ಆ್ಯಪ್ನಗರ

ಮಧ್ಯಮ ವರ್ಗದಿಂದ ಬಂದ ಮೋದಿಗೆ ಮಧ್ಯಮ ವರ್ಗದ ಮನಸ್ಸು ಗೊತ್ತು: ಅಶ್ವತ್ಥನಾರಾಯಣ

2014ರಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಪ್ರಧಾನಿ ಮೋದಿ ಅವರು ಮಧ್ಯಮ ವರ್ಗದ ಆಶಯಗಳನ್ನು ಈಡೇರಿಸುತ್ತಲೇ ಬಂದರು. ಡಿಜಿಟಲ್ ಇಂಡಿಯಾ, ಆಯುಷ್ಮಾನ್ ಭಾರತ್, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಜಿಎಸ್ಟಿ, ಸ್ಟಾರ್ಟ್ಅಪ್ ಮುಂತಾದ ಯೋಜನೆಗಳ ಮೂಲಕ ಅವರು ಇಡೀ ವ್ಯವಸ್ಥೆಯನ್ನು ಜನರಿಗೆ ಪೂರಕವಾಗಿ ರೂಪಾಂತರ ಮಾಡಿದರು.

Vijaya Karnataka Web 23 Jan 2021, 7:57 pm
ಬೆಂಗಳೂರು: ದೇಶದ ಮಧ್ಯಮ ವರ್ಗದ ಜನರ ಕಲ್ಯಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರಷ್ಟು ಶ್ರಮಿಸಿದ ಮತ್ತೊಬ್ಬ ನಾಯಕರಿಲ್ಲ. ಈ ವರ್ಗದ ಸಮಸ್ಯೆಗಳನ್ನು, ಆ ಜನರ ಮನಸ್ಸನ್ನು ಅವರಷ್ಟು ಆಳವಾಗಿ ಅರ್ಥ ಮಾಡಿಕೊಂಡವರು ಮತ್ತೊಬ್ಬರಿಲ್ಲ. ಯಾಕೆಂದರೆ, ಸ್ವತಃ ಮೋದಿ ಅವರೂ ಮಧ್ಯಮ ವರ್ಗದಿಂದಲೇ ಬಂದವರು. ಹೀಗಾಗಿ ಭಾರತ ಬದಲಾವಣೆಯತ್ತ ಸಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.
Vijaya Karnataka Web ಪುಸ್ತಕ ಬಿಡುಗಡೆ
ಪುಸ್ತಕ ಬಿಡುಗಡೆ


ಬೆಂಗಳೂರಿನಲ್ಲಿ ಶನಿವಾರದಂದು ದಿ ಹಿಂದೂ ಪತ್ರಿಕೆಯ ಡೆಪ್ಯೂಟಿ ಎಡಿಟರ್ ನಾಗೇಶ್‌ ಪ್ರಭು ಅವರು ಬರೆದಿರುವ ʼಮಿಡ್ಲ್‌ಕ್ಲಾಸ್‌, ಮೀಡಿಯಾ ಅಂಡ್‌ ಮೋದಿʼ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಡಿಸಿಎಂ, ಭಾರತೀಯ ಮಧ್ಯಮ ವರ್ಗದ ಸಮಸ್ಯೆಗಳು, ಆಕಾಂಕ್ಷೆಗಳು ಮತ್ತು ಮೌಲ್ಯಗಳನ್ನು ಬಹಳ ನಿಕಟವಾಗಿ ಕಂಡು ಅನುಭವಿಸಿದ ಕಾರಣಕ್ಕೆ ಮೋದಿ ಅವರಿಂದು ಈ ವರ್ಗದ ಕಲ್ಯಾಣಕ್ಕೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದರು ಎಂದರು.

ಮೋದಿ ಅವರ ಕಠಿಣ ಬದ್ಧತೆ


ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗಲೇ ಅವರು ಮಧ್ಯಮ ವರ್ಗದ ಜನರ ಸಮಸ್ಯೆಗಳ ನಿವಾರಣೆಗೆ ಸಾಕಷ್ಟು ಕೆಲಸ ಮಾಡಿದ್ದರು. ಪ್ರಧಾನಿಯಾದ ಮೇಲೆ ಈ ಕಾರ್ಯಕ್ರಮಗಳು ಮತ್ತಷ್ಟು ವಿಸ್ತೃತವಾಗಿ ಆರಂಭವಾದವು. ಹಾಗೆ ನೋಡಿದರೆ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ವರ್ಗದ ಜನರಿಗಾಗಿ ಕಠಿಣ ಬದ್ಧತೆಯಿಂದ ದುಡಿದ ನಾಯಕರಲ್ಲಿ ಮೋದಿ ಅವರು ಅಗ್ರಗಣ್ಯರು ಎಂಬುದು ನನ್ನ ಅಭಿಪ್ರಾಯ. ಕಳೆದ ಆರೂವರೆ ವರ್ಷಗಳಲ್ಲಿ ದೇಶದ ಮಧ್ಯಮ ವರ್ಗದ ಜೀವನಮಟ್ಟ ಗಣನೀಯವಾಗಿ ಸುಧಾರಿಸಿದೆ ಎಂದರು ಉಪ ಮುಖ್ಯಮಂತ್ರಿ.

ಜಗತ್ತೇ ಬೆರಗಾಗಿದೆ

2019ರಲ್ಲಿ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರುತ್ತಿದ್ದಂತೆ ಕೋವಿಡ್‌ ಮಾರಿ ದೇಶವನ್ನ ಆವರಿಸಿಕೊಂಡಿತು. ಒಂದೆಡೆ ಬಾಹ್ಯ ಒತ್ತಡಗಳು, ಇನ್ನೊಂದೆಡೆ ಆಂತರಿಕವಾಗಿ ಕೋವಿಡ್‌ ಸವಾಲು. ಮೋದಿ ಅವರು ಎಲ್ಲಿಯೂ ಧೃತಿಗೆಡದೇ ತಮ್ಮ ದೂರದೃಷ್ಟಿ, ದಕ್ಷತೆಯ ಮೂಲಕ ಸಮರ್ಥವಾಗಿ ಎದುರಿಸಿದರು. ಬೃಹತ್ ಪ್ಯಾಕೇಜ್‌‌ ಮೂಲಕ ಬಡವರು, ಮಧ್ಯಮ ವರ್ಗದ ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಂಡರು. ಲಾಕ್‌ಡೌನ್‌ ಕಾಲದಲ್ಲಿ ಅವರು ದೇಶವನ್ನು ಮುನ್ನಡೆಸಿದ ರೀತಿ ಹಾಗೂ ಜನರು ಅವರ ಮೇಲಿಟ್ಟ ವಿಶ್ವಾಸದ ಬಗ್ಗೆ ಇಡೀ ಜಗತ್ತೇ ಚಕಿತವಾಯಿತು ಎಂದು ಡಿಸಿಎಂ ನುಡಿದರು.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.30ರಷ್ಟು ಮಧ್ಯಮ ವರ್ಗವೇ. ಯಾವುದೇ ವೇಳೆಯಲ್ಲಿ ಏನೇ ವ್ಯತ್ಯಾಸವಾದರೂ ಮೊದಲು ಪರಿಣಾಮ ಬೀರುವುದು ಈ ವರ್ಗದ ಮೇಲೆಯೇ. ಈ ಅಂಶವನ್ನು ಮನಗಂಡಿರುವ ಮೋದಿ ಅವರು ಆತ್ಮನಿರ್ಭರ ಭಾರತ ಮೂಲಕ ಅವರು ಭವಿಷ್ಯದಲ್ಲಿ ಸವಾಲುಗಳಿಗೆ ಸಿಗದಿರುವಂತೆಯೇ ನೋಡಿಕೊಳ್ಳಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದು ಡಿಸಿಎಂ ಡಾ ಅಶ್ವತ್ಥನಾರಾಯಣ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ