ಆ್ಯಪ್ನಗರ

ಕೊರೊನಾ ಹೋರಾಟಕ್ಕೆ ಜಾತಿ ಬಣ್ಣ ಹಚ್ಚಬೇಡಿ ಎಂದ ಸಿದ್ದು ವಿರುದ್ಧ ಸಿಡಿದೆದ್ದ ಟ್ವಿಟ್ಟಿಗರು

ಕೊರೊನಾ ಸೋಂಕಿಗೆ ಜಾತಿಯ ಬಣ್ಣ ಹಚ್ಚಬೇಡಿ ಎಂದು ಟ್ವೀಟ್‌ ಮಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಟ್ವಿಟ್ಟರ್‌ನಲ್ಲಿ ವಿರೋಧ ವ್ಯಕ್ತವಾಗಿದೆ. ಸಿದ್ದರಾಮಯ್ಯ ಅವರು ಸರ್ಕಾರದ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ತಬ್ಲೀಗ್‌ ಜಮಾತ್‌ ನಡೆಯನ್ನು ಖಂಡಿಸಿಲ್ಲ ಎಂದು ಟ್ವಿಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

Vijaya Karnataka Web 1 Apr 2020, 2:30 pm
ಬೆಂಗಳೂರು: ಕೊರೊನಾ ಸೋಂಕಿಗೆ ಜಾತಿಯ ಬಣ್ಣ ಹಚ್ಚಬೇಡಿ ಎಂದು ಟ್ವೀಟ್‌ ಮಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಟ್ವಿಟ್ಟರಿಗರು ವಿರೋಧ ವ್ಯಕ್ತಪಡಿಸಿದ್ದಾರೆ.
Vijaya Karnataka Web siddaramaiah


“ರೋಗಕ್ಕೆ ಜಾತಿ-ಧರ್ಮಗಳಿಲ್ಲ.ಇದನ್ನು ಜಾತಿ-ಧರ್ಮದ ಪೂರ್ವಗ್ರಹಗಳಿಲ್ಲದೆಯೇ ಎದುರಿಸಬೇಕು.ಕೊರೊನಾ ವಿರುದ್ದ ದೇಶ ಒಂದಾಗಿ ನಡೆಸುತ್ತಿರುವ ಹೋರಾಟಕ್ಕೆ ಕೆಲವರು ಜಾತಿ-ಧರ್ಮದ ಬಣ್ಣ ಹಚ್ಚಲು ಪ್ರಯತ್ನಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ಈ ಸಂಕಷ್ಟದ ಗಳಿಗೆಯಲ್ಲಿ ಒಂದಾಗಿರೋಣ, ಎಚ್ಚರವಾಗಿರೋಣ” ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದರು.


ಸಿದ್ದರಾಮಯ್ಯ ಅವರು ಟ್ವಿಟ್ಟರ್‌ನಲ್ಲಿ ವ್ಯಕ್ತಪಡಿಸಿದ ಈ ಅಭಿಪ್ರಾಯಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ದೆಹಲಿಯ ನಿಜಾಮುದ್ದೀನ್‌ ಪ್ರದೇಶದ ತಬ್ಲೀಗ್‌ ಜಮಾತ್‌ ಮಸೀದಿಯಲ್ಲಿ ನಡೆದಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನರಲ್ಲಿ ಕೊರೊನಾ ಸೋಂಕು ಪತ್ತೆಯಾದ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ.

ರೋಗಕ್ಕೆ ಜಾತಿ-ಧರ್ಮಗಳಿಲ್ಲ, ಒಂದಾಗಿರೋಣ ಹಾಗೂ ಎಚ್ಚರವಾಗಿರೋಣ ಎಂದ ಸಿದ್ದರಾಮಯ್ಯ

ಕೊರೊನಾ ಸೋಂಕಿಗೆ ಜಾತಿ ಬಣ್ಣ ಹಚ್ಚಬೇಡಿ ಎಂದು ಸಿದ್ದರಾಮಯ್ಯ ಅಂದರೂ, ತಬ್ಲೀಗ್ ಜಮಾತ್‌ ಸಂಘಟನೆಯ ಬೇಜಾವಾಬ್ದಾರಿತನದ ಕುರಿತಾಗಿ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ ಎಂದು ಟ್ವಿಟ್ಟರ್‌ನಲ್ಲಿ ಹಲವರು ಕಿಡಿಕಾರಿದ್ದಾರೆ.

ಅಲ್ಲದೆ ಕೊರೊನಾ ಕಾರಣಕ್ಕಾಗಿ ಲಾಕ್‌ಡೌನ್‌ ಮಾಡಲು ಸರ್ಕಾರ ಆದೇಶ ನೀಡಿದ್ದರೂ ತಬ್ಲೀಗ್‌ ಜಮಾತ್‌ ಸಂಘಟನೆ ಇದನ್ನು ಪಾಲಿಸಿಲ್ಲ ಯಾಕೆ ? ಈ ಕುರಿತಾಗಿ ನೀವು ಸುಮ್ಮನಿರುವುದು ಸರಿಯಲ್ಲ ಎಂದು ಟ್ವಿಟ್ಟರ್‌ನಲ್ಲಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊರೊನಾ ಆತಂಕದಲ್ಲಿ ನಿಜಾಮುದ್ದೀನ್‌ , ಏನಿದು ತಬ್ಲೀಗ್‌ ಜಮಾತ್ ?

ಕೊರೊನಾ ಭಯಾನಕತೆ ಅರಿವಿಲ್ಲದೇ ಧರ್ಮದ ಆಚರಣೆಯಲ್ಲಿ ತೊಡಗಿರುವವರಿಗೆ ಸಿದ್ದರಾಮಯ್ಯ ಬುದ್ದಿವಾದ ಹೇಳಬೇಕು ಹೊರತು ಇದರಲ್ಲೂ ಓಲೈಕೆ ಮಾಡಬಾರದು. ಇದು ಜೀವಗಳ ಅಳಿವು ಉಳಿವಿನ ಪ್ರಶ್ನೆ, ಇಂತಹ ಸಂಧರ್ಭದಲ್ಲಿ ತಮ್ಮ ಓಲೈಕೆಗಳನ್ನ ಬದಿಗಿಟ್ಟು ನಿಷ್ಟುರವಾದಿಯಾಗಿ ದೇಶದ ಸ್ವಾಸ್ಥ್ಯಕ್ಕಾಗಿ ಪಣ ತೊಡಿಬೇಕು ಎಂದು ಚೇತನ್ ಎಂಬುವವರು ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗೆ ಸಾಕಷ್ಟು ಜನರು ಸಿದ್ದರಾಮಯ್ಯ ಅವರ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲೀಗ್‌ ಜಮಾತ್‌ ಸಂಘಟನೆಯ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಲವರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ರಾಜ್ಯದ ವಿವಿಧ ಮೂಲೆಗಳಿಗೆ ಇವರೆಲ್ಲಾ ಪ್ರಯಾಣಿಸಿದ್ದು ಆತಂಕಕ್ಕೆ ಕಾರಣವಾಗಿದೆ. ತಬ್ಲೀಗ್‌ ಜಮಾತ್‌ ಸಂಘಟನೆಯ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ