ಆ್ಯಪ್ನಗರ

ಈಶಾನ್ಯ ಪ್ರಿಯ ಎಚ್ಡಿ ರೇವಣ್ಣ

ಶುಭಮುಹೂರ್ತವೆಂದು ನಿಗದಿಯಾಗಿದ್ದ ಮಧ್ಯಾಹ್ನ 2.12ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಆರಂಭವಾಯಿತು. ಮೊದಲಿಗರಾಗಿ ಎಚ್‌.ಡಿ.ರೇವಣ್ಣ ಅವರೇ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.

Vijaya Karnataka 7 Jun 2018, 9:55 am
ಬೆಂಗಳೂರು: ಶುಭಮುಹೂರ್ತವೆಂದು ನಿಗದಿಯಾಗಿದ್ದ ಮಧ್ಯಾಹ್ನ 2.12ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಆರಂಭವಾಯಿತು. ಮೊದಲಿಗರಾಗಿ ಎಚ್‌.ಡಿ.ರೇವಣ್ಣ ಅವರೇ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಚಪ್ಪಲಿಯನ್ನು ಬದಿಗಿರಿಸಿ ಪ್ರಮಾಣ ಸ್ವೀಕರಿಸಿದ ರೇವಣ್ಣ , ನಂತರ ಕುಳಿತು ಸಹಿ ಹಾಕಲು ಅಧಿಕಾರಿಗಳು ಸೂಚಿಸಿದರೂ ಈಶಾನ್ಯಕ್ಕೆ ಅಭಿಮುಖವಾಗಿ ಬಗ್ಗಿನಿಂತು ಸಹಿ ಮಾಡಿದರು. ಡಿ.ಕೆ.ಶಿವಕುಮಾರ್‌ ಅವರು ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಹತ್ತಿದಾಗ ಘೋಷಣೆ, ಶಿಳ್ಳೆ ಜೋರಾಯಿತು. ಶಿವಕುಮಾರ್‌ ಅವರು ಐಟಿ ದಾಳಿ ಬಳಿಕ ಮೊರೆಹೋಗಿದ್ದ ‘ಅಜ್ಜಯ್ಯ’ನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಗಮನ ಸೆಳೆಯಿತು. ಗರಿಗರಿ ಪಂಚೆ, ಶರಟು ಹಾಗೂ ಹೆಗಲ ಮೇಲೆ ಟವಲ್‌ ಹಾಕಿಕೊಂಡು ಡಿ.ಕೆ.ಶಿವಕುಮಾರ್‌ ಆಗಮಿಸಿದ್ದರು. ಜಿ.ಟಿ.ದೇವೇಗೌಡ ಅವರು ‘ಚಾಮುಂಡೇಶ್ವರಿ’ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಮನಗೂಳಿ ಅವರು ಮನೆದೇವರು ಬಸವಣ್ಣ ಹಾಗೂ ಅಂಬಾ ಭವಾನಿ ಹೆಸರಿನಲ್ಲಿ ಹಾಗೂ ರಮೇಶ್‌ ಜಾರಕಿಹೊಳಿ ಅವರು ‘ಲಕ್ಷ್ಮಿದೇವಿ’ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ವೆಂಕಟರಾವ್‌ ನಾಡಗೌಡ ಹಸಿರುಶಾಲು ಹಾಕಿಕೊಂಡು ಬಂದಿದ್ದರೆ, ಸಿ.ಎಸ್‌.ಪುಟ್ಟರಾಜು ಅವರು ‘ಜಗನ್ಮಾತೆ ತ್ರಿಪುರ ಸುಂದರಿ’ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪುಟ್ಟರಾಜು ಮತ್ತು ಸಾ.ರಾ.ಮಹೇಶ್‌ ಇಬ್ಬರೂ ಪ್ರಮಾಣ ವಚನ ಸ್ವೀಕಾರದ ಬಳಿಕ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕಾಲು ಮುಟ್ಟಿ ನಮಸ್ಕರಿಸಿದರು.
Vijaya Karnataka Web Ravanna


- ಖಾದರ್‌ಗೆ ಜಮೀರ್‌ ಕಿಸ್‌ -

ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ವೇದಿಕೆಯಿಂದ ಕೆಳಗಿಳಿದುಬಂದ ಯು.ಟಿ.ಖಾದರ್‌ ಅವರನ್ನು ಜಮೀರ್‌ ಅಹ್ಮದ್‌ ಖಾನ್‌ ತಬ್ಬಿ, ಮುತ್ತಿಟ್ಟು ಅಭಿನಂದಿಸಿದರು. ನಂತರದ ಅವಕಾಶವಾಗಿ ಜಮೀರ್‌ ‘ಅಲ್ಲಾ ಮತ್ತು ತಾಯಿ’ ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಪಡೆದರು. ಬಿಎಸ್ಪಿಯ ಎನ್‌.ಮಹೇಶ್‌ ಅವರು ಬುದ್ಧ, ಬಸವ ಮತ್ತು ಅಂಬೇಡ್ಕರ್‌ ಹೆಸರಿನಲ್ಲಿ ಹಾಗೂ ಶಿವಾನಂದ ಪಾಟೀಲ್‌ ಅವರು ‘ಅಣ್ಣ ಬಸವಣ್ಣ’ನ ಹೆಸರಿನಲ್ಲಿ ಪ್ರತಿಜ್ಞಾವಿಧಿ ಪಡೆದರು. ರಾಜಶೇಖರ ಪಾಟೀಲ್‌ ಅವರು ವೀರಭದ್ರೇಶ್ವರ ಹೆಸರಿನಲ್ಲಿ ಹಾಗೂ ಶಂಕರ್‌ ಅವರು ಮನೆದೇವರು ಮೈಲಾರಲಿಂಗೇಶ್ವರ ಹೆಸರಿನಲ್ಲಿ ಪ್ರಮಾಣ ಮಾಡಿದರು.

- ದೀರ್ಘ ಸಮಯ ಹಿಡಿದ ಸಮಾರಂಭ -


ಪ್ರತಿಬಾರಿ ಐದಾರು ಸಚಿವರಿಗೆ ಒಟ್ಟಿಗೇ ಪ್ರಮಾಣ ವಚನ ಬೋಧಿಸಲಾಗುತ್ತಿತ್ತು. ಆದರೆ, ಬುಧವಾರ ಎಲ್ಲ 25 ಮಂದಿಗೂ ಪ್ರತ್ಯೇಕವಾಗಿ ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸಿದರು. ಒಬ್ಬೊಬ್ಬರು ಪ್ರಮಾಣ ವಚನ ಸ್ವೀಕರಿಸಿ ರಾಜ್ಯಪಾಲರಿಂದ ಹೂಗುಚ್ಛ ಪಡೆದು, ವೇದಿಕೆಯಲ್ಲಿದ್ದ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರಿಂದ ಅಭಿನಂದನೆ ಸ್ವೀಕರಿಸಿದರು. ಹೀಗಾಗಿ, ಪ್ರಮಾಣ ವಚನ ಸ್ವೀಕಾರ ಸಮಾರಂಭ ಸುಮಾರು ಒಂದು ಕಾಲು ತಾಸು ನಡೆಯಿತು. ಮೊದಲಿಗರಾಗಿ ಎಚ್‌.ಡಿ.ರೇವಣ್ಣ ಮತ್ತು ಕೊನೆಯವರಾಗಿ ಜಯಮಾಲಾ ಪ್ರಮಾಣವಚನ ಪಡೆದರು.

- ಸಿದ್ದುಗೆ ಮುಖಾಮುಖಿ ಆಗದ ಜಿಟಿಡಿ

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಬಲಬದಿಯಿಂದ ವೇದಿಕೆ ಹತ್ತಿ ಎಡಬದಿಯಿಂದ ಇಳಿದುಬರಬೇಕಿತ್ತು. ಪ್ರಮಾಣ ವಚನ ಸ್ವೀಕಾರ ಬಳಿಕ ಕೆಳಗಿಳಿದು ಬರುವ ಪ್ರತಿಯೊಬ್ಬರೂ ವೇದಿಕೆ ಮುಂಭಾಗದಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೈಕುಲುಕಿ ಬರುತ್ತಿದ್ದರು. ಆದರೆ, ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಮಣಿಸಿದ ದಿನದಿಂದಲೂ ನೇರ ಮುಖಾಮುಖಿ ಆಗದ ಜಿ.ಟಿ.ದೇವೇಗೌಡ ಅವರು, ಈಗಲೂ ಸಿದ್ದರಾಮಯ್ಯ ಅವರಿಗೆ ಮುಖಾಮುಖಿ ಆಗಲು ಬಯಸದೆ ವೇದಿಕೆ ಏರಿದ್ದ ಭಾಗದಿಂದಲೇ ಕೆಳಗಿಳಿದುಬಂದಿದ್ದು ಸಭೆಯ ಗಮನ ಸೆಳೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ