ಆ್ಯಪ್ನಗರ

ಮುದ್ದೆ ತಿಂದು 15 ಸಾವಿರ ರೂ. ಗೆದ್ದ 59 ವರ್ಷದ ಭೂಪ !

ಅದೊಂದು ರಾಗಿಮುದ್ದೆ ಉಣ್ಣುವ ಸ್ಪರ್ಧೆ, 27 ಮಂದಿ ನೋಂದಾಯಿತ ಸ್ಪರ್ಧಾಳುಗಳಲ್ಲಿ ಪ್ರಾಯದ ಹುಡುಗರಿದ್ದರೂ, 59 ವರ್ಷದ ಮೀಸೆ ಈರೇಗೌಡ ಬರೋಬ್ಬರಿ ...

Vijaya Karnataka 27 Jun 2019, 5:00 am
ಬೆಂಗಳೂರು: ಅದೊಂದು ರಾಗಿಮುದ್ದೆ ಉಣ್ಣುವ ಸ್ಪರ್ಧೆ, 27 ಮಂದಿ ನೋಂದಾಯಿತ ಸ್ಪರ್ಧಾಳುಗಳಲ್ಲಿ ಪ್ರಾಯದ ಹುಡುಗರಿದ್ದರೂ, 59 ವರ್ಷದ ಮೀಸೆ ಈರೇಗೌಡ ಬರೋಬ್ಬರಿ ಮೂರುವರೆ ಕೆ.ಜಿ. ತೂಕದ ಮುದ್ದೆ ತಿಂದು ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡರು.
Vijaya Karnataka Web 2606-2-2-KSG_12


ನಗರದ ಯಡಿಯೂರಿನಲ್ಲಿರುವ ಬಿಬಿಎಂಪಿ ಸಮುದಾಯ ಭವನದಲ್ಲಿ ಬುಧವಾರ ದಶಮುಖ ಸಾಮಾಜಿಕ ಸೇವಾ ಟ್ರಸ್ಟ್‌ ನಾಟಿ ಕೋಳಿ ಸಾಂಬಾರ್‌ನಲ್ಲಿ ರಾಗಿ ಮುದ್ದೆ ಉಣ್ಣುವ ಸ್ಪರ್ಧೆ ಏರ್ಪಡಿಸಿತ್ತು.

ಪ್ರಥಮ ಸ್ಥಾನ ಪಡೆದ ಶ್ರೀರಂಗಪಟ್ಟಣದ ಅರಕೆರೆ ಗ್ರಾಮದ ಮೀಸೆ ಈರೇಗೌಡ ಅವರು ಅರ್ಧ ಕೆ.ಜಿ. ತೂಕದ 7 ಮುದ್ದೆಗಳನ್ನು 15 ನಿಮಿಷದಲ್ಲಿ ತಿಂದು 15 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನು ತಮ್ಮದಾಗಿಸಿಕೊಂಡರು. ಈರೇಗೌಡ ಅವರು ಈವರೆಗೆ 13 ಬಾರಿ ಮೊದಲ ಸ್ಥಾನ ಪಡೆದಿದ್ದಾರೆ.

ಮದ್ದೂರಿನ ದೊಡ್ಡ ಅರಸಿನಕೆರೆಯ ಸುರೇಶ್‌, 3 ಕೆ.ಜಿ 350 ಗ್ರಾಂ ತೂಕದ ಮುದ್ದೆ ತಿಂದು ಎರಡನೇ ಸ್ಥಾನ ಗಳಿಸಿ, 10 ಸಾವಿರ ರೂ. ನಗದು ಬಹುಮಾನ ಪಡೆದುಕೊಂಡರು. ಬೆಂಗಳೂರಿನ ಹಳೇ ಮದ್ರಾಸ್‌ ರಸ್ತೆಯ ಯುವರಾಜ್‌ ಎಂಬುವರು 3 ಕೆ.ಜಿ. 200 ಗ್ರಾಂ ತೂಕದ ಮುದ್ದೆ ತಿಂದು ಮೂರನೇ ಸ್ಥಾನ ಗಳಿಸಿದರು. ಇವರಿಗೆ 5 ಸಾವಿರ ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ ನೀಡಲಾಯಿತು.

ಸ್ಪರ್ಧೆಗೆ ಒಂದು ಸಾವಿರ ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿತ್ತು. ಇದೇ ವೇಳೆ ರಾಗಿ ಗಂಜಿ ಮತ್ತು ರಾಗಿ ಮುದ್ದೆ ಸೇವನೆಯಿಂದ ಆರೋಗ್ಯಕ್ಕಾಗುವ ಅನುಕೂಲಗಳ ಕುರಿತು ಕೃಷಿ ವಿವಿ ಪ್ರಾಧ್ಯಾಪಕರಾದ ಡಾ. ಕೆ.ಗೀತಾ ಮತ್ತು ಡಾ. ಕೆ.ಬಿ.ಸುರೇಶ್‌ ವಿವರ ನೀಡಿದರು.

''ಮನೆಯಲ್ಲಿ ಮೂರು ಹೊತ್ತು ಐದೂವರೆ ಮುದ್ದೆ, ಒಂದೂವರೆ ಕೆ.ಜಿ ಅನ್ನ, ಒಂದೂವರೆ ಲೀಟರ್‌ ಮಜ್ಜಿಗೆ ಸೇವಿಸುತ್ತೇನೆ. ಊರಿನ ಯುವಕರ ಒತ್ತಡದಿಂದ ಬಿಡುವಿನ ವೇಳೆಯಲ್ಲಿ ರಾಗಿ ತಿನ್ನುವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತೇನೆ,'' ಎಂದು ಈರೇಗೌಡ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು. ಶಾಸಕ ಉದಯ್‌ ಗರುಡಾಚಾರ್‌, ಟ್ರಸ್ಟ್‌ ಅಧ್ಯಕ್ಷ ಎಚ್‌.ಕೆ.ಬೊಮ್ಮೇಗೌಡ ಮತ್ತಿತರರು ಉಪಸ್ಥಿತರಿದ್ದರು.


24 ಬೇಯಿಸಿದ ಮೊಟ್ಟೆ ನುಂಗುವುದು, ಒಂದೇ ಬಾರಿಗೆ 5-6 ಲೀಟರ್‌ ಹಾಲು ಕುಡಿಯುವುದು, ಸಿಪ್ಪೆ ಸಮೇತ 2 ಕೆ.ಜಿ ಯಷ್ಟು ಏಲಕ್ಕಿ ಬಾಳೆಹಣ್ಣು ತಿನ್ನುವ ಸ್ಪರ್ಧೆಗಳಲ್ಲೂ ಜಯ ಗಳಿಸಿದ್ದೇನೆ. ಎಷ್ಟೇ ತಿಂದರೂ ಆರೋಗ್ಯದಲ್ಲಿ ಯಾವುದೇ ರೀತಿಯ ಏರುಪೇರು ಆಗಿಲ್ಲ.

-ಈರೇಗೌಡ, ಸ್ಪರ್ಧಾಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ