ಆ್ಯಪ್ನಗರ

ರೈಲ್ವೆ ಎಂಜಿನಿಯರಿಂಗ್‌ ಪರೀಕ್ಷೆಯಲ್ಲಿ 18 ಬಾರಿ ಕೈ ಕೊಟ್ಟ ಸರ್ವರ್‌

ರೈಲ್ವೆ ಇಲಾಖೆಯ ಕಿರಿಯ ಎಂಜಿನಿಯರ್‌ ಹುದ್ದೆಗೆ ಗುರುವಾರ ನಡೆದ ಆನ್‌ಲೈನ್‌ ಪರೀಕ್ಷೆಯಲ್ಲಿ 18 ಬಾರಿ ಸರ್ವರ್‌ ಕೈ ಕೊಟ್ಟಿತು. ನಾಲ್ಕು ಬಾರಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡು ಅಭ್ಯರ್ಥಿಗಳು ತೀವ್ರ ಪರದಾಟದಿಂದ ಪರೀಕ್ಷೆ ಬರೆಯಬೇಕಾಯಿತು.

Vijaya Karnataka 31 May 2019, 5:00 am
ಬೆಂಗಳೂರು : ರೈಲ್ವೆ ಇಲಾಖೆಯ ಕಿರಿಯ ಎಂಜಿನಿಯರ್‌ ಹುದ್ದೆಗೆ ಗುರುವಾರ ನಡೆದ ಆನ್‌ಲೈನ್‌ ಪರೀಕ್ಷೆಯಲ್ಲಿ 18 ಬಾರಿ ಸರ್ವರ್‌ ಕೈ ಕೊಟ್ಟಿತು. ನಾಲ್ಕು ಬಾರಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡು ಅಭ್ಯರ್ಥಿಗಳು ತೀವ್ರ ಪರದಾಟದಿಂದ ಪರೀಕ್ಷೆ ಬರೆಯಬೇಕಾಯಿತು.
Vijaya Karnataka Web railway online exam server down
ರೈಲ್ವೆ ಎಂಜಿನಿಯರಿಂಗ್‌ ಪರೀಕ್ಷೆಯಲ್ಲಿ 18 ಬಾರಿ ಕೈ ಕೊಟ್ಟ ಸರ್ವರ್‌


ಬೆಂಗಳೂರಿನ ಎಂ.ಎಸ್‌.ಪಾಳ್ಯದ ಸಂಭ್ರಮ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮಧ್ಯಾಹ್ನ 12.30 ರಿಂದ 2 ಗಂಟೆವರೆಗೆ ಪರೀಕ್ಷೆ ಏರ್ಪಡಿಸಲಾಗಿತ್ತು. ಆನ್‌ಲೈನ್‌ ಪರೀಕ್ಷೆಯಾಗಿದ್ದರಿಂದ ವೇಗವಾದ ಸೇವೆ ನೀಡುವ ಸರ್ವರ್‌ ಹಾಗೂ ನಿರಂತರ ವಿದ್ಯುತ್‌ ಪೂರೈಕೆಯ ಅಗತ್ಯವಿತ್ತು. ಆದರೆ ಪರೀಕ್ಷೆ ಆರಂಭವಾದ ಕೆಲ ನಿಮಿಷಗಳಲ್ಲೇ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡು ಕಂಪ್ಯೂಟರ್‌ ಆಫ್‌ ಆಗಿ ಎಲ್ಲರೂ ಕತ್ತಲಲ್ಲಿ ಕುಳಿತರು. ಈ ಕುರಿತು ಅಭ್ಯರ್ಥಿಗಳು ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ವಿದ್ಯುತ್‌ಗೆ ಪರ್ಯಾಯ ವ್ಯವಸ್ಥೆ ಇಲ್ಲ ಎಂದು ತಿಳಿಸಿದರು. ನಂತರ ವಿದ್ಯುತ್‌ ಬಂದರೂ ಸರ್ವರ್‌ 18 ಬಾರಿ ಕೈ ಕೊಟ್ಟು ಅಭ್ಯರ್ಥಿಗಳನ್ನು ಚಿಂತೆಗೀಡುಮಾಡಿತು.

ಬೆಳಗ್ಗೆ ಹಾಗೂ ಮಧ್ಯಾಹ್ನ ಮೂರು ಪಾಳಿಗಳಲ್ಲಿ ಪರೀಕ್ಷೆ ಏರ್ಪಡಿಸಲಾಗಿತ್ತು. ಎರಡನೇ ಪಾಳಿಯಲ್ಲಾದ ಈ ಸಮಸ್ಯೆಯಿಂದ ಮೂರನೇ ಪಾಳಿಯ ಅಭ್ಯರ್ಥಿಗಳು ತಡವಾಗಿ ಪರೀಕ್ಷೆ ಬರೆದರು.

ಈ ಕುರಿತು ಮಾಹಿತಿ ನೀಡಿದ ಅಭ್ಯರ್ಥಿ ಧಾರವಾಡದ ಮಹೇಶ್‌, ''ಪ್ರತಿ ಬಾರಿ ಲಾಗಿನ್‌ ಆಗಲು ಕನಿಷ್ಠ 3 ನಿಮಿಷ ಬೇಕಾಗುತ್ತದೆ. ಲಾಗಿನ್‌ ಆಗುವುದರಲ್ಲೇ ಸಮಯ ಕಳೆದುಹೋಯಿತು. ಪರೀಕ್ಷಾ ಸಿಬ್ಬಂದಿ ನಮಗೆ ಹೆಚ್ಚಿನ ಕಾಲಾವಕಾಶ ನೀಡಲಿಲ್ಲ,''ಎಂದು ದೂರಿದರು.

''ಪರೀಕ್ಷೆಗೆ ಹಾಜರಾಗಲು ಧಾರವಾಡದಿಂದ ಬಸ್‌ನಲ್ಲಿ ಬಂದಿದ್ದೆ. ಮಂಡಳಿಯವರು ಸರಿಯಾದ ಮೂಲಸೌಕರ್ಯವಿಲ್ಲದೆ ಆನ್‌ಲೈನ್‌ ಪರೀಕ್ಷೆ ಏರ್ಪಡಿಸಿ ಸಮಸ್ಯೆ ಉಂಟುಮಾಡಿದ್ದಾರೆ. ಮರು ಪರೀಕ್ಷೆ ಬರೆಯಬೇಕೆಂಬ ನಿರೀಕ್ಷೆಯನ್ನು ನಾವು ಇಟ್ಟುಕೊಂಡಿಲ್ಲ,'' ಎಂದು ತಿಳಿಸಿದರು.

ಹುಬ್ಬಳ್ಳಿಯ ರೇಣುಕ ಮಾತನಾಡಿ,''ಎಂದೂ ಇಂತಹ ಕೆಟ್ಟ ಅನುಭವವಾಗಿರಲಿಲ್ಲ. ಕುಡಿಯಲು ನೀರು ಕೇಳಿದರೆ ಎದ್ದು ಹೋಗಿ ಫಿಲ್ಟರ್‌ ಬಳಿ ಕುಡಿಯಿರಿ ಎಂದು ಸಿಬ್ಬಂದಿ ನಿರ್ಲಕ್ಷ್ಯದಿಂದ ಉತ್ತರಿಸಿದರು. ಪರೀಕ್ಷೆ ಆರಂಭಕ್ಕೆ ಮುನ್ನ ಇದ್ದ ಬಿಡುವಿನಲ್ಲಿ ಹಾಜರಿ ಪತ್ರದಲ್ಲಿ ಸಹಿ ಮಾಡಿಸಿಕೊಳ್ಳಬಹುದಿತ್ತು. ಆದರೆ ಕಷ್ಟದಲ್ಲಿ ಪರೀಕ್ಷೆ ಬರೆಯುತ್ತಿದ್ದಾಗಲೇ ಸಹಿ ಮಾಡಿಸಿಕೊಂಡು ಅಭ್ಯರ್ಥಿಗಳ ಸಮಯ ಹಾಳು ಮಾಡಿದರು,'' ಎಂದು ಬೇಸರ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ