ಆ್ಯಪ್ನಗರ

ಹಂಗಾಮಿ ಸಭಾಪತಿ ಸ್ಪಷ್ಟನೆಗಾಗಿ ಕೇಂದ್ರಕ್ಕೆ ಪತ್ರ

ಹಂಗಾಮಿ ಸಭಾಪತಿ ನೇಮಕ ಸಂಬಂಧ ರಾಜ್ಯಸಭೆ ಸಚಿವಾಲಯದಿಂದ ಮಹಾಲಕ್ಷ್ಮಿ ಸ್ಪಷ್ಟನೆ ಕೇಳಿರುವುದು ಪ್ರಕರಣದ ಕೇಂದ್ರಬಿಂದು. ಹಂಗಾಮಿ ಸಭಾಪತಿ ಮುಂದುವರಿಕೆ ಕುರಿತಂತೆ ಸದನದಲ್ಲೇ ವಿಸ್ತೃತ ಚರ್ಚೆ ನಡೆದು ವಿಷಯ ಇತ್ಯರ್ಥವಾದ ಬಳಿಕವೂ ಕಾರ್ಯದರ್ಶಿ ಅವರು ಈ ವಿಚಾರದಲ್ಲಿ ಮುಂದುವರಿದಿರುವುದು ಹೊರಟ್ಟಿ ಅವರನ್ನು ಕೆರಳಿಸಿದೆ.

Vijaya Karnataka 1 Nov 2018, 9:56 am
ಬೆಂಗಳೂರು: ವಿಧಾನಸಭೆ ಸಚಿವಾಲಯದಲ್ಲಿ ಸ್ಪೀಕರ್‌ ಹಾಗೂ ಕಾರ್ಯದರ್ಶಿ ಮೂರ್ತಿ ನಡುವಿನ ಸಂಘರ್ಷದ ಬೆನ್ನಲ್ಲೇ, ಹಿರಿಯರ ಸದನ ವಿಧಾನ ಪರಿಷತ್‌ನಲ್ಲೂ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಪ್ರಭಾರ ಕಾರ್ಯದರ್ಶಿ ಕೆ.ಆರ್‌.ಮಹಾಲಕ್ಷ್ಮಿ ನಡುವಿನ ಮುಸುಕಿನ ಗುದ್ದಾಟ ಬೆಳಕಿಗೆ ಬಂದಿದೆ.
Vijaya Karnataka Web basavaraj horatti


ಹಂಗಾಮಿ ಸಭಾಪತಿ ನೇಮಕ ಸಂಬಂಧ ರಾಜ್ಯಸಭೆ ಸಚಿವಾಲಯದಿಂದ ಮಹಾಲಕ್ಷ್ಮಿ ಸ್ಪಷ್ಟನೆ ಕೇಳಿರುವುದು ಪ್ರಕರಣದ ಕೇಂದ್ರಬಿಂದು. ಹಂಗಾಮಿ ಸಭಾಪತಿ ಮುಂದುವರಿಕೆ ಕುರಿತಂತೆ ಸದನದಲ್ಲೇ ವಿಸ್ತೃತ ಚರ್ಚೆ ನಡೆದು ವಿಷಯ ಇತ್ಯರ್ಥವಾದ ಬಳಿಕವೂ ಕಾರ್ಯದರ್ಶಿ ಅವರು ಈ ವಿಚಾರದಲ್ಲಿ ಮುಂದುವರಿದಿರುವುದು ಹೊರಟ್ಟಿ ಅವರನ್ನು ಕೆರಳಿಸಿದೆ.

ಸಭಾಪತಿ ಸ್ಥಾನದಿಂದ ಡಿ.ಎಚ್‌.ಶಂಕರಮೂರ್ತಿ ನಿವೃತ್ತರಾದ ಬಳಿಕ ಸದನದ ಅತೀಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿ ಅವರನ್ನು ಹಂಗಾಮಿ ಸಭಾಪತಿಯಾಗಿ ರಾಜ್ಯಪಾಲರು ನೇಮಕ ಮಾಡಿದ್ದರು. ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸದೆ ಹಂಗಾಮಿಯನ್ನೇ ಮುಂದುವರಿಸುವ ಬಗ್ಗೆ ಸದನದಲ್ಲೇ ಆಕ್ಷೇಪ ವ್ಯಕ್ತವಾಗಿತ್ತು. ಈ ಸಂಬಂಧ ಕಳೆದ ಜುಲೈ 6 ರಂದು ವಿಧಾನ ಪರಿಷತ್ತಿನಲ್ಲೇ ವಿಸ್ತೃತ ಚರ್ಚೆ ನಡೆದಿತ್ತು. ಈ ಚರ್ಚೆ ಅವಧಿಯಲ್ಲಿ ಹೊರಟ್ಟಿ ಸಭಾಪತಿ ಸ್ಥಾನದಲ್ಲಿ ಕೂರದೆ ಸದನದ ಕಲಾಪದಿಂದ ಹೊರಗುಳಿದಿದ್ದರು. ಹಂಗಾಮಿ ಸಭಾಪತಿಯಾಗಿ ಹೊರಟ್ಟಿ ಅವರ ಮುಂದುವರಿಕೆಗೆ ಅವಕಾಶವಿರುವುದನ್ನು ಖಚಿತಪಡಿಸಿಕೊಳ್ಳಲಾಗಿತ್ತು.

ಇದಾದ ಬಳಿಕವೂ ಪ್ರಭಾರ ಕಾರ್ಯದರ್ಶಿ ಕೆ.ಆರ್‌.ಮಹಾಲಕ್ಷ್ಮಿ ಅವರು ಆ. 28 ರಂದು ರಾಜ್ಯಸಭಾ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಸೆ.5 ರಂದು ಸ್ಪಷ್ಟನೆ ನೀಡಿದ್ದ ರಾಜ್ಯಸಭಾ ಸಚಿವಾಲಯ ''ಸಭಾಪತಿ ಮತ್ತು ಉಪಸಭಾಪತಿ ಎರಡೂ ಸ್ಥಾನ ಖಾಲಿ ಉಳಿದಿದ್ದಾಗ ಸಭಾಪತಿ ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸಲು ಸದನದ ಸದಸ್ಯರೊಬ್ಬರನ್ನು ಹಂಗಾಮಿ ಸಭಾಪತಿಯಾಗಿ ನೇಮಕ ಮಾಡಲು ಅವಕಾಶವಿದೆ'' ಎಂದು ಸ್ಪಷ್ಟಪಡಿಸಿತ್ತು.

ಈ ಬೆಳವಣಿಗೆ ಗಮನಕ್ಕೆ ಬರುತ್ತಿದ್ದಂತೆ ಸಭಾಪತಿ ಹೊರಟ್ಟಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಸದನದಲ್ಲೇ ವಿಷಯ ಇತ್ಯರ್ಥವಾದ ನಂತರವೂ ಸ್ಪಷ್ಟನೆ ಬಯಸಿ ರಾಜ್ಯಸಭಾ ಸಚಿವಾಲಯಕ್ಕೆ ಪತ್ರ ಬರೆದಿದ್ದು ಏಕೆ? ಯಾರ ಸೂಚನೆಯಂತೆ ಪತ್ರ ಬರೆಯಲಾಗಿದೆ ಮತ್ತು ಈ ರೀತಿ ಪತ್ರ ಬರೆಯಲು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಲಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ. ಈ ಸಂಬಂಧ ಕೂಡಲೇ ಕಡತ ಮಂಡಿಸುವಂತೆ ಮತ್ತು ವಿವರಣೆ ಸಲ್ಲಿಸುವಂತೆ ಕಾರ್ಯದರ್ಶಿಯವರಿಗೆ ಹೊರಟ್ಟಿ ಅವರು ಆದೇಶಿಸಿದ್ದಾರೆ ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

ಅಧಿಕಾರವಿಲ್ಲದ ಕಾರ್ಯದರ್ಶಿ
ವಿಧಾನಸಭೆ ಸಚಿವಾಲಯದಲ್ಲಿ ಅಕ್ರಮ ನೇಮಕ ಹಾಗೂ ಅವ್ಯವಹಾರ ಕುರಿತಂತೆ ತನಿಖೆ ನಡೆಯುತ್ತಿದ್ದು, ಕಾರ್ಯದರ್ಶಿಯ ಸಾಮರ್ಥ್ಯ‌ ಮತ್ತು ದಕ್ಷತೆ ಬಗ್ಗೆ ಆಕ್ಷೇಪ ಎತ್ತಿದ್ದ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರು ಎಸ್‌.ಮೂರ್ತಿ ಅವರಿಂದ ಆಡಳಿತಾತ್ಮಕ ಅಧಿಕಾರ ಹಿಂಪಡೆದಿದ್ದಾರೆ. ಕಾರ್ಯದರ್ಶಿ ಎಸ್‌.ಮೂರ್ತಿ ಅವರನ್ನು ಶಿಷ್ಟಾಚಾರ ಸಂಬಂಧಿ ಕರ್ತವ್ಯಕ್ಕೆ ಸೀಮಿತಗೊಳಿಸಿ ವಿಧಾನಸಭೆ ಸಚಿವಾಲಯದ ನಿರ್ದೇಶಕಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ಸಂಪೂರ್ಣ ಆಡಳಿತಾತ್ಮಕ ಅಧಿಕಾರಗಳನ್ನು ಹಸ್ತಾಂತರ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ