ಆ್ಯಪ್ನಗರ

ಮತ್ತೆ ಸದ್ದು ಮಾಡುತ್ತಿದೆ ಆಪರೇಷನ್‌ ಆಡಿಯೊ

ಕಳೆದ ಬಜೆಟ್‌ ಅಧಿವೇಶನ ಸಂದರ್ಭದಲ್ಲಿ ಸದ್ದು ಮಾಡಿದ್ದ 'ಆಪರೇಷನ್‌ ಆಡಿಯೊ ' ಲೋಕಸಭೆ ಚುನಾವಣಾ ಹೊಸ್ತಿಲಲ್ಲಿ ಮತ್ತೆ ಜೀವ ಪಡೆದುಕೊಂಡಿದ್ದು, ...

Vijaya Karnataka 9 Apr 2019, 5:00 am
ಬೆಂಗಳೂರು: ಕಳೆದ ಬಜೆಟ್‌ ಅಧಿವೇಶನ ಸಂದರ್ಭದಲ್ಲಿ ಸದ್ದು ಮಾಡಿದ್ದ 'ಆಪರೇಷನ್‌ ಆಡಿಯೊ ' ಲೋಕಸಭೆ ಚುನಾವಣಾ ಹೊಸ್ತಿಲಲ್ಲಿ ಮತ್ತೆ ಜೀವ ಪಡೆದುಕೊಂಡಿದ್ದು, ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಮಧ್ಯೆ 'ಸವಾಲಿನ' ರಾಜಕಾರಣಕ್ಕೆ ಕಾರಣವಾಗಿದೆ.
Vijaya Karnataka Web bsy


ರಾಜ್ಯದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರವನ್ನು ಪತನಗೊಳಿಸಲು ಜೆಡಿಎಸ್‌ ಗುರುಮಠಕಲ್‌ ಶಾಸಕ ನಾಗನಗೌಡ ಕುಂದಕೂರ್‌ ಪುತ್ರನ ಜತೆ ಪ್ರತಿಪಕ್ಷ ನಾಯಕ ಯಡಿಯೂರಪ್ಪ, ಶಾಸಕರಾದ ಶಿವನಗೌಡ ನಾಯಕ್‌ ಹಾಗೂ ಪ್ರೀತಂ ಗೌಡ ನಡೆಸಿದ ಸಂಭಾಷಣೆಯಲ್ಲಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರನ್ನೇ 'ಮ್ಯಾನೇಜ್‌ ' ಮಾಡಲಾಗಿದೆ ಎಂಬ ಅಂಶ ಪ್ರಸ್ತಾಪವಾಗಿತ್ತು. ಬಜೆಟ್‌ ಮಂಡನೆಯ ದಿನ ಈ ಆಡಿಯೊ ಬಿಡುಗಡೆ ಮಾಡಿದ್ದ ಸಿಎಂ ಕುಮಾರಸ್ವಾಮಿ ಬಿಜೆಪಿಯ ' ಆಪರೇಷನ್‌ ಕಮಲ'ಕ್ಕೆ ಕಡಿವಾಣ ಹಾಕಿದ್ದರು.

ಆದರೆ ಸ್ಪೀಕರ್‌ ವಿರುದ್ಧ ವ್ಯಕ್ತವಾದ ಆರೋಪ ರಾಜ್ಯ ವಿಧಾನಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತ್ತು. 3 ದಿನಗಳ ಕಾಲ ಸದನದಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಿಗಿಪಟ್ಟಿನ ಫಲವಾಗಿ ಈ ಬಗ್ಗೆ ಎಸ್‌ಐಟಿ ಮೂಲಕ ತನಿಖೆ ನಡೆಸಲು ರಾಜ್ಯ ಸರಕಾರ ನಿರ್ಧರಿಸಿತ್ತು. ಹದಿನೈದು ದಿನದೊಳಗಾಗಿ ಈ ಬಗ್ಗೆ ವಿಚಾರಣೆ ಪೂರ್ಣಗೊಳಿಸುವಂತೆ ಸ್ಪೀಕರ್‌ ರಮೇಶ್‌ ಕುಮಾರ್‌ ಮನವಿ ಮಾಡಿಕೊಂಡಿದ್ದರು. ಆದರೆ ಹಿರಿಯ ಐಪಿಎಸ್‌ ಅಧಿಕಾರಿಗಳು ಎಸ್‌ಐಟಿ ಮುಖ್ಯಸ್ಥರಾಗಲು ಹಿಂದೇಟು ಹಾಕಿದ್ದರಿಂದ ಸರಕಾರ ಈ ವಿಚಾರದ ಬಗ್ಗೆ ಚರ್ಚೆ ನಡೆಸುವುದನ್ನೇ ನಿಲ್ಲಿಸಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ಪ್ರಾರಂಭವಾದಾಗ ಸರಕಾರಕ್ಕೆ ಜ್ಞಾಪನಾ ಪತ್ರ ಬರೆಯುವುದಾಗಿ ಸ್ಪೀಕರ್‌ ರಮೇಶ್‌ಕುಮಾರ್‌ ತಿಳಿಸಿದ್ದರು.

ಶಾಸಕರ ಅನರ್ಹತೆ ವಿಚಾರಣೆ, ಡಾ.ಉಮೇಶ್‌ ಜಾಧವ್‌ ರಾಜೀನಾಮೆ ಸೇರಿದಂತೆ ಹಲವು ವಿದ್ಯಮಾನಗಳ ಮಧ್ಯೆಯೇ ರಾಜ್ಯದ ಬಹುತೇಕ ರಾಜಕಾರಣಿಗಳು ಲೋಕಸಭೆ ಚುನಾವಣೆಯಲ್ಲಿ ಮಗ್ನರಾಗಿದ್ದರು. ಆದರೆ ಮಂಡ್ಯ ಕ್ಷೇತ್ರದ ವಿಚಾರದಲ್ಲಿ ದಿನದಿಂದ ದಿನಕ್ಕೆ ಹತಾಶೆಯ ಮಡುವಿಗೆ ಜಾರುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಲೋಕಸಭೆ ಚುನಾವಣೆ ಬಳಿಕ ಈ ಪ್ರಕರಣವನ್ನು ಮತ್ತೆ ತನಿಖೆಗೆ ಒಳಪಡಿಸಲಾಗುವುದು. ಎಸ್‌ಐಟಿ ರಚನೆಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿಕೆ ನೀಡಿರುವುದು ಈಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಪ್ರಕರಣವನ್ನು ಚುನಾವಣೆಗೆ ಮುನ್ನವೇ ರೀಓಪನ್‌ ಮಾಡಿ. ಮೇ.23ರ ಬಳಿಕ ನಿಮ್ಮ ಸರಕಾರವೇ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಯಡಿಯೂರಪ್ಪ ತಿರುಗೇಟು ನೀಡಿದ್ದು, ಮೈತ್ರಿ ಸರಕಾರದ ಪತನಕ್ಕೆ ಮತ್ತೊಂದು ಪ್ರಯತ್ನ ನಡೆಸುವ ಮುನ್ಸೂಚನೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ