-ಆರ್. ತುಳಸಿಕುಮಾರ್ ಬೆಂಗಳೂರು
ರಾಜಧಾನಿಯ ಹಿಂದುಳಿದ ಪ್ರದೇಶಗಳನ್ನು ಒಡಲಲ್ಲಿಟ್ಟುಕೊಂಡಿರುವ ಪುಲಿಕೇಶಿನಗರ ವಿಧಾನಸಭೆ ಕ್ಷೇತ್ರದಲ್ಲೀಗ ಮತದಾನಕ್ಕೆ ಮುನ್ನ 'ಬಿ' ಫಾರಂ ಗಿಟ್ಟಿಸಲು ರಾಜಕೀಯ ಪಕ್ಷಗಳ ಮುಖಂಡರಲ್ಲಿಪೈಪೋಟಿ ನಡೆದಿದೆ.
ವಿಧಾನಸೌಧದಿಂದ ಐದಾರು ಕಿ.ಮೀ. ಅಂತರದಲ್ಲಿದ್ದರೂ, ಮೂಲಸೌಕರ್ಯಕ್ಕಾಗಿ ಜನರು ಬವಣೆಗೆ ಒಳಗಾಗಿದ್ದಾರೆ. ದಂಡು ಪ್ರದೇಶದ ಕೆಲ ಭಾಗ ಹೊಂದಿರುವ ಕ್ಷೇತ್ರದಲ್ಲಿಬಡ ಜನರೇ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಪ್ರತಿ ಚುನಾವಣೆಯಲ್ಲಿಆಶ್ವಾಸನೆಗಳ ಸುರಿಮಳೆಯಾದರೂ ಅಭಿವೃದ್ಧಿಯ ಬರ ಎದುರಿಸುತ್ತಿದೆ. ಇದರಿಂದ ಬೇಸತ್ತ ಮತದಾರರು ಪ್ರತಿ ಚುನಾವಣೆಯಲ್ಲಿಜನಪ್ರತಿನಿಧಿಯನ್ನು ಬದಲಿಸಿದರೂ, ಅಭಿವೃದ್ಧಿಯ ನಸೀಬು ಸಿಕ್ಕಿಲ್ಲ.
ಬೆಂಗಳೂರು ಉತ್ತರ ಲೋಕಸಭೆ ಮತಕ್ಷೇತ್ರದ ಏಕೈಕ ಎಸ್ಸಿ ವಿಧಾನಸಭೆ ಕ್ಷೇತ್ರ ಪುಲಿಕೇಶಿನಗರ. ಇಲ್ಲಿನ ಜನಸಂಖ್ಯೆಯಲ್ಲಿಶೇ.80ರಷ್ಟು ಮಂದಿ ಬಿಪಿಎಲ್ ವರ್ಗಕ್ಕೆ ಸೇರಿದ್ದಾರೆ. ಮುಸ್ಲಿಂ ಹಾಗೂ ತಮಿಳು ಭಾಷಿಕರ ಮತಗಳೇ ಇಲ್ಲಿನಿರ್ಣಾಯಕ. ಗೆದ್ದ ಅಭ್ಯರ್ಥಿಗಳು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.
ಟಿಕೆಟ್ಗಾಗಿ ಪೈಪೋಟಿ ಇಲ್ಲ
ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ಕಾರಣ ಆ ವರ್ಗದ ಅಭ್ಯರ್ಥಿಗಳೇ ಚುನಾವಣೆಗೆ ನಿಲ್ಲಬೇಕಿದೆ. ನಾನಾ ಪಕ್ಷಗಳಲ್ಲಿಈ ವರ್ಗದ ಮುಖಂಡರು ಟಿಕೆಟ್ ಬಯಸಿ 'ಬಿ' ಫಾರಂಗಾಗಿ ಎದುರು ನೋಡುತ್ತಿದ್ದಾರೆ. ಯಾವ ಪಕ್ಷದವರೂ ಅಭ್ಯರ್ಥಿಯನ್ನು ಅಖೈರು ಮಾಡದ ಕಾರಣ ಇಂತಹವರಿಗೆ ಟಿಕೆಟ್ ಖಾತರಿ ನೀಡಿಲ್ಲ. ಇದರಿಂದಾಗಿ ಟಿಕೆಟ್ ಆಕಾಂಕ್ಷಿಗಳು ತಮ್ಮ ಗಾಡ್ ಫಾದರ್ಗಳ ಹಿಂದೆ ಬಿದ್ದಿದ್ದಾರೆ. ಪಕ್ಷಗಳು ಕೂಡ ಸಮರ್ಥ ಅಭ್ಯರ್ಥಿಗಳ ಹುಡುಕಾಟದಲ್ಲಿವೆ.
ಹಾಲಿ ಶಾಸಕರಾಗಿರುವ ಅಖಂಡ ಶ್ರೀನಿವಾಸಮೂರ್ತಿ ಜೆಡಿಎಸ್ನಿಂದ ಗೆದ್ದಿದ್ದರೂ ಈ ಬಾರಿ ಹಸ್ತ ಪಕ್ಷದಿಂದ ಸ್ಪರ್ಧಿಸುವ ಉಮೇದು ಹೊಂದಿದ್ದಾರೆ. ಇದಕ್ಕಾಗಿಯೇ ಕಾಂಗ್ರೆಸ್ಗೆ ಪಕ್ಷಾಂತರಗೊಂಡಿದ್ದು , ಟಿಕೆಟ್ ಸಿಗುವುದೆಂದು ಭಾವಿಸಿ ಪ್ರಚಾರ ಆರಂಭಿಸಿದ್ದಾರೆ. 2008ರಲ್ಲಿಕ್ಷೇತ್ರ ಪ್ರತಿನಿಧಿಸಿದ್ದ ಬಿ.ಪ್ರಸನ್ನಕುಮಾರ್ ಮತ್ತೆ ಸ್ಪರ್ಧಿಸಲು ಅಣಿಯಾಗಿದ್ದಾರೆ. ತನಗೇ ಟಿಕೆಟ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹಾಗೂ ಪಕ್ಷದ ಧುರೀಣ ಮಲ್ಲಿಕಾರ್ಜುನ ಖರ್ಗೆ ಮೇಲೆ ಒತ್ತಡ ಹೇರಿದ್ದಾರೆ. ಇಬ್ಬರಲ್ಲಿಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲ ಕಾಂಗ್ರೆಸ್ನಲ್ಲಿಮನೆಮಾಡಿದೆ.
ಈ ನಡುವೆ, ಪಕ್ಷ ಸೇರ್ಪಡೆ ವೇಳೆ ಟಿಕೆಟ್ ನೀಡುವ ಭರವಸೆ ನೀಡಿಯೇ 'ಕೈ' ತೆಕ್ಕೆಗೆ ಜಾರಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿರುಮ್ಮಳವಾಗಿದ್ದಾರೆ. ಒಂದು ವೇಳೆ ಟಿಕೆಟ್ ನಿರಾಕರಿಸಿದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ.
ಜೆಡಿಎಸ್ನಲ್ಲಿಸೇನಾಪತಿ ಇಲ್ಲದ ಸೈನ್ಯವನ್ನು ಮುನ್ನಡೆಸಲು ಹಿರಿಯ ಕಾರ್ಯಕರ್ತರು ಟೊಂಕ ಕಟ್ಟಿದ್ದಾರೆ. ಕ್ಷೇತ್ರವನ್ನು ಉಳಿಸಿಕೊಳ್ಳುವ ಉಮೇದು ಮುಖಂಡರಲ್ಲಿದ್ದರೂ, ಮತದಾರರನ್ನು ಪಕ್ಷದತ್ತ ಸೆಳೆಯುವ ಖದರ್ ಕಳೆದುಕೊಂಡಿದೆ. ಇತ್ತೀಚೆಗಷ್ಟೇ ಬೆಂಗಳೂರು ಜಲಮಂಡಳಿಯ ನಿವೃತ್ತ ಸಿಬ್ಬಂದಿ ಬಸವರಾಜ್ ತೆನೆ ಹೊರತಲು ಮುಂದೆ ಬಂದಿದ್ದಾರೆ. ಇವರಿಗೆ ಕ್ಷೇತ್ರದ ಹೊರಗಿನವರು ಎಂಬ ಹಣೆಪಟ್ಟಿ ಕಟ್ಟುವಲ್ಲಿಎದುರಾಳಿಗಳು ನಿರತರಾಗಿದ್ದಾರೆ. ಎಸ್ಡಿಪಿಐ ಹಾಗೂ ಬಿಎಸ್ಪಿ ಕೂಡ ಸ್ಪರ್ಧಾಳುಗಳನ್ನು ನಿಲ್ಲಿಸಲು ತಯಾರಿ ನಡೆಸಿವೆ.
ಹೊಸ ತಂತ್ರಗಾರಿಕೆಯಲ್ಲಿಬಿಜೆಪಿ ಮಗ್ನ
ಕ್ಷೇತ್ರದ ಮಟ್ಟಿಗೆ ಬಿಜೆಪಿಗೆ ಗಟ್ಟಿ ನೆಲೆ ಇಲ್ಲ. ಕಳೆದ ಲೋಕಸಭೆ ಚುನಾವಣೆ ಬಳಿಕ ಕ್ಷೇತ್ರದಲ್ಲಿಕಮಲ ಪಕಳೆಗಳು ಕಾಣಿಸಿಕೊಂಡಿವೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿಅಚ್ಚರಿ ಫಲಿತಾಂಶ ದಾಖಲಿಸುವ ಹುಮ್ಮಸ್ಸಿನಲ್ಲಿಪಕ್ಷದ ಮುಖಂಡರು ತೆರೆಮರೆಯಲ್ಲಿತಂತ್ರಗಾರಿಕೆ ರೂಪಿಸುವಲ್ಲಿಮಗ್ನವಾಗಿದ್ದಾರೆ. ಹಿಂದುತ್ವದ ಟ್ರಂಪ್ ಕಾರ್ಡ್ ಮೇಲೆ ಚುನಾವಣೆ ಗೆಲ್ಲಲು ಚಟುವಟಿಕೆ ತ್ರೀವಗೊಂಡಿದೆ.
ಮುಸ್ಲಿಂ ಹಾಗೂ ತಮಿಳು ಮತದಾರರು ಹೆಚ್ಚಿರುವ ಇಲ್ಲಿಎ.ಮುರಳಿ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷರಾಗಿದ್ದಾರೆ. ಇವರಿಗೆ ಟಿಕೆಟ್ ನೀಡಬೇಕೆಂಬ ಕೂಗು ಇದೆ. ಸ್ಥಳೀಯರಾಗಿರುವ ಜತೆಗೆ ನಾನಾ ಪಕ್ಷಗಳಲ್ಲಿರುವ ತಮಿಳರನ್ನು ಒಟ್ಟುಗೂಡಿಸಿ ಕಮಲ ಅರಳಿಸುವ ವಿಶ್ವಾಸದಲ್ಲಿದ್ದಾರೆ. ಜತೆಗೆ ಬಿಬಿಎಂಪಿಯ ಮಾಜಿ ಕಾರ್ಪೊರೇಟರ್ ಸಿ.ಮುನಿಕೃಷ್ಣ ಅವರನ್ನು ಕಣಕ್ಕಿಳಿಸುವ ಚರ್ಚೆಯೂ ನಡೆದಿದೆ.
ಮೇಯರ್ರತ್ತ ಎಲ್ಲರ ದೃಷ್ಟಿ
ಪುಲಿಕೇಶಿನಗರ ಕ್ಷೇತ್ರಕ್ಕೆ ಒಳಪಡುವ ದೇವರ ಜೀವನಹಳ್ಳಿ ವಾರ್ಡ್ ಸದಸ್ಯ ಆರ್.ಸಂಪತ್ರಾಜ್ ಹಾಲಿ ಮೇಯರ್ ಕೂಡ ಹೌದು. ಶಾಸಕ ಸ್ಥಾನಕ್ಕೆ ಬಡ್ತಿ ಪಡೆಯಲು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದು , ಕಾಂಗ್ರೆಸ್ ಟಿಕೆಟ್ಗಾಗಿ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಬಳಿ ಚರ್ಚಿಸಿದ್ದಾರೆ. ಆದರೆ, ಜೆಡಿಎಸ್ ತೊರೆದು ಬಂದಿರುವ ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ನೀಡಲು ಕೈ ನಾಯಕರು ದೃಷ್ಟಿ ಹರಿಸಿದ್ದಾರೆ. ಈ ಸುಳಿವು ಅರಿತ ಬಿಜೆಪಿ ಸಂಪತ್ರಾಜ್ರನ್ನು ಪಕ್ಷದತ್ತ ಸೆಳೆಯುವ ಪ್ರಯತ್ನ ನಡೆಸಿದೆ ಎಂಬ ಗುಲ್ಲು ಕ್ಷೇತ್ರದಲ್ಲಿಹರಡಿದೆ. ಹೀಗಾಗಿ ಮೇಯರ್ ಯಾವ ನಿಲುವು ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಕ್ಷೇತ್ರದಲ್ಲಿರುವ ವಾರ್ಡ್ಗಳು
1. ಕುಶಾಲನಗರ
2. ಕಾವಲ್ಬೈರಸಂದ್ರ
3. ದೇವರ ಜೀವನಹಳ್ಳಿ
4. ಮುನೇಶ್ವರನಗರ
5. ಸಗಾಯಪುರಂ
6. ಎಸ್.ಕೆ.ಗಾರ್ಡನ್
7. ಪುಲಿಕೇಶಿನಗರ
ಸದ್ಯದ ಬಲಾಬಲ: ಕಾಂಗ್ರೆಸ್4, ಜೆಡಿಎಸ್2, ಪಕ್ಷೇತರ1.