ಆ್ಯಪ್ನಗರ

ಪ್ರಧಾನಿ ಮೋದಿ ಮನಸ್ಸು ಮಾಡಿದರೆ ರಾಮ ಮಂದಿರ ನಿರ್ಮಾಣ: ಪೇಜಾವರ ಶ್ರೀ

ಅಯೋಧ್ಯೆ ಕರಸೇವಕರ ಸನ್ಮಾನ ನೆರವೇರಿಸಿದ ಪೇಜಾವರಶ್ರೀ ವಿಶ್ವಾಸ

Vijaya Karnataka Web 23 Nov 2018, 7:33 pm
ಉಡುಪಿ: ಅಂದು ವಾಜಪೇಯಿಗಿಲ್ಲದ ಬಹುಮತವನ್ನು ಇಂದು ಹೊಂದಿದ ಪ್ರಧಾನಿ ಮೋದಿ ಮನಸ್ಸು ಮಾಡಿದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಿಟ್ಟಿನಲ್ಲಿ ವಿಧೇಯಕ, ಸುಗ್ರೀವಾಜ್ಞೆ ಜಾರಿಗೆ ತರುವುದು ಸಾಧ್ಯ ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.
Vijaya Karnataka Web ಪೇಜಾವರ ಶ್ರೀ
ಪೇಜಾವರ ಶ್ರೀ


ಅವರು ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿ ಡಿ. 2ರಂದು ಉಡುಪಿಯಲ್ಲಿ ನಡೆಯುವ ಜನಾಗ್ರಹ ಸಭೆ ಅಂಗವಾಗಿ ಶ್ರೀಕೃಷ್ಣಮಠದ ಬಳಿಯ ನ್ಯೂ ಯಾತ್ರಿ ನಿವಾಸ್ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಅಯೋಧ್ಯೆ ಕರಸೇವಕರ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ದೇಶದಲ್ಲಿ ರಾಮ, ಕೃಷ್ಣ, ಶಿವನ ಸ್ಮಾರಕವಾಗಿ ಮಂದಿರಗಳು ಇರಬೇಕು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಷಯ ಸಾಧು, ಸಂತರ ಏಕಾಭಿಪ್ರಾಯ ಮಾತ್ರವಲ್ಲ ಪಕ್ಷಾತೀತವಾಗಿದ್ದು ಇದು ರಾಷ್ಟ್ರ ಹಾಗೂ ಸಮಗ್ರ ಹಿಂದೂ ಜನತೆಗೆ ಸಂಬಂಧಿಸಿದ್ದಾಗಿದೆ. ಉತ್ತರ ಪ್ರದೇಶದಲ್ಲೂ ಬಿಜೆಪಿ ಸರಕಾರವಿದೆ ಎಂದರು.

ರಾಜ್ಯಸಭೆಯಲ್ಲಿ ಬಹುಮತವಿಲ್ಲದಿದ್ದರೂ ಜಂಟಿ ಸದನ ಸಮಿತಿ ಸಭೆ ಕರೆದು ನಿರ್ಣಯ ಕೈಗೊಂಡರೆ ಇದರ ವಿರುದ್ಧ ಅನ್ಯರು ಕೋರ್ಟಿಗೆ ಹೋಗುವುದು ಕಷ್ಟ. ಕೇಂದ್ರ ಸರಕಾರ ಪತನವಾದರೂ ಬಲ ಹೆಚ್ಚಲಿದೆ. ಮುಸಲ್ಮಾನರೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒಪ್ಪಿದ್ದಾರೆ. ಕೇಂದ್ರ ಸರಕಾರ ದಿಟ್ಟ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ ಎಂದರು.

ಉಡುಪಿಯ ಅಷ್ಟಮಠಾಧೀಶರು, ಗುರು ಶ್ರೀವಿದ್ಯಾಮಾನ್ಯತೀರ್ಥರು, ವಿದ್ಯಾಭೂಷಣರು ಅಯೋಧ್ಯೆಯಲ್ಲಿ 1992ರಲ್ಲಿ ನಡೆದ ಕರಸೇವೆಯಲ್ಲಿ ಪಾಲ್ಗೊಂಡಿದ್ದನ್ನು ಸ್ಮರಿಸಿದ ಶ್ರೀಪಾದರು, ಸರಕಾರಕ್ಕೆ ಕೊಟ್ಟ ಮಾತಿನಂತೆ ಕೈಗೊಂಡ ನಿರ್ಣಯ ಮೀರಿ ಕರಸೇವಕರು ಕಟ್ಟಡ ಭಗ್ನಗೊಳಿಸಿದ್ದಾರೆ. ಭಜನೆ, ನೃತ್ಯ, ಭಕ್ತರ ಭಾವೋದ್ವೇಗದ ನಡುವೆ ನಾವು ಮೂಕ ಪ್ರೇಕ್ಷಕರಾಗಿದ್ದೆವು. ಮಂದಿರ ಇತ್ತೆನ್ನುವ ಸಾಕ್ಷ್ಯ ಆ ಸಂದರ್ಭ ದೊರೆತ ಹಿನ್ನೆಲೆಯಲ್ಲಿ ರಾಮನ ಮೂರ್ತಿಯನ್ನು ಸ್ಥಾಪಿಸಿದ್ದೇವೆ ಎಂದು ಪೇಜಾವರ ಶ್ರೀ ಹೇಳಿದರು.

ಸನ್ಮಾನಿತರು: ಜಯಂತ್ ಮಲ್ಪೆ, ಎಂ. ಸೋಮಶೇಖರ್ ಭಟ್, ನಾರಾಯಣ ಕಾಮತ್ ಶಿರ್ವ, ಸುಬ್ರಹ್ಮಣ್ಯ ಸಾಮಗ, ಶ್ಯಾಮ್ ಪ್ರಸಾದ್ ಕುಡ್ವ, ಮೋಹನ ಉಪಾಧ್ಯ, ರಮೇಶ್ ಶೆಟ್ಟಿಗಾರ್, ದಿನೇಶ್ ಆರ್. ಪಾಟ್ಕರ್, ರಾಮಚಂದ್ರ ಆಚಾರ್ಯ, ಕೇಶವ ಶೆಟ್ಟಿಗಾರ್ ಮಂದಾರ್ತಿ, ಮಾಧವ ಪ್ರಭು ಶಿರ್ವ, ಅನಂತ ನಾಯಕ, ಅಣ್ಣಪ್ಪ ಆಚಾರ್ಯ, ಶ್ರೀಧರ ಆಚಾರ್ಯ, ಮಂಜುನಾಥ ಶೆಟ್ಟಿ, ಜಯರಾಮ, ಜಗನ್ನಾಥ್, ಸುಕುಮಾರ್, ಸುಪ್ರಭಾ ಆಚಾರ್ಯ ಕಡಿಯಾಳಿ.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಪೇಜಾವರ ಶ್ರೀ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಿರುವ ಅವಕಾಶದ ಸದ್ಭಳಕೆ ಮಾಡಿಕೊಳ್ಳದಿದ್ದರೆ ಜನರ ವಿಶ್ವಾಸ ಕಳೆದುಕೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

ನಾಲ್ಕೂವರೆ ವರ್ಷದಿಂದ ಕೇಂದ್ರ ಸರಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಿಟ್ಟಿನಲ್ಲಿ ಏನೂ ಮಾಡಿಲ್ಲ. ಈಗ ಉತ್ತಮ ಅವಕಾಶ ಒದಗಿಬಂದಿದೆ. ಸಾಧು, ಸಂತರು ಹಾಗೂ ಕೇಂದ್ರ ಸರಕಾರದ ಮುಂದೆ ಸದವಕಾಶವಿದೆ. ಅದನ್ನು ಉಪಯೋಗಿಸಿಕೊಳ್ಳಬೇಕು. ಹಿಂದೆ ಹೆಜ್ಜೆ ಇಡಬಾರದು ಎಂದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿವಾದ ಕೋರ್ಟಿನ ಹೊರಗೆ ಮಾತುಕತೆ ಮೂಲಕ ಇತ್ಯರ್ಥವಾದರೆ ಸಂತೋಷ. ಇಲ್ಲವಾದರೆ ನ್ಯಾಯಾಲಯ ವಿಳಂಬ ಮಾಡದೆ ಬೇಗ ತೀರ್ಪನ್ನಾದರೂ ಕೊಡಲಿ ಎಂದರು.

ಇವೆರಡೂ ಸಾಧ್ಯವಾಗದಿದ್ದರೆ ಕೇಂದ್ರ ಸರಕಾರ ವಿಧೇಯಕ ಇಲ್ಲಾ ಸುಗ್ರೀವಾಜ್ಞೆಯನ್ನಾದರೂ ತರಬೇಕು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇದನ್ನು ಯಾರೂ ವಿರೋಧಿಸುವ ಕಾರ್ಯ ಮಾಡಲಾರರು. ಕಾಂಗ್ರೆಸ್ ವಿರೋಧಿಸಿದರೆ ಪ್ರತಿಕೂಲ ಪರಿಣಾಮದ ಆತಂಕ ಅದಕ್ಕಿದೆ ಎಂದು ಪೇಜಾವರ ಶ್ರೀಗಳು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ