು.
ಎರಡ್ಮೂರು ಶಾಸಕರು ರಾಜೀನಾಮೆ ನೀಡಿದರೆ ಸರಕಾರಕ್ಕೆ ಏನು ಸಮಸ್ಯೆಯಾಗುತ್ತೆ? ಇಂತಹ ಪ್ರಯತ್ನ ಮಾಡಿದ್ದ ರಮೇಶ್‌ ಜಾರಕಿಹೊಳಿ ಬಳಿ ಈಗ ಸಂಖ್ಯಾಬಲ ಇಲ್ಲ. ಏಕಾಂಗಿಯಾಗಿದ್ದಾರೆ'' ಎಂದು ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
''ಸಮ್ಮಿಶ್ರ ಸರಕಾರಕ್ಕೆ ಯಾರಿಂದಲೂ ಸಮಸ್ಯೆಯಾಗುವುದಿಲ್ಲ. ಮೈತ್ರಿ ಸರಕಾರವನ್ನು ಉರುಳಿಸುವ ಸಾಮರ್ಥ್ಯ‌ ರಮೇಶ್‌ ಅವರಿಗೆ ಇಲ್ಲ. ಅದಕ್ಕೆ ಬೇಕಾದ ಶಾಸಕರ ಸಂಖ್ಯಾಬಲವೂ ಅವರಿಗೆ ಸಿಗುವುದಿಲ್ಲ. ಈವರೆಗೆ ಆಗಿದ್ದು ಆಗಿಹೋಗಿದೆ. ಇನ್ನು ಮುಂದಾದರೂ ಪಕ್ಷ ದ ಪರವಾಗಿ ಕೆಲಸ ಮಾಡಲಿ'' ಎಂದು ಸಲಹೆ ಮಾಡಿದರು.
''ರಮೇಶ್‌ ವಿಭಿನ್ನ ನಡೆಯ ಎಲ್ಲ ಬೆಳವಣಿಗೆಗಳಿಗೆ ಅವರ ಅಳಿಯ ಅಂಬಿರಾಯ ಪಾಟೀಲ್‌ ಕಾರಣ. ಇದನ್ನು ವಿರೋಧಿಸಿದ ಕಾರಣಕ್ಕೆ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಪಕ್ಷ ಸಂಘಟನೆ ಮಾಡಬೇಡ, ಸಚಿವ ಸಂಪುಟ ಸಭೆಗೆ ಹೋಗಬೇಡ ಎಂದೇನೂ ನಾನು ರಮೇಶ್‌ಗೆ ಹೇಳಿರಲಿಲ್ಲ'' ಎಂದು ಸತೀಶ್‌ ಜಾರಕಿಹೊಳಿ ಕಿಡಿಕಾರಿದರು.
ಮೈತ್ರಿ ಸರಕಾರದ ವಿರುದ್ಧ ಬಂಡಾಯಕ್ಕೆ ಪ್ರಚೋದನೆ ನೀಡಿದ್ದೇ ಸತೀಶ್‌ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ''ರಮೇಶ್‌ ಸಂದರ್ಭಕ್ಕೆ ತಕ್ಕಂತೆ ಒಮ್ಮೆ ಡಿ.ಕೆ.ಶಿವಕುಮಾರ್‌, ಮತ್ತೊಮ್ಮೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೀಗೆ ಒಬ್ಬೊಬ್ಬರ ವಿರುದ್ಧ ಹೇಳಿಕೆ ಕೊಡುತ್ತಾರೆ. ಈಗ ನನ್ನ ವಿರುದ್ಧ ಇಲ್ಲಸಲ್ಲದ ಮಾತಾಡುತ್ತಿದ್ದಾರೆ. ಆ ಒಂದು ವಸ್ತು ಕಳೆದುಕೊಂಡು ಅವರು ಹೀಗೆಲ್ಲಾ ಆಡುತ್ತಿದ್ದಾರೆ'' ಎಂದು ಗರಂ ಆದರು.
''ರಮೇಶ್‌ ಅನವಶ್ಯಕವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇಷ್ಟಕ್ಕೂ ರಮೇಶ್‌ ಇನ್ನೂ ಚಿಕ್ಕ ಹುಡುಗನಲ್ಲ. ಐದು ಬಾರಿ ಶಾಸಕರಾಗಿದ್ದಾರೆ. ವಿಚಾರ ಮಾಡುವ ಶಕ್ತಿ ಬೇಡವೇ,''ಎಂದು ಪ್ರಶ್ನಿಸಿದರು.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ