ಆ್ಯಪ್ನಗರ

ಲೋಕಸಮರಕ್ಕೆ ಹುಬ್ಬಳ್ಳಿಯಲ್ಲಿ ನಮೋ ರಣಕಹಳೆ: ಸಿದ್ದಗಂಗಾ ಶ್ರೀ, ಅನಂತಕುಮಾರ್‌ ಸ್ಮರಿಸಿದ ಮೋದಿ

ಕರ್ನಾಟಕದಲ್ಲಿ ಲೋಕಸಮರದ ಪ್ರಚಾರಕ್ಕೆ ಮೋದಿ ಹುಬ್ಬಳ್ಳಿಯಲ್ಲಿ ಭಾನುವಾರ ಪ್ರಚಾರ ನಡೆಸುವ ಮೂಲಕ ಮುನ್ನುಡಿ ಬರೆಯಲಿದ್ದಾರೆ. ಹುಬ್ಬಳ್ಳಿ ಭೇಟಿ ಅವಧಿಯಲ್ಲಿ ಮೋದಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

Vijaya Karnataka Web 10 Feb 2019, 7:56 pm
ಹುಬ್ಬಳ್ಳಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ರಣ ಕಹಳೆ ಮೊಳಗಿಸಲಿದ್ದಾರೆ.
Vijaya Karnataka Web ನರೇಂದ್ರ ಮೋದಿ
ನರೇಂದ್ರ ಮೋದಿ


ಈ ಭೂಮಿ, ತ್ಯಾಗ, ಸಾಹಸ, ಶೌರ್ಯ, ಇತಿಹಾಸ, ಸಂಸ್ಕೃತಿಗೆ ಹೆಸರು. ನನಗೆ ಈ ಪುಣ್ಯ, ಪವಿತ್ರ ಭೂಮಿಗೆ ಬಂದಿದ್ದಕ್ಕೆ ರೋಮಾಂಚನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು.

ಒಂದು ಕ್ಷಣ ಭಾಷಣ ನಿಲ್ಲಿಸುತ್ತಿದ್ದಂತೆ ಮೋದಿ ಮೋದಿ ಮೋದಿ ಎಂದು ಜನರು ಘೋಷಣೆ ಕೂಗಿದರು.

ಇಂದು ವಸಂತ ಪಂಚಮಿ. ಹವಾಮಾನ ಬದಲಾವಣೆ ಆಗಲಿದೆ. ಇಲ್ಲಿ ನೆರೆದಿರುವ ಲಕ್ಷಾಂತರ ಅಭಿಮಾನಿಗಳ ಸಮ್ಮುಖ ನೋಡಿದರೆ, ರಾಜ್ಯದಲ್ಲಿನ ರಾಜಕೀಯ ಹವಾಮಾನ ಕೂಡ ಬದಲಾವಣೆಯಾಗುವ ಲಕ್ಷಣ ಕಾಣಿಸುತ್ತಿದೆ ಎಂದರು ಮೋದಿ ಹೇಳಿದರು.

ಇತ್ತೀಚೆಗೆ ಶಿವೈಕ್ಯರಾದ ಸಿದ್ದಗಂಗಾ ಮಠದ ಸಿದ್ದಗಂಗಾ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು.

ಈ ನಾಡಿನ ಕಿತ್ತೂರು ರಾಣಿ ಚೆನ್ನಮ್ಮ, ಭಕ್ತ ಕವಿ ಕನಕದಾಸ, ಸಂಗೊಳ್ಳಿ ರಾಯಣ್ಣ, ದ.ರಾ. ಬೇಂದ್ರ, ಗಂಗೂಭಾಯಿ ಹಾನಗಲ್‌, ಪಂಡಿತ್‌ ಭೀಮಸೇನ ಜೋಷಿ ಅವರಂಥ ಮಹಾನ್‌ ವ್ಯಕ್ತಿಗಳನ್ನು ನೀಡಿದ ಹುಬ್ಬಳ್ಳಿ-ಧಾರವಾಡ ನಿಜಕ್ಕೂ ಪುಣ್ಯ ಭೂಮಿಯಾದಾಗಿದೆ ಎಂದು ಮೋದಿ ಹೇಳಿದರು.

ಈ ಮಹಾನ್‌ ಸಮಾವೇಶದಲ್ಲಿ ಒಂದೇ ಒಂದು ಕೊರತೆ ಕಾಣುತ್ತಿದೆ. ಮಹಾನ್‌ ಸಂಘಟಕ, ಕರ್ನಾಟಕ ಅಭಿವೃದ್ಧಿ ಸದಾ ಹಾತೊರೆಯುತ್ತಿದ್ದ ಅನಂತ್‌ಕುಮಾರ್‌ ಅವರ ಈಗ ನಮ್ಮ ಜತೆಯಲ್ಲಿಲ್ಲ. ಆದರೆ ಅವರ ಆಶಯಗಳು ಹಾಗೂ ಅನಂತಕುಮಾರ್‌ ಸದಾ ನಮ್ಮ ಹೃದಯದಲ್ಲಿತ್ತಾರೆ ಎಂದರು.

ಯಾರೋ ಪ್ರಾಮಾಣಿಕರೋ ಅವರಿಗೆ ಮೋದಿ ಇಷ್ಟವಾಗಿದ್ದಾರೆ. ಮೋದಿ ಎಂದರೆ ನಂಬಿಕೆ ಇದೆ. ಯಾರು ಭ್ರಷ್ಟರೋ ಅವರಿಗೆ ಮೋದಿ ಅಂದರೆ ಕಷ್ಟ ಎಂದು ಮೋದಿ ಮಾಹಿತಿ ನೀಡಿದರು.

ಕಳೆದ 40 ರಿಂದ 50 ವರ್ಷಗಳಲ್ಲಿ ಸರಕಾರಗಳು ಮಾಡದ ಕೆಲಸಗಳನ್ನು ನಮ್ಮ ಸರಕಾರ ಕೇವಲ 55 ತಿಂಗಳುಗಳಲ್ಲಿ ಮಾಡಿ ಮುಗಿಸಿದ್ದೇವೆ. ಇದು ಬಡವರು ಮಾತ್ರವಲ್ಲ ಎಲ್ಲ ವರ್ಗದ ಜನರ ಪರವಾದ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಪ್ರಧಾನಿ ತಿಳಿಸಿದರು.

ರಾಜ್ಯದಲ್ಲಿ ಇರುವ ಸರಕಾರ ಒತ್ತಡದ ಸರಕಾರ ಆಗಿದೆ. ಇಲ್ಲಿರುವ ನಾಯಕರು ಒಬ್ಬರನ್ನೊಬ್ಬರು ಹೊಡೆದಾಡಿಕೊಳ್ಳುತ್ತಾರೆ, ಸರಕಾರವನ್ನು ನಡೆಸುವುದಕ್ಕಿಂತ ಸರಕಾರ ಉಳಿಸಿಕೊಳ್ಳುವ ಒತ್ತಡದಲ್ಲಿ ಇರುವ ಇಲ್ಲಿನ ಮುಖ್ಯಮಂತ್ರಿ ಮಜಬೂರಿ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಅವರು ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ. ಇಲ್ಲಿನ ಮುಖ್ಯಮಂತ್ರಿ ಹೊಸದಿಲ್ಲಿಗೆ ಬಂದು ಕೆಲವರ ಮುಂದೆ ಅಳುತ್ತಿರುತ್ತಾರೆ ಎಂದು ಮೋದಿ ತಿರುಗೇಟು ನೀಡಿದರು.

ಹಲವಾರು ಭರವಸೆಗಳನ್ನು ಈಡೇರಿಸಿರುವ, ನವ ಭಾರತದ ಕನಸುಗಳನ್ನು ಸಾಕಾರಗೊಳಿಸಲು ಹೊರಟಿರುವ ನಮ್ಮ ಸರಕಾರಕ್ಕೆ ಮತ್ತೊಂದು ಮತದಾರರು ಬೆಂಬಲಿಸಬೇಕು. ಪ್ರಾಮಾಣಿಕತೆ, ಪಾರದರ್ಶಕತೆ, ಕ್ಲಾರಿಟಿ, ಭ್ರಷ್ಟಾಚಾರ ಮುಕ್ತ ಸರಕಾರ ಬೇಕಿದ್ದರೆ ನಮ್ಮ ಸರಕಾರವನ್ನು ಬೆಂಬಲಿಸಬೇಕು ಎಂದು ಮೋದಿ ಮನವಿ ಮಾಡಿದರು.


ಹುಬ್ಬಳ್ಳಿ-ಧಾರವಾಡ ಪ್ರಾಂತ್ಯಕ್ಕಾಗಿ ಈಗ 5 ಸಾವಿರ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ. ಕೆಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಮೋದಿ ತಿಳಿಸಿದರು.

ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಚಿವ ಆರ್‌.ವಿ. ದೇಶಪಾಂಡೆ, ಹು-ಧಾ ಮೇಯರ್‌ ಸೇರಿದಂತೆ ಹಲವು ನಾಯಕರು ಆತ್ಮೀಯವಾಗಿ ಸ್ವಾಗತಿಸಿದರು.

ನಂತರ ವೇದಿಕೆಗೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ಬಿ.ಎಸ್‌. ಯಡಿಯೂರಪ್ಪ, ಡಿವಿ. ಸದಾನಂದಗೌಡ, ಜಗದೀಶ್ ಶೆಟ್ಟರ್‌, ಪ್ರಹ್ಲಾದ್ ಜೋಷಿ, ಆರ್‌. ಅಶೋಕ್‌ ಸೇರಿದಂತೆ ಹಲವರು ಸನ್ಮಾನಿಸಿದರು.

ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಬಿಎಸ್‌. ಯಡಿಯೂರಪ್ಪ, ಪ್ರಧಾನಿ ಮೋದಿ ಅವರು ದೇಶದ ಆರ್ಥಿಕತೆಯನ್ನು ಸರಿ ದಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇಂಥ ಪ್ರಧಾನಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಹುದ್ದೆಯಲ್ಲಿ ಕೂರಿಸಲು ಕರ್ನಾಟಕದಿಂದ 22 ಲೋಕಸಭಾ ಕ್ಷೇತ್ರವನ್ನು ಗೆಲ್ಲಿಸುವ ಮೂಲಕ ನಾವು ಉಡುಗೊರೆ ನೀಡಬೇಕು ಎಂದರು.


ಪ್ರಧಾನಿ ಮೋದಿ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಅವರು ಜಾರಿತೆ ತಂದಿರುವ ಹಲವಾರು ಯೋಜನೆಗಳು ಎಲ್ಲ ವರ್ಗದ ಜನರಿಗೂ ಸಂದಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಬಡವರ ಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಕರ್ನಾಟಕದಲ್ಲಿ ಲೋಕಸಮರದ ಪ್ರಚಾರಕ್ಕೆ ಮೋದಿ ಹುಬ್ಬಳ್ಳಿಯಲ್ಲಿ ಭಾನುವಾರ ಪ್ರಚಾರ ನಡೆಸುವ ಮೂಲಕ ಮುನ್ನುಡಿ ಬರೆಯಲಿದ್ದಾರೆ.


ಹುಬ್ಬಳ್ಳಿ ಭೇಟಿ ಅವಧಿಯಲ್ಲಿ ಮೋದಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದರು.

ಧಾರವಾಡ ಅನಿಲ ವಿತರಣಾ ಯೋಜನೆ, ಮಂಗಳೂರು ತುರ್ತು ಅವಕಶ್ಯಕತೆಯ ಪೆಟ್ರೋಲಿಯಂ ಸಂಗ್ರಹ ಸೌಲಭ್ಯ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಧಾರವಾಡದಲ್ಲಿ ನಿರ್ಮಾಣ ಮಾಡಲಾದ ಮನೆಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿದರು.

ದಾವಣಗೆರೆ, ಹಾವೇರಿ ಜಿಲ್ಲೆಗಳಲ್ಲಿ ನಗರಗಳ ಸಂಪರ್ಕ ಸಾಧಿಸಲು ಹಾಗೂ ಈ ಭಾಗದಲ್ಲಿ ಉದ್ಯೋಗ ಅವಕಾಶಕ್ಕೆ ಪುಷ್ಠಿ ನೀಡುವ ಚಿಕ್ಕಜಾಜೂರು - ಮಾಯಕೊಂಡ ವಿಭಾಗದ ನಡುವಿನ ಹಳಿಯ ಜೋಡಿ ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದರು.

ಧಾರವಾಡ ಇಂಡಿಂಯನ್ ಇನ್ಸ್ಟಟ್ಯೂಟ್ ಆಫ ಟೆಕ್ನಾಲಜಿ, ಹಾಗೂ ಇಂಡಿಯನ್ ಇನ್ಸ್ಟಟ್ಯೂಟ್ ಆಫ್ ಇನ್ಫ್‌ರ್ಮೇಶನ್ ಟೆಕ್ನಾಲಜಿ ಸಂಸ್ಥೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ