ಆ್ಯಪ್ನಗರ

ಸ್ಪೀಕರ್‌ಗೆ ಅಧಿಕೃತ ಸಲಹೆಗಾರರ ನೇಮಕ: ಮತ್ತೊಂದು ವಿವಾದಾತ್ಮಕ ನಡೆ

ವೃಂದ ಮತ್ತು ನೇಮಕ (ಸಿಆಂಡ್‌ಆರ್‌) ನಿಯಮದಲ್ಲಿ ಅವಕಾಶವೇ ಇಲ್ಲದಿದ್ದರೂ ಹುದ್ದೆ ಸೃಷ್ಟಿ ಮಾಡಿರುವ ಆರೋಪ....

Vijaya Karnataka 16 Oct 2019, 7:16 am
ಬೆಂಗಳೂರು: ಒಂದಾದ ಮೇಲೋಂದರಂತೆ ವಿವಾದಾತ್ಮಕ ನಿರ್ಧಾರಗಳನ್ನು ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತೆಗೆದುಕೊಳ್ಳುತ್ತಿದ್ದು, ಮಾಧ್ಯಮ ನಿರ್ಬಂಧ ಬಳಿಕ ಅಧಿಕೃತ ಸಲಹೆಗಾರರ ನೇಮಕ ಮಾಡಿಕೊಂಡಿರುವುದು ಈಗ ಚರ್ಚೆಗೆ ಕಾರಣವಾಗಿದೆ.
Vijaya Karnataka Web Kageri


ವಿಧಾನ ಸಭೆಯ ನಿವೃತ್ತ ಕಾರ್ಯದರ್ಶಿ ಓಂ ಪ್ರಕಾಶ್‌ ಅವರನ್ನು ಕಾಗೇರಿ ತಮ್ಮ ಸಲಹೆಗಾರರಾಗಿ ನೇಮಿಸಿಕೊಂಡಿದ್ದಾರೆ. ವೃಂದ ಮತ್ತು ನೇಮಕ (ಸಿಆಂಡ್‌ಆರ್‌) ನಿಯಮದಲ್ಲಿ ಈ ಹುದ್ದೆಯೇ ಇಲ್ಲ. ಹೀಗಾಗಿ ಸ್ಪೀಕರ್‌ ಈ ನಿರ್ಧಾರ ಭಾರಿ ಚರ್ಚೆಗೆ ಕಾರಣವಾಗಿದೆ. ವಿಧಾನಸಭೆ ಕಾರ್ಯದರ್ಶಿ ಹುದ್ದೆಗೆ ತತ್ಸಮಾನ ಸ್ಥಾನಮಾನವನ್ನು ಸಲಹೆಗಾರರಿಗೆ ನೀಡಲಾಗಿದ್ದು, ಸ್ಪೀಕರ್‌ ನಿರ್ಧಾರದಿಂದ ಅನಗತ್ಯ ದುಂದು ವೆಚ್ಚಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ ಎಂಬ ಟೀಕೆ ವ್ಯಕ್ತವಾಗಿದೆ.

ಅಧಿವೇಶನಕ್ಕೆ ಮುನ್ನವೇ ಓಂ ಪ್ರಕಾಶ್‌ ಅವರನ್ನು ಸಲಹೆಗಾರರಾಗಿ ನಿಯೋಜಿಸಿಕೊಳ್ಳಲಾಗಿದ್ದರೂ, ಎರಡು ದಿನಗಳ ಹಿಂದಷ್ಟೇ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗಿದೆ. ಸಾಮಾನ್ಯವಾಗಿ ಇಂಥ ಮಹತ್ವದ ಹುದ್ದೆ ಸೃಷ್ಟಿ ಅಥವಾ ನೇಮಕ ಸಂದರ್ಭದಲ್ಲಿ ಸಮಿತಿ ಸಭೆ ಕರೆಯುವ ವಾಡಿಕೆ ವಿಧಾನಸಭೆ ಸಚಿವಾಲಯದಲ್ಲಿ ಹಿಂದಿನಿಂದಲೂ ನಡೆದು ಬಂದಿದೆ.

ಆದರೆ ಸಲಹೆಗಾರರ ನೇಮಕ ಸಂದರ್ಭದಲ್ಲಿ ಈ ಸಭೆ ನಡೆದಿಲ್ಲ. ಅದೇ ರೀತಿ ಸಿ ಆ್ಯಂಡ್‌ ಆರ್‌ ನಿಯಮದಲ್ಲಿ ಅವಕಾಶವಿಲ್ಲದ ಹುದ್ದೆಗೆ ಹಣಕಾಸು ಇಲಾಖೆ ಆಕ್ಷೇಪ ವ್ಯಕ್ತಪಡಿಸಿ ಕಡತವನ್ನು ವಾಪಾಸ್‌ ಕಳುಹಿಸುತ್ತದೆ. ಆದರೆ ಸ್ಪೀಕರ್‌ ನಿರ್ಧಾರಕ್ಕೆ ಹಣಕಾಸು ಇಲಾಖೆಯಿಂದಲೂ ಆಕ್ಷೇಪ ವ್ಯಕ್ತವಾಗಿಲ್ಲ.

ಇದೇ ಮೊದಲು: ವಿಧಾನಸಭೆಯ ಈ ಹಿಂದಿನ ಯಾವುದೇ ಸ್ಪೀಕರ್‌ ಸಲಹೆಗಾರರನ್ನು ನೇಮಿಸಿ ಕೊಂಡಿರಲಿಲ್ಲ. ವಿಶೇಷ ಕರ್ತವ್ಯಾಧಿಕಾರಿ ನೇಮಕ ಮಾಡಿಕೊಂಡ ಉದಾಹರಣೆಗಳಿವೆ. ಸಚಿವಾಲಯದ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಸಾಕಷ್ಟು ಪ್ರಮಾಣದಲ್ಲಿ ಕಲಾಪ ನಿಯಮಗಳ ಜ್ಞಾನ ಹೊಂದಿರುವುದರಿಂದ ಸಲಹೆಗಾರರ ಅಗತ್ಯ ಬೀಳುವುದಿಲ್ಲ. ಆದರೆ ಹೊಸ ಸಂಪ್ರದಾಯ ಅನುಸರಿಸುವ ಮೂಲಕ ಸ್ಪೀಕರ್‌ ತಮ್ಮದೇ ಸಿಬ್ಬಂದಿ ನಿಯಮ ಜ್ಞಾನದ ಮೇಲೆ ಅನುಮಾನ ವ್ಯಕ್ತಪಡಿಸಿದಂತಾಗಿದೆ. ಈ ನೇಮಕ ಪ್ರಕ್ರಿಯೆ ಸಚಿವಾಲಯ ಸಿಬ್ಬಂದಿಯಲ್ಲಿ ಸಾಕಷ್ಟು ಅಸಮಾಧಾನ ಸೃಷ್ಟಿಸಿದ್ದು, ದೈನಂದಿನ ಕರ್ತವ್ಯ ನಿರ್ವಹಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬಂದಿದೆ.

ಓಂ ಪ್ರಕಾಶ್‌ ಈ ಹಿಂದೆ ವಿಧಾನಸಭೆ ಕಾರ್ಯದರ್ಶಿಯಾಗಿದ್ದರು. ಅವರನ್ನು ಉಭಯ ಸದನಗಳ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡುವ ಪ್ರಯತ್ನ ಈ ಹಿಂದೆ ಬಿಜೆಪಿ ಸರಕಾರವಿದ್ದ ಸಂದರ್ಭದಲ್ಲಿ ನಡೆದಿತ್ತು. ಬಿಜೆಪಿಯ ಪ್ರಭಾವಿ ರಾಜಕಾರಣಿ ಹಾಗೂ ಸ್ಪೀಕರ್‌ ಕಾಗೇರಿಯವರಿಗೆ ಆಪ್ತರಾಗಿರುವ ವ್ಯಕ್ತಿಯೊಬ್ಬರಿಗೆ ಓಂ ಪ್ರಕಾಶ್‌ ದೂರದ ಸಂಬಂಧಿಯಾಗಿರುವುದೇ ಈ ನೇಮಕಕ್ಕೆ ಕಾರಣ ಎಂಬ ಮಾತು ಸಚಿವಾಲಯ ವ್ಯಾಪ್ತಿಯಲ್ಲಿ ಕೇಳಿ ಬರುತ್ತಿದೆ.

ನಿರ್ಧಾರ ಬದಲಿಲ್ಲ: ಈ ಬಗ್ಗೆ ಟಿವಿ ವಾಹಿನಿಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಸ್ಪೀಕರ್‌ಗೆ ಕರೆ ಮಾಡಿ ಸಿಬ್ಬಂದಿ ಚರ್ಚೆ ನಡೆಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನಿಲುವು ಬದಲಿಸದೇ ಇರಲು ಕಾಗೇರಿ ನಿರ್ಧರಿಸಿದ್ದಾರೆ ಎಂದು ವಿಧಾನಸಭೆ ಸಚಿವಾಲಯ ಮೂಲಗಳಿಂದ ತಿಳಿದು ಬಂದಿದೆ.

ಪ್ರಜಾಪ್ರಭುತ್ವ ರಕ್ಷಿಸುವ ಮತ್ತು ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ವಿಧಾನಸಭೆಯಲ್ಲಿ ವ್ಯವಸ್ಥಿತವಾಗಿ ಕಲಾಪ ನಡೆಸಲು ಏನು ಮಾಡಬೇಕೋ ಅದೆಲ್ಲವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ -ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪೀಕರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ