ಆ್ಯಪ್ನಗರ

84 ಖಾಸಗಿ ಪಿಯು ಕಾಲೇಜು ಅನುಮತಿ: ಸಚಿವರಿಂದ ತನಿಖೆಗೆ ಆದೇಶ

ಮೂರು ಕಿ.ಮೀ. ವ್ಯಾಪ್ತಿ ಮೀರಿ ಹಾಗೂ ನೀತಿಸಂಹಿತೆ ನಡುವೆಯೂ 84 ಹೊಸ ಖಾಸಗಿ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸಲು ಸಚಿವಾಲಯದ ಮಟ್ಟದಲ್ಲಿ ಕ್ರಮ ಕೈಗೊಂಡಿರುವ ಕುರಿತು ತನಿಖೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌. ಮಹೇಶ್‌ ತಿಳಿಸಿದ್ದಾರೆ.

Vijaya Karnataka 20 Jun 2018, 8:11 am
ಬೆಂಗಳೂರು : ಮೂರು ಕಿ.ಮೀ. ವ್ಯಾಪ್ತಿ ಮೀರಿ ಹಾಗೂ ನೀತಿಸಂಹಿತೆ ನಡುವೆಯೂ 84 ಹೊಸ ಖಾಸಗಿ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸಲು ಸಚಿವಾಲಯದ ಮಟ್ಟದಲ್ಲಿ ಕ್ರಮ ಕೈಗೊಂಡಿರುವ ಕುರಿತು ತನಿಖೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌. ಮಹೇಶ್‌ ತಿಳಿಸಿದ್ದಾರೆ.
Vijaya Karnataka Web n mahesh


''ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಹಂತದಲ್ಲಿ ಅರ್ಜಿಗಳು ತಿರಸ್ಕೃತಗೊಂಡರೂ ಷರತ್ತುಗಳನ್ನು ಪೂರೈಸುವುದಾಗಿ ಕೆಲ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಕೋರಿದ ಹಿನ್ನೆಲೆಯಲ್ಲಿ ತಮ್ಮ ನಿರ್ಧಾರ ಪುನರ್‌ ಪರಿಶೀಲಿಸುವಂತೆ ಪ್ರಧಾನ ಕಾರ್ಯದರ್ಶಿಗಳು ಸೂಚಿಸಿದ್ದಾರೆ. ಆದರೆ, ಯಾವುದಕ್ಕೂ ಅನುಮತಿ ಕೊಟ್ಟಿಲ್ಲ'' ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

''ಈ ಬಗ್ಗೆ ಪುನರ್‌ ಪರಿಶೀಲಿಸುವಂತೆ ಇಲಾಖೆಯ ನಿರ್ದೇಶಕರಿಗೆ ನಿರ್ದೇಶನ ನೀಡಲು ಕಾಯ್ದೆಯಲ್ಲಿ ಅವಕಾಶವಿದೆ. ಈ ಅಧಿಕಾರವನ್ನು ಬಳಸಿ ಸಚಿವಾಲಯ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇದು ಅಂತಿಮ ಆದೇಶವಲ್ಲ'' ಎಂದು ಸ್ಪಷ್ಟಪಡಿಸಿದರು.

''2018ರ ಜನವರಿ-ಫೆಬ್ರವರಿಯಲ್ಲಿ ಹೊಸ ಕಾಲೇಜುಗಳ ಪ್ರಾರಂಭಕ್ಕೆ ಅರ್ಜಿ ಸಲ್ಲಿಕೆಯಾದರೂ ಶೈಕ್ಷಣಿಕ ವರ್ಷ ಆರಂಭದ ಮೇ- ಜೂನ್‌ನಲ್ಲಿ ಕೆಲ ಶಿಕ್ಷಣ ಸಂಸ್ಥೆಗಳು ಷರತ್ತು ಪೂರೈಸುವ ಭರವಸೆ ನೀಡಿ ಅನುಮತಿ ನೀಡುವಂತೆ ಕೋರಿ ಮನವಿ ಸಲ್ಲಿಸಿವೆ. ಶೈಕ್ಷಣಿಕ ಹಿತದೃಷ್ಟಿಯಿಂದ ಇಂತಹ ಕಾಲೇಜುಗಳಿಗೆ ಅನುಮತಿ ನೀಡಲು ಪುನರ್‌ ಪರಿಶೀಲಿಸುವಂತೆ ಇಲಾಖೆಯ ನಿರ್ದೇಶಕರಿಗೆ ಸೂಚಿಸಲಾಗಿದೆ,'' ಎಂದರು.

''ಸರಕಾರಿ ಪದವಿ ಪೂರ್ವ ಕಾಲೇಜುಗಳಿಗೆ ತೊಂದರೆಯಾಗುವುದನ್ನು ತಪ್ಪಿಸಲು ಮೂರು ಕಿ.ಮೀ. ವ್ಯಾಪ್ತಿಯೊಳಗೆ ಹೊಸ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡಬಾರದು ಎಂಬ ನಿಯಮವಿದ್ದರೂ ನಗರ ಪ್ರದೇಶದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚಿರುವುದರಿಂದ ಅದು ನಗರ ಪ್ರದೇಶಕ್ಕೆ ಅನ್ವಯಿಸುವುದಿಲ್ಲ. ಈ ಕುರಿತು ಕಾಯಿದೆಗೆ ತಿದ್ದುಪಡಿ ತರಲಾಗುತ್ತಿದೆ'' ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಸ್ಪಷ್ಟಪಡಿಸಿದರು.

ನಿರ್ದೇಶಕರಿಗೆ ಅಧಿಕಾರ: ಕಾಯಿದೆಗೆ ತಿದ್ದುಪಡಿ

''ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಹಂತದಲ್ಲೇ ಹೊಸ ಕಾಲೇಜುಗಳಿಗೆ ಅನುಮತಿ ನೀಡುವ ಅಥವಾ ತಿರಸ್ಕರಿಸುವ ಅಧಿಕಾರ ನೀಡಲು ಕಾಯಿದೆಗೆ ತಿದ್ದುಪಡಿ ತರಲಾಗುವುದು. ಇದರಿಂದ ಸಚಿವಾಲಯ ಮೂಗು ತೂರಿಸುವಂತಿರುವುದಿಲ್ಲ'' ಎಂದು ಸಚಿವರು ತಿಳಿಸಿದರು.

''ಕರಡು ಪ್ರತಿಯನ್ನು ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತಾರದೆ ಅಧೀನ ಕಾರ್ಯದರ್ಶಿಗಳೇ ಕೆಲ ಕಡತಗಳಿಗೆ ಸಹಿ ಹಾಕಿರುವ ಹಿನ್ನೆಲೆಯಲ್ಲಿ ಕಾರಣ ಕೇಳಿ ಅವರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ