ಆ್ಯಪ್ನಗರ

ರಾಯಚೂರು ಎಂಜಿನಿಯರಿಂಗ್‌ ವಿದ್ಯಾರ್ಥಿನಿಯದ್ದು ಆತ್ಮಹತ್ಯೆ: ಸಿಐಡಿ

ಕಿರುಕುಳ ನೀಡಿದ ಆರೋಪದಲ್ಲಿ ಸ್ನೇಹಿತನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

Vijaya Karnataka 17 Jul 2019, 8:11 am
ಬೆಂಗಳೂರು: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ರಾಯಚೂರಿನ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿನಿ ಸಾವು ಆತ್ಮಹತ್ಯೆ ಎಂದು ಸಿಐಡಿ ತನಿಖೆಯಲ್ಲಿ ದೃಢಪಟ್ಟಿದೆ. 21 ವರ್ಷದ ವಿದ್ಯಾರ್ಥಿನಿ ಶಂಕಾಸ್ಪದ ಸಾವಿನ ಪ್ರಕರಣದ ತನಿಖೆ ಸಿಐಡಿ ಅಧಿಕಾರಿಗಳು ಪೂರ್ಣಗೊಳಿಸಿ ಮಂಗಳವಾರ ರಾಯಚೂರಿನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
Vijaya Karnataka Web Suicide Hang


1,068 ಪುಟಗಳು, 63 ಸಾಕ್ಷಿದಾರರು ಮತ್ತು 45 ದಾಖಲೆಗಳು ಒಳಗೊಂಡ ಆರೋಪ ಪಟ್ಟಿಯನ್ನು ಸಿಐಡಿ ಎಸ್‌ಪಿ ಎಸ್‌. ಡಿ. ಶರಣಪ್ಪ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈಗಾಗಲೇ ಬಂಧನಕ್ಕೆ ಒಳಗಾಗಿರುವ ಮೃತ ವಿದ್ಯಾರ್ಥಿನಿ ಸ್ನೇಹಿತ ಸುದರ್ಶನ್‌ ಯಾದವ್‌ನನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿ ಎಂದು ಹೆಸರಿಸಲಾಗಿದೆ.

ಏ.13ರ ಬೆಳಗ್ಗೆ ಕಾಲೇಜಿಗೆ ಹೋಗಿದ್ದ ವಿದ್ಯಾರ್ಥಿನಿ ಮನೆಗೆ ವಾಪಸ್‌ ಬಂದಿರಲಿಲ್ಲ. ಅದೇ ದಿನ ಪಾಲಕರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಏ.15ರ ಸಂಜೆ ರಾಯಚೂರಿನ ಮಾಣಿಕ್‌ ಪ್ರಭು ದೇಗುಲ ಸಮೀಪದ ಗುಡ್ಡಗಾಡು ಪ್ರದೇಶದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ, ವಿದ್ಯಾರ್ಥಿನಿ ಶವ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸ್ಥಳದಲ್ಲಿ ದೊರೆತ ಡೆತ್‌ ನೋಟ್‌ ಆಧರಿಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಾಯಚೂರು ಪೊಲೀಸರು ಮುಕ್ತಾಯಗೊಳಿಸಿದ್ದರು.

ಇದನ್ನು ಖಂದಿಸಿ ವಿದ್ಯಾರ್ಥಿ ಸಂಘಟನೆಗಳು, ಸೆಲೆಬ್ರಿಟಿಗಳು, ವಿದ್ಯಾರ್ಥಿನಿ ಸಾವು ಆತ್ಮಹತೆಯಲ್ಲ ಕೊಲೆ ಎಂದು ರಾಜ್ಯದೆಲ್ಲೆಡೆ ವಿವಿಧೆಡೆ ಪ್ರತಿಭಟನೆ ನಡೆಸಿದ್ದವು. ಈ ಕುರಿತು ತನಿಖೆಯನ್ನು ರಾಜ್ಯ ಸರಕಾರ ಸಿಐಡಿಗೆ ವಹಿಸಿತ್ತು.

ಶವದ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದ ದೇಹದ ಕೆಲ ಮಾದರಿ ಮತ್ತು ವೈದ್ಯರ ಪ್ರಾಥಮಿಕ ವರದಿ ಉಲ್ಲೇಖಿಸಿ ಸ್ಥಳೀಯ ಪೊಲೀಸರು ಆತ್ಮಹತ್ಯೆ ಎಂದು ತಿಳಿಸಿದ್ದರು. ನಂತರ ತನಿಖೆ ಕೈಗೆತ್ತಿಕೊಂಡಿದ್ದ ಸಿಐಡಿ ಪೊಲೀಸರು, ಮಣ್ಣಿನ ಮಾದರಿ ಮತ್ತು ವಿದ್ಯಾರ್ಥಿನಿ ಬರೆದಿಟ್ಟಿದ್ದ ಡೆತ್‌ನೋಟ್‌ ಪತ್ರ ಮತ್ತು ಆಕೆ ಪಿಯು ಉತ್ತರ ಪತ್ರಿಕೆಯನ್ನು ಪಡೆದು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರಿಶೀಲನೆಗೆ ಕಳುಹಿಸಿದ್ದರು. ಈ ಸಂಬಂಧ ಎಲ್ಲ ವರದಿಗಳ ಬಂದಿದ್ದು, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೃಢಪಡಿಸಿರುವ ವರದಿಗಳನ್ನು ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

ಪ್ರೀತಿ, ಪ್ರೇಮವೂ ಕಾರಣ


ಯುವತಿಯನ್ನು ಪ್ರೀತಿ, ಪ್ರೇಮ ವಿಚಾರವಾಗಿ ಸುದರ್ಶನ್‌ ಯಾದವ್‌ ಕಿರುಕುಳ ನೀಡುತ್ತಿದ್ದ. ಈ ಕಾರಣದಿಂದಾಗಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪ ಕೂಡ ಇದೆ. ಹೀಗಾಗಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಸುದರ್ಶನ್‌ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ