ಆ್ಯಪ್ನಗರ

ಜನ್ಮ ನೀಡಿದವರಿಗೆ ಕೋವಿಡ್-19:‌ ಹೆತ್ತವರನ್ನು ನೋಡುವ ಮೊದಲೇ ಅನಾಥವಾಗಿ ಅಂತ್ಯಸಂಸ್ಕಾರವಾಯಿತು ಕಂದಮ್ಮ

ಕೊರೊನಾದಿಂದ ಆಸ್ಪತ್ರೆ ಸೇರಿದ ಜನ್ಮ ಕೊಟ್ಟ ತಂದೆ ತಾಯಿಯನ್ನು ಕಣ್ಣುಬಿಟ್ಟು ನೋಡದೇ 17 ದಿನದ ಶಿಶು ಸಾವನ್ನಪ್ಪಿದೆ. ಜತೆಗೆ ಅಂತ್ಯಸಂಸ್ಕಾರಕ್ಕೂ ಹೆತ್ತವರಿಲ್ಲದೇ ಅನಾಥವಾಗಿ ಇಹಲೋಕ ಸೇರಿದೆ. ಈ ಮನಕಲಕುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಳ್ಳಂದೂರಿನಲ್ಲಿ ಹುಟ್ಟಿ, ಹೆಬ್ಬಾಳ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಒಳಗಾದ ಈ ಕಂದಮ್ಮನಿಗೆ ಕೊನೆ ಕ್ಷಣದ ವಿದಾಯ ಹೇಳಲಾಗದೆ ತಂದೆ ತಾಯಿ ಕಣ್ಣೀರಿಟ್ಟಿದ್ದಾರೆ.

Vijaya Karnataka Web 6 Jul 2020, 7:55 am
ಬೆಂಗಳೂರು: ಕೊರೊನಾ ಮಹಾಮಾರಿಯಿಂದಾಗಿ ಅವಧಿಗೆ ಮುನ್ನ ಜನಿಸಿದ 17 ದಿನದ ಮಗು ನಗರದ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದೆ. ಇದೇ ವೇಳೆ ಸೋಂಕಿತರಾದ ಹೆತ್ತವರು ಮಗುವಿನ ಅಂತ್ಯಸಂಸ್ಕಾರದಲ್ಲೂ ಪಾಲ್ಗೊಳ್ಳಲಾಗದ ದಾರುಣ ಪರಿಸ್ಥಿತಿಗೆ ಸಿಲುಕಿದರು. ಅಂತಿಮವಾಗಿ ಪಾಲಿಕೆ ಚಿತಾಗಾರದ ಸಿಬ್ಬಂದಿಯೇ ಅಂತ್ಯಸಂಸ್ಕಾರವನ್ನು ನೆರವೇರಿಸಬೇಕಾಯಿತು.
Vijaya Karnataka Web ಸಾಂದರ್ಭಿಕ ಚಿತ್ರ


ಕೊರೊನಾ ಸೃಷ್ಟಿಸಿದ ಹೃದಯ ವಿದ್ರಾವಿಕ ಘಟನೆಗಳ ಸರಣಿಗೆ ಈ ಪ್ರಕರಣವೂ ಸೇರ್ಪಡೆಯಾಗಿದೆ. ಬೆಳ್ಳಂದೂರಿನ ದಂಪತಿಗೆ ಅವಧಿಗೆ ಮನ್ನವೇ ಜನಿಸಿದ್ದ ಶಿಶುವನ್ನು ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿಆರೈಕೆ ಮಾಡಲಾಗುತ್ತಿತ್ತು. ಪಾಲಕರಿಬ್ಬರಿಗೂ ಕೊರೊನಾ ಸೋಂಕು ತಗಲಿದ್ದರಿಂದ ಆಸ್ಪತ್ರೆ ಸೇರಿದ್ದರು. ಶಿಶುವಿಗೆ ಕೂಡ ಸೋಂಕು ಇರುವುದು ಖಚಿತವಾಗಿತ್ತು.

ಜನಿಸಿದಾಗಲೇ ಶಿಶು ಅನಾರೋಗ್ಯದಿಂದ ಬಳಲುತ್ತಿದ್ದು, ಅತಿ ಕಡಿಮೆ ತೂಕ ಹೊಂದಿತ್ತು. 17 ದಿನಗಳ ಕಾಲ ಆಸ್ಪತ್ರೆಯಲ್ಲೇ ಇದ್ದ ಶಿಶುವು ಜು.1 ರಂದು ಕೊನೆಯುಸಿರೆಳೆಯಿತು. ಮಗುವಿನ ಸಾವಿನ ಸುದ್ದಿ ತಿಳಿದರೂ ಸೋಂಕಿತರಾದ ಪಾಲಕರಿಗೆ ಬಂದು ನೋಡಲಾಗಲಿಲ್ಲ, ಆಸ್ಪತ್ರೆಯಲ್ಲೇ ಉಳಿಯಬೇಕಾಯಿತು. ಅದೇ ದಿನ ಸಂಜೆ 6.30 ಗಂಟೆಗೆ ಶಿಶುವನ್ನು ಆಂಬ್ಯುಲೆನ್ಸ್‌ನಲ್ಲಿ ಚಿತಾಗಾರಕ್ಕೆ ಕರೆತರಲಾಯಿತು.

''ಸಂಜೆಯಾಗಿದ್ದರಿಂದ ಚಿತಾಗಾರ ಮುಚ್ಚಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಆ ಕ್ಷಣದಲ್ಲಿ ಆಂಬ್ಯುಲೆನ್ಸ್‌ ಚಾಲಕ ಮೊಬೈಲ್‌ ಕರೆ ಮಾಡಿ, ಶಿಶುವಿನ ಹೆಣ ಇದೆ ಎಂದು ಹೇಳಿದ. ಈ ಮಾತನ್ನು ಕೇಳಿಯೇ ಕಣ್ಣೀರು ಬಂತು. ಹೀಗಾಗಿ ಚಿತಾಗಾರವನ್ನು ಮುಚ್ಚದೆ ಕಾದೆವು,'' ಎಂದು ಚಿತಾಗಾರದ ನಿರ್ವಹಣೆ ಮಾಡುತ್ತಿರುವ ರಾಜು ವಿವರಿಸಿದರು.

''ಪ್ರತಿ ದಿನ ಕೊರೊನಾದಿಂದ ಮೃತರಾದ ಐದಾರು ಶರೀರಗಳನ್ನು ಸುಡುತ್ತೇವೆ. ಆದರೆ ಎಂದಿಗೂ ಇಷ್ಟೊಂದು ದುಃಖ ಉಂಟಾಗಿರಲಿಲ್ಲ. ಆಂಬ್ಯುಲೆನ್ಸ್‌ ಬಂದಾಗ ಶಿಶುವನ್ನು ನಾವೇ ಎತ್ತಿಕೊಂಡು ಚಿತಾಗಾರಕ್ಕೆ ಸೇರಿಸಿದೆವು. ಶವ ದಹನಕ್ಕೆ 250 ರೂ. ನೀಡಲು ಚಾಲಕ ಮುಂದೆ ಬಂದ. ಆದರೆ, ಅದನ್ನು ನಾವು ಸ್ವೀಕರಿಸಲಿಲ್ಲ. ಆ ಹಣವನ್ನು ನಾವೇ ಭರಿಸಿದ್ದೇವೆ. ಶವ ದಹನ ಮಾಡುವಾಗ ಎಲ್ಲ ಸಿಬ್ಬಂದಿ ಕಣ್ಣೀರಾಗಿದ್ದೆವು,'' ಎಂದು ಅಂದಿನ ಘಟನೆ ಬಗ್ಗೆ ರಾಜು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ