ಆ್ಯಪ್ನಗರ

ಪಾರ್ಕಿಂಗ್‌ ಶುಲ್ಕ ವಸೂಲಿ ಮಾಡಿ ಸೆಕ್ಯೂರಿಟಿ ಮರೆತಿದ್ದ ಗುತ್ತಿಗೆದಾರ !

ಒಣ ಹುಲ್ಲುಗಳ ಹಾಸಿನ ಮಧ್ಯೆ ಮಧ್ಯೆ ಪ್ಯಾಚ್‌ (ಬೆಂಕಿ ವಿಸ್ತರಿಸದಂತೆ ತೋಡುವ ಸಾಲು)ಗಳನ್ನು ನಿರ್ಮಿಸಿದ್ದರೂ ಹುಲ್ಲಿನ ಬೆಂಕಿ ಸಾಮೂಹಿಕವಾಗಿ ಕಾರುಗಳನ್ನು ಆಹುತಿ ತೆಗೆದುಕೊಳ್ಳಲು ಸಾಧ್ಯ ಆಗುತ್ತಿರಲಿಲ್ಲ

Vijaya Karnataka 24 Feb 2019, 7:58 am
ಬೆಂಗಳೂರು: ಏರ್‌ ಶೋಗೆ ನೋಂದಣಿ ಮಾಡಿಕೊಳ್ಳುವಾಗಲೇ 'ತಮ್ಮದೇ ರಿಸ್ಕ್‌ನಲ್ಲಿ ವಾಹನ ನಿಲುಗಡೆ ಮಾಡಬೇಕು' ಎನ್ನುವ ಷರತ್ತು ಹಾಕಲಾಗಿತ್ತು. ಇದು ಪಾರ್ಕಿಂಗ್‌ನ ಗುತ್ತಿಗೆ ಪಡೆದಿದ್ದವರಿಗೆ ವರದಾನವಾಗಿತ್ತು. ಕಾರುಗಳನ್ನು ನಿಲುಗಡೆ ಮಾಡಿದವರಿಂದ ಪಾರ್ಕಿಂಗ್‌ ಶುಲ್ಕ ಪಡೆದುಕೊಳ್ಳಲಾಗಿದೆ. ಆದರೆ ಕನಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲ. ಸಾವಿರಾರು ವಾಹನಗಳು ನಿಲುಗಡೆ ಮಾಡುವ ಸ್ಥಳದಲ್ಲಿ ನೆಪಕ್ಕೂ ಒಂದು ಅಗ್ನಿ ಶಾಮಕ ವಾಹನ ನಿಲುಗಡೆ ಮಾಡಿಸಿರಲಿಲ್ಲ. ಈ ಬಗ್ಗೆ ಅಗ್ನಿ ಶಾಮಕ ಇಲಾಖೆಗೂ ಗುತ್ತಿಗೆದಾರನಿಂದ ಮನವಿ ಹೋಗಿರಲಿಲ್ಲ ಎನ್ನುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
Vijaya Karnataka Web Car Fire


ಏರ್‌ ಶೋ ನಡೆಯುತ್ತಿರುವ ಜಾಗದ ತಾಪಮಾನ ಶೇ.34 ರಿಂದ 37 ರವರೆಗೆ ವ್ಯತ್ಯಾಸ ಆಗುತ್ತಿರುವುದು ಮೊದಲ ದಿನವೇ ಗೊತ್ತಾಗಿತ್ತು. ಅಂದರೆ ಈ ಉರಿ ಬಿಸಿಲಿನಲ್ಲಿ ಪ್ಲಾಸ್ಟಿಕ್‌ ಪೇಪರ್‌ ಕಾರಿನ ಮೇಲಿಟ್ಟರೂ ಅಂಟಿಕೊಳ್ಳುವ ಮಟ್ಟದ ಉರಿ ಬಿಸಿಲು. ನೂರಾರು ಕಾರು ಚಾಲಕರು ಸಮಯ ಕಳೆಯಲು ನೀಲಗಿರಿ ತೋಪಿನ ನಡುವೆ, ಮರಗಳ ನಡುವೆ ಕೂರುತ್ತಾರೆ. ಅಲ್ಲೇ ಸಿಗರೇಟ್‌ ಸೇದಿ ಬಿಸಾಡುತ್ತಾರೆ. ಸಿಗರೇಟ್‌ ಅಥವಾ ಬೀಡಿಯ ಕಿಡಿ ತಾಕಿದರೂ ದೊಡ್ಡದೊಂದು ಅನಾಹುತ ಸಂಭವಿಸಬಹುದು ಎನ್ನುವ ಮುಂಜಾಗ್ರತೆ ಗುತ್ತಿಗೆದಾರನಿಗೂ ಇರಲಿಲ್ಲ. ಸುರಕ್ಷತೆಯ ಹೊಣೆ ಹೊತ್ತಿದ್ದವರಿಗೂ ಅಂದಾಜಾಗಿರಲಿಲ್ಲ ಎಂದರೆ ನಿರ್ಲಕ್ಷ್ಯದ ಪ್ರಮಾಣ ಗೊತ್ತಾಗುತ್ತದೆ.

ಒಣ ಹುಲ್ಲುಗಳ ಹಾಸಿನ ಮಧ್ಯೆ ಮಧ್ಯೆ ಪ್ಯಾಚ್‌ (ಬೆಂಕಿ ವಿಸ್ತರಿಸದಂತೆ ತೋಡುವ ಸಾಲು)ಗಳನ್ನು ನಿರ್ಮಿಸಿದ್ದರೂ ಹುಲ್ಲಿನ ಬೆಂಕಿ ಸಾಮೂಹಿಕವಾಗಿ ಕಾರುಗಳನ್ನು ಆಹುತಿ ತೆಗೆದುಕೊಳ್ಳಲು ಸಾಧ್ಯ ಆಗುತ್ತಿರಲಿಲ್ಲ. ಸ್ಥಳದಲ್ಲಿ ಒಂದೆರಡಾದರೂ ಅಗ್ನಿ ಶಾಮಕ ವಾಹನಗಳು ಇದ್ದಿದ್ದರೆ ಹೊಗೆ ಕಾಣಿಸಿಕೊಂಡ ತಕ್ಷಣ ಆ ದಿಕ್ಕಿಗೆ ಒಂದೆರಡು ನಿಮಿಷಗಳಲ್ಲಿ ದೌಡಾಯಿಸಿ ಬೆಂಕಿ ನಂದಿಸಬಹುದಿತ್ತು. ಇಷ್ಟು ದೊಡ್ಡ ಮಟ್ಟದ ಅನಾಹುತವನ್ನು ತಪ್ಪಿಸಬಹುದಿತ್ತು.

ಓಡಿದ ಚಾಲಕರು

ಹೊಗೆ ಕಾಣಿಸಿಕೊಂಡು ನೋಡ ನೋಡುತ್ತಲೇ ಅದು ಮುಗಿಲೆತ್ತರಕ್ಕೆ ವಿಸ್ತರಿಸಿದಾಗ ಪಾರ್ಕಿಂಗ್‌ ಜಾಗದ ಸುತ್ತಲೇ ಇದ್ದ ಕಾರು ಚಾಲಕರುಗಳು ಎದ್ದು ಬಿದ್ದು ಓಡಿದರು. ತಮ್ಮ ತಮ್ಮ ಕಾರುಗಳನ್ನು ರಕ್ಷಿಸಿಕೊಳ್ಳಲು ಮುಂದಾದರು. ಸುಮಾರು 300 ರಿಂದ 400 ಚಾಲಕರು ಏಕಾ ಏಕಿ ತಮ್ಮ ಕಾರುಗಳನ್ನು ಸ್ಥಳದಿಂದ ತೆಗೆದುಕೊಳ್ಳುವ ಭರದಲ್ಲಿ ಆ ಜಾಗದಲ್ಲೇ ಜಾಮ್‌ ಉಂಟಾಯಿತು. ಅಷ್ಟೊತ್ತಿಗೆ ಅಗ್ನಿ ಶಾಮಕ ವಾಹನ ಬಂದರೂ ಬೆಂಕಿ ಇರುವ ಜಾಗಕ್ಕೆ ತಲುಪಲು ಸಾಧ್ಯವಾಗದಂತೆ ಈ ಕಾರುಗಳು ಅಡ್ಡಾದಿಡ್ಡಿಯಾಗಿ ನಿಂತು ಬಿಟ್ಟಿದ್ದವು. ಜತೆಗೆ ಸ್ಥಳದಲ್ಲಿದ್ದ ಸಾರ್ವಜನಿಕರು ಕಾರಿನ ಗಾಜನ್ನು ಒಡೆದು ಹ್ಯಾಂಡ್‌ ಬ್ರೇಕ್‌ ಸಡಿಲಿಸಿ ಆ ಕಾರುಗಳನ್ನು ದೂರಕ್ಕೆ ತಳ್ಳುವ ಪ್ರಯತ್ನ ಮಾಡಿದರಾದರೂ ಬೀಸುತ್ತಿದ್ದ ರಭಸವಾದ ಗಾಳಿಗೆ ಹುಲ್ಲು ಹಾಸಿನ ಬೆಂಕಿ ಶರವೇಗದಲ್ಲಿ ವಿಸ್ತರಿಸಿತು. ಅಗ್ನಿ ಶಾಮಕ ವಾಹನಗಳು ಪ್ರದೇಶಕ್ಕೆ ಬಂದರೂ ಅಗ್ನಿ ಹೊತ್ತಿಕೊಂಡ ಜಾಗಕ್ಕೆ ಬರಲು ಕೆಲ ನಿಮಿಷಗಳೇ ಬೇಕಾಯಿತು. ಸೆಕೆಂಡುಗಳ ರಭಸದಲ್ಲಿ ಮುನ್ನುಗ್ಗುತ್ತಿದ್ದ ಬೆಂಕಿಯ ಕೆನ್ನಾಲಿಗೆ ಸಾಲು ಸಾಲು ಕಾರುಗಳನ್ನು ಆಹುತಿ ತೆಗೆದುಕೊಳ್ಳುತ್ತಾ ಮುಂದುವರಿಯಿತು.

ಒಣಗಿದ ಹುಲ್ಲು ಕಟಾವು ಆಗಿರಲಿಲ್ಲವೇಕೆ ?


ಸುತ್ತ ನೀಲಗಿರಿ ತೋಪು... ಶೇ. 60 ರಷ್ಟು ಒಣಗಿದ ಮರಗಳು... ಮೊಣಕಾಲಿನವರೆಗೂ ಬೆಳೆದ ಒಣ ಹುಲ್ಲು... ವಿಪರೀತ ಬಿಸಿಲು... ಜೋರು ಗಾಳಿ... ಇದು ಅಗ್ನಿ ಅನಾಹುತ ನಡೆದ ಏರ್‌ ಶೋ ಪಾರ್ಕಿಂಗ್‌ ಜಾಗದ ಸ್ಥಿತಿಗತಿ.

ಗೇಟ್‌-5ರ ವಾಹನ ನಿಲುಗಡೆ ತಾಣದಲ್ಲಿ ಒಣಗಿದ ಹುಲ್ಲನ್ನು ಕಟಾವು ಮಾಡಿರಲಿಲ್ಲ. ಪ್ರವೇಶ ದ್ವಾರದಲ್ಲಿ ಮಾತ್ರ ಒಣ ಹುಲ್ಲನ್ನು ತೆಗೆದು ಸಮತಟ್ಟು ಮಾಡಿದ್ದ ಸಿಬ್ಬಂದಿ, ಉಳಿದ ಕಡೆ ಹಾಗೇ ಬಿಟ್ಟಿದ್ದರು. ಈ ನಡುವೆ, ಸ್ಥಳೀಯರು, ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಕಾರುಗಳ ಗಾಜುಗಳನ್ನು ಒಡೆದು 20-25 ವಾಹನಗಳನ್ನು ಬೆಂಕಿ ಅನಾಹುತದಿಂದ ಪಾರು ಮಾಡಿದ್ದಾರೆ. ಇಡೀ ಜಗತ್ತಿನ ಗಮನಸೆಳೆಯುವ ವೈಮಾನಿಕ ಪ್ರದರ್ಶನದ ವೇಳೆ ವಾಹನ ನಿಲುಗಡೆ ಸ್ಥಳದಲ್ಲಿ ಒಣಗಿದ ಹುಲ್ಲು ಕಟಾವು ಮಾಡದೆ ಹಾಗೇ ಬಿಟ್ಟದ್ದು ಹಾಗೂ ಮುಂಜಾಗ್ರತೆ ವಹಿಸಿ ಸ್ಥಳದಲ್ಲಿ ಸಿಬ್ಬಂದಿ ನಿಯೋಜಿಸದಿರುವುದು ವ್ಯವಸ್ಥೆಯ ಲೋಪವನ್ನು ಎತ್ತಿ ತೋರುವಂತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ