ಆ್ಯಪ್ನಗರ

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಒಂದೇ ಸ್ಕೂಟರ್‌ನಲ್ಲಿ ಕುಳಿತು ಪ್ರಯಾಣ-ಶೋಭಾ

ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಒಂದೇ ಸ್ಕೂಟರ್‌ನಲ್ಲಿ ಕುಳಿತು ಪ್ರಯಾಣ ಬೆಳೆಸುವ ಸ್ಥಿತಿ ನಿರ್ಮಾಣವಾಗಿದ್ದು, ...

Vijaya Karnataka Web 29 May 2019, 5:00 am
ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಒಂದೇ ಸ್ಕೂಟರ್‌ನಲ್ಲಿ ಕುಳಿತು ಪ್ರಯಾಣ ಬೆಳೆಸುವ ಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯ ವಿಧಾನಸಭೆಗೆ ಈಗ ಚುನಾವಣೆ ನಡೆದರೂ ಬಿಜೆಪಿ 178 ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web 2805-2-2-000 (8)


ಬಿಜೆಪಿ ಮಹಿಳಾ ಮೋರ್ಚಾ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ಅಟಲ್‌ ಬಿಹಾರಿ ವಾಜಪೇಯಿಯವರು ಚುನಾವಣೆಯಲ್ಲಿ ಸೋತಾಗ ಪ್ರತಿಪಕ್ಷಗಳು ' ನಿಮ್ಮ ಬಳಿ ನಾಲ್ಕು ಸಂಸದರೂ ಇಲ್ಲ ' ಎಂದು ವ್ಯಂಗ್ಯವಾಡಿದ್ದರು. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಈಗ ಆ ಸ್ಥಿತಿ ಬಂದಿದೆ,''ಎಂದು ವ್ಯಂಗ್ಯವಾಡಿದರು.

''ನಾನು ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಬಯಸಿ ಪಡೆದಿದ್ದಲ್ಲ. ಪಕ್ಷ ನನ್ನನ್ನು ಅಲ್ಲಿಗೆ ಕಳುಹಿಸಿತ್ತು. ಆದರೆ ಅಲ್ಲಿನ ಜನ ನನ್ನನ್ನು ಪ್ರೀತಿಸಿದರು. ನಾನು ಚುನಾವಣೆಯಲ್ಲಿ ಈ ಬಾರಿ ಸ್ಪರ್ಧಿಸುವುದಿಲ್ಲ. ನನಗೆ ಸಾಕಾಗಿದೆ ಎಂದು ಯಡಿಯೂರಪ್ಪ , ಸಂಘದ ಪ್ರಮುಖರು ಹಾಗೂ ರಾಷ್ಟ್ರೀಯ ವರಿಷ್ಠರಿಗೆ ತಿಳಿಸಿದ್ದೆ. ಆದರೆ ಸ್ಪರ್ಧಿಸಲೇಬೇಕು ಎಂದು ಪಕ್ಷ ಸೂಚನೆ ನೀಡಿತ್ತು. ಆಕಾಂಕ್ಷಿಗಳ ಸಂಖ್ಯೆಯೂ ಜಾಸ್ತಿ ಇತ್ತು. ಗೋ ಬ್ಯಾಕ್‌ ಶೋಭಾ ಎಂಬ ಕ್ಯಾಂಪೇನ್‌ ಕೂಡಾ ನಡೆಯಿತು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಗೆಲ್ಲುವುದು ಸುಲಭವಲ್ಲ. ಆದಾಗಿಯೂ ಕ್ಷೇತ್ರದ ಜನ ಶೋಭಾ ಗೋ ಬ್ಯಾಕ್‌ ಟು ಪಾರ್ಲಿಮೆಂಟ್‌'' ಎಂದು ಕಳುಹಿಸಿಕೊಟ್ಟಿದ್ದಾರೆ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯೆ ತಾರಾ ಮಾತನಾಡಿ, ''ಮಹಿಳೆಯರು ಯಾರಾದರೂ ಮನೆಗೆ ಹೋದಾಗ ಅರಿಶಿನ ಕುಂಕುಮ ತೆಗೆದುಕೊಂಡ ಬಳಿಕ ಖಾಲಿ ಬಟ್ಟಲು ಕೊಡಬಾರದೆಂಬ ಕಾರಣಕ್ಕೆ ಒಂದೆರಡು ಎಲೆ-ಅಡಿಕೆ ಬಿಡುತ್ತೇವೆ. ಅದೇ ರೀತಿ 28ಕ್ಕೆ 28 ಸ್ಥಾನಗಳನ್ನೂ ಗೆಲ್ಲಬಾರದೆಂಬ ಕಾರಣಕ್ಕೆ ಎರಡು ಸ್ಥಾನವನ್ನು ಕಾಂಗ್ರೆಸ್‌-ಜೆಡಿಎಸ್‌ಗೆ ಬಿಟ್ಟಿದ್ದೇವೆ. ದಕ್ಷಿಣ ಭಾರತದಿಂದ ಗೆದ್ದ ಕೆಲವೇ ಕೆಲವು ಮಹಿಳಾ ಸಂಸದರ ಪೈಕಿ ಶೋಭಾ ಕರಂದ್ಲಾಜೆ ಒಬ್ಬರು,'' ಎಂದು ಹೇಳಿದರು.

ಮಹಿಳಾ ಮೋರ್ಚಾ ಅಧ್ಯಕ್ಷ ಭಾರತಿ ಶೆಟ್ಟಿ ಮಾತನಾಡಿ, ''ಜೂನ್‌ 1ರೊಳಗೆ ರಾಜ್ಯದಲ್ಲಿ ಸರಕಾರ ರಚನೆ ಮಾಡದೇ ಇದ್ದರೆ ಯಡಿಯೂರಪ್ಪ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಾರಾ ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಮಂತ್ರಕ್ಕೊಂದು, ತಂತ್ರಕ್ಕೊಂದು ಸ್ಥಾನಗೆದ್ದ ಒಕ್ಕಣ್ಣ ಸಿದ್ದರಾಮಯ್ಯನವರು ರಾಜಕೀಯದಿಂದ ನಿವೃತ್ತರಾಗಬೇಕೇ ವಿನಾ 25 ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಿದ ಯಡಿಯೂರಪ್ಪನವರಲ್ಲ ,''ಎಂದು ತಿರುಗೇಟು ನೀಡಿದರು.


ಶೋಭಾಗೆ ಸಚಿವ ಸ್ಥಾನ : ಮನವಿ
ಶೋಭಾ ಕರಂದ್ಲಾಜೆಯವರನ್ನು ಕೇಂದ್ರ ಸಂಪುಟದಲ್ಲಿ ಸಚಿವರನ್ನಾಗಿ ಮಾಡುವಂತೆ ವರಿಷ್ಠರಿಗೆ ಮನವಿ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.
ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ''ನಾನು ಬುಧವಾರ ದಿಲ್ಲಿಗೆ ಹೋಗುತ್ತೇನೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಬಗ್ಗೆ ಮನವರಿಕೆ ಮಾಡುತ್ತೇನೆ. ಆದರೆ ನಿರ್ಧಾರ ಅವರಿಗೆ ಬಿಟ್ಟಿದ್ದು ,''ಎಂದು ಹೇಳಿದರು.
''ರಾಜ್ಯದಿಂದ ಆಯ್ಕೆಗೊಂಡಿರುವ ಎಲ್ಲ ಸಂಸದರಿಗೆ ಪಕ್ಷದಿಂದ ಜೂನ್‌ 5ರಂದು ಅಭಿನಂದನೆ ಸಲ್ಲಿಸಲಾಗುವುದು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ,'' ಎಂದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ