ಆ್ಯಪ್ನಗರ

ರಾಜಕಾರಣಿಗಳಿಂದ ದೇಶ ಉದ್ಧಾರವಾಗಲ್ಲ: ಸಚಿವ ಜಿ.ಟಿ.ದೇವೇಗೌಡ ಉವಾಚ

ದೇಶ ಉದ್ಧಾರವಾಗಬೇಕಾದರೆ ವಿದ್ಯಾರ್ಥಿಗಳು ಮುಂದೆ ಬರಬೇಕು. ರಾಜಕಾರಣಿಗಳಿಂದ ಈ ದೇಶ ಮುಂದೆ ಬರಲು ಸಾಧ್ಯವಿಲ್ಲ. ದೇಶವನ್ನು ಅವರು ಉದ್ಧಾರ ಮಾಡುವುದೂ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka 10 Aug 2018, 8:36 am
ಬೆಂಗಳೂರು: ದೇಶ ಉದ್ಧಾರವಾಗಬೇಕಾದರೆ ವಿದ್ಯಾರ್ಥಿಗಳು ಮುಂದೆ ಬರಬೇಕು. ರಾಜಕಾರಣಿಗಳಿಂದ ಈ ದೇಶ ಮುಂದೆ ಬರಲು ಸಾಧ್ಯವಿಲ್ಲ. ದೇಶವನ್ನು ಅವರು ಉದ್ಧಾರ ಮಾಡುವುದೂ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web GTD


ರೇವಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ''ಡಾ.ಬಿ.ಆರ್‌. ಅಂಬೇಡ್ಕರ್‌ ಒಬ್ಬರಿಗೆ ಒಂದೇ ಮತ ನೀಡುವ ಅವಕಾಶ ನೀಡಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಜನಪ್ರತಿನಿಧಿಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಿದೆ,'' ಎಂದು ಸಲಹೆ ನೀಡಿದರು.

ಮಾಜಿ ರಾಷ್ಟ್ರಪತಿ ದಿ. ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡುವಾಗಲೇ ಕುಸಿದು ಸಾವನ್ನಪ್ಪಿದ ಬಗ್ಗೆ ಪ್ರಸ್ತಾಪಿಸಿದ ಅವರು, ''ಇದು ಶಿಕ್ಷಣದ ಮಹತ್ವ. ಆದರೆ, ರಾಜಕಾರಣಿಗಳಿಂದ ಇಂತಹ ಸಮರ್ಪಣಾ ಮನೋಭಾವ ನಿರೀಕ್ಷಿಸಲು ಸಾಧ್ಯವಿಲ್ಲ,'' ಎಂದು ಹೇಳಿದರು.

ಇದೇ ವೇಳೆ ಸರಕಾರಿ ಕಾಲೇಜುಗಳ ಸ್ಥಿತಿಗತಿ ಬಗ್ಗೆ ಪ್ರಸ್ತಾಪಿಸಿದ ಸಚಿವರು ''ಸರಕಾರಿ ಕಾಲೇಜುಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಅಲ್ಲಿ ಎಲ್ಲವೂ ಸಮಸ್ಯೆಯಾಗಿರುತ್ತವೆ. ಕಟ್ಟಡಗಳಿಲ್ಲದೆ ಕಾಲೇಜುಗಳನ್ನು ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ,'' ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

''ರಾಜ್ಯ ಸರಕಾರ ಕೋಟಿ ಕೋಟಿ ರೂ. ಅನುದಾನ ನೀಡುತ್ತದೆ. ಆದರೂ ನಮ್ಮ ಸರಕಾರಿ ಕಾಲೇಜುಗಳ ಸ್ಥಿತಿ ಏಕೆ ಇನ್ನೂ ಶೋಚನೀಯವಾಗಿದೆ. ನಮ್ಮ ಕುಲಪತಿಗಳನ್ನು ನಿಮ್ಮ (ಖಾಸಗಿ) ಕಾಲೇಜುಗಳಿಗೆ ಕಳಿಸಿಕೊಡುತ್ತೇನೆ. ಅವರು ನಿಮ್ಮಿಂದ ನೋಡಿ ಕಲಿಯಲಿ'' ಎಂದು ವಿಸಿಗಳ ವಿರುದ್ಧವೂ ಸಚಿವರು ಹರಿಹಾಯ್ದರು.

''ಕುಲಪತಿಗಳು ಸರಕಾರಿ ಕಾಲೇಜುಗಳನ್ನು ಉನ್ನತ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಖಾಸಗಿ ವಿಶ್ವವಿದ್ಯಾಲಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿವೆ. ಆದರೆ, ನಮ್ಮ ಅಧಿಕಾರಿಗಳು ಹಾಗೂ ವಿಸಿಗಳು ಸರಕಾರಿ ಕಾಲೇಜುಗಳ ಹೆಸರು ಕೆಡಿಸುತ್ತಿದ್ದಾರೆ'' ಎಂದು ಅವರು ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ