ಆ್ಯಪ್ನಗರ

ಜಿಲ್ಲೆಗೆರಡು ಸೀಟ್‌ ಕೊಡುವಂತೆ ಬಿಜೆಪಿ ಓಬಿಸಿ ಮುಖಂಡರ ಆಗ್ರಹ

ಸಿಎಂ ಸಿದ್ದರಾಮಯ್ಯ ಅವರ ಅಹಿಂದ ರಾಜಕಾರಣಕ್ಕೆ ಸೆಡ್ಡು ಹೊಡೆಯಬೇಕಿದ್ದರೆ ಬಿಜೆಪಿ ಮುಖಂಡರು ಹಿಂದುಳಿದ ವರ್ಗದ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಲೇಬೇಕಿದ್ದು, ಪ್ರತಿ ಜಿಲ್ಲೆಯಲ್ಲಿ ...

Vijaya Karnataka 15 Jan 2018, 5:00 am

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ಅಹಿಂದ ರಾಜಕಾರಣಕ್ಕೆ ಸೆಡ್ಡು ಹೊಡೆಯಬೇಕಿದ್ದರೆ ಬಿಜೆಪಿ ಮುಖಂಡರು ಹಿಂದುಳಿದ ವರ್ಗದ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಲೇಬೇಕಿದ್ದು, ಪ್ರತಿ ಜಿಲ್ಲೆಯಲ್ಲಿ ತಲಾ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಆಗ್ರಹ ವ್ಯಕ್ತವಾಗಿದೆ.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಧಾರಾಸಿಂಗ್‌ ಚೌಹಾಣ್‌ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಮೋರ್ಚಾ ವಿಶೇಷ ಸಭೆಯಲ್ಲಿ ರಾಜ್ಯ ಮುಖಂಡರು ಈ ಒತ್ತಾಯ ಮಂಡಿಸಿದ್ದು, ಉತ್ತರ ಪ್ರದೇಶ ಸೇರಿದಂತೆ ರಾಷ್ಟ್ರದ ಇತರೆ ಭಾಗಗಳಲ್ಲಿ ಹಿಂದುಳಿದವರಿಗೆ ನೀಡಿದ ಆದ್ಯತೆಯನ್ನು ರಾಜ್ಯದಲ್ಲೂ ನೀಡುವಂತೆ ಆಗ್ರಹಿಸಲಾಗಿದೆ.

ರಾಜ್ಯದಲ್ಲಿ ಇಷ್ಟು ವರ್ಷ ಬಿಜೆಪಿ ಸೀಟು ಹಂಚಿಕೆ ಸಂದರ್ಭದಲ್ಲಿ ಹಿಂದುಳಿದ ವರ್ಗದವರಿಗೆ ನಿರೀಕ್ಷಿತ ಸ್ಥಾನ ನೀಡಿಲ್ಲ. ಸಾಮಾನ್ಯ ವರ್ಗದ ಕ್ಷೇತ್ರಗಳಲ್ಲೇ ಹಿಂದುಳಿದವರು ಸ್ಪರ್ಧೆ ಮಾಡಬೇಕು. ಹೀಗಾಗಿ ಪಕ್ಷದ ವೇದಿಕೆಯಲ್ಲೇ ಈ ನಿರ್ಣಯ ತೆಗೆದುಕೊಂಡರೆ ಸೀಟು ಹಂಚಿಕೆ ಮಾಡುವಾಗ ಗೊಂದಲ ಉಂಟಾಗುವುದಿಲ್ಲ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.

ಮುಖಂಡರು ಈ ಬೇಡಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಗಮನಕ್ಕೆ ತರುವುದಾಗಿ ಭರವಸೆ ನೀಡಿರುವ ಧಾರಾ ಸಿಂಗ್‌ ಪ್ರತಿ ಕ್ಷೇತ್ರದಿಂದ ತಲಾ ಎರಡು ಆಕಾಂಕ್ಷಿಗಳ ಪಟ್ಟಿ ಮಾಡಿ. ಈ ಬಗ್ಗೆ ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷೆ ರೇಣುದೇವಿ, ರಾಜಸ್ಥಾನ ಗೋ ಸಂರಕ್ಷಣಾ ಸಮಿತಿ ಅಧ್ಯಕ್ಷ ರಾಜೇಂದ್ರ ಸಿಂಗ್‌ ರಾಜಪುರೋಹಿತ್‌, ರಾಜ್ಯ ಹಿಂದುಳಿದ ಮೋರ್ಚಾ ಉಸ್ತುವಾರಿ ಕೆ.ಎಸ್‌.ಈಶ್ವರಪ್ಪ, ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಉಪಾಧ್ಯಕ್ಷ ಹುಲಿ ನಾಯ್ಕರ್‌, ಪ್ರಧಾನ ಕಾರ್ಯದರ್ಶಿ ವರ್ತೂರು ಶ್ರೀಧರ್‌, ಮಾಜಿ ಸಚಿವ ಕುಮಾರ ಬಂಗಾರಪ್ಪ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ