ಆ್ಯಪ್ನಗರ

ವನವಾಸಿಗಳಿಗಾಗಿ ಶ್ರಮಿಸಿದ ಪ್ರಕಾಶ್‌ ಕಾಮತ್‌ ನಿಧನ

ಬುಡಕಟ್ಟು ಸಮುದಾಯವರ ಏಳಿಗೆಗಾಗಿ ಶ್ರಮಿಸಿದ ಆರ್‌ಎಸ್‌ಎಸ್‌ ಪ್ರಚಾರಕ ಪ್ರಕಾಶ್‌ ಕಾಮತ್‌(70) ಭಾನುವಾರ ನಿಧನರಾಗಿದ್ದಾರೆ.

Vijaya Karnataka 22 Apr 2019, 5:00 am
ಬೆಂಗಳೂರು : ಬುಡಕಟ್ಟು ಸಮುದಾಯವರ ಏಳಿಗೆಗಾಗಿ ಶ್ರಮಿಸಿದ ಆರ್‌ಎಸ್‌ಎಸ್‌ ಪ್ರಚಾರಕ ಪ್ರಕಾಶ್‌ ಕಾಮತ್‌(70) ಭಾನುವಾರ ನಿಧನರಾಗಿದ್ದಾರೆ.
Vijaya Karnataka Web BNG-2104-2-2-PRAKASH KAMAT


ಅನಾರೋಗ್ಯದಿಂದ ಬಳಲುತಿದ್ದ ಅವರನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕಾಶ್‌ ಅವರು ಆರ್‌ಎಸ್‌ಎಸ್‌ ಸ್ವಯಂಸೇವಕರಾಗಿ ಕರ್ನಾಟಕ, ರಾಂಚಿ, ಜಾರ್ಖಂಡ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಆರ್‌ಎಸ್‌ಎಸ್‌ನ ಚಟುವಟಿಕೆಗಳ ಜತೆಗೆ ಅವರು ಪ್ರಮುಖವಾಗಿ ಬುಡಕಟ್ಟು ಸಮುದಾಯದ ಅಭಿವೃದ್ಧಿ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದರು.

ಬುಡಕಟ್ಟು ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ವನವಾಸಿ ಕಲ್ಯಾಣಾಶ್ರಮವನ್ನು ದೇಶಾದ್ಯಂತ ಆರಂಭಿಸಲಾಯಿತು. ಆ ಸಮಯದಲ್ಲಿ ರಾಜ್ಯದಲ್ಲೂ ಈ ಕಲ್ಯಾಣಾಶ್ರಮದ ಶಾಖೆಯನ್ನು ಆರಂಭಿಸಲು ಅವರು ಕಾರಣಕರ್ತರಾಗಿದ್ದರು. ಇದರ ಜತೆಗೆ ಬುಡಕಟ್ಟು ಸಮುದಾಯವರ ಅಭಿವೃದ್ಧಿಗೆ ಈಶಾನ್ಯ ರಾಜ್ಯಗಳಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ದರು.

ಶೃಂಗೇರಿಯಲ್ಲಿ 1949 ರ ಏ.10 ರಂದು ಜನಿಸಿದ ಅವರು, ಸುರತ್ಕಲ್‌ನ ರೀಜಿನಲ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬ್ಯಾಚುಲರ್‌ ಆಫ್‌ ಎಂಜಿನಿಯರಿಂಗ್‌ ವ್ಯಾಸಂಗ ಮಾಡಿದ್ದರು. ಓದಿನಲ್ಲಿ ಚುರುಕಾಗಿದ್ದ ಅವರು, ಪದವಿಯಲ್ಲಿ ಚಿನ್ನದ ಪದಕವನ್ನೂ ಗಳಿಸಿದ್ದರು.

ದೇಶದ ನಾನಾ ಭಾಗಗಳಲ್ಲಿ ಕಾರ್ಯನಿರ್ವಹಿಸಿದ ಬಳಿಕ ಇತ್ತೀಚೆಗೆ ಕುಮಟಾದಲ್ಲಿ ವನವಾಸಿ ಕಲ್ಯಾಣಾಶ್ರಮದ ಮೇಲ್ವಿಚಾರಣೆಯ ಜವಾಬ್ದಾರಿ ವಹಿಸಿಕೊಂಡು ಅಲ್ಲಿಯೇ ನೆಲೆಸಿದ್ದರು. ಸೋಮವಾರ ಶೃಂಗೇರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಆಶ್ರಮದ ಮೂಲಗಳು ತಿಳಿಸಿವೆ.

ಕಾಮತ್‌ ನಿಧನಕ್ಕೆ ಆರ್‌ಎಸ್‌ ಎಸ್‌ ನ ಹಿರಿಯ ಪ್ರಚಾರಕರಾದ ವಿ.ನಾಗರಾಜ್‌ ಸಂತಾಪ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ