ಆ್ಯಪ್ನಗರ

ಟ್ರಫ್‌ ಪರಿಣಾಮ ರಾಜ್ಯದ ಹಲವೆಡೆ ಮಳೆ, ಇನ್ನೂ ಮೂರು ದಿನ ಇದೇ ಕಥೆ

ಬೇಸಿಗೆ ಆರಂಭದಲ್ಲೇ ಕರ್ನಾಟಕದಾದ್ಯಂತ ಮಳೆಯಾಗಿದ್ದು, ಇನ್ನೂ ಮೂರು ದಿನಗಳವರೆಗೆ ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

Vijaya Karnataka 2 Mar 2020, 8:11 pm

ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಾಗೂ ರಾಜ್ಯದಲ್ಲಿ ಟ್ರಫ್‌ (ವಾತಾವರಣದಲ್ಲಿ ಗಾಳಿಯ ಚಲನೆಯಿಂದ ಉಂಟಾಗುವ ಪರಿಣಾಮ) ಉಂಟಾದ ಪರಿಣಾಮ ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಬೇಸಿಗೆ ಆರಂಭದಲ್ಲಿ ಮಳೆ ಸುರಿದಿದೆ. ಇನ್ನೂ ಮೂರು ದಿನಗಳವರೆಗೆ ಸಾಧಾರಣ ಮಳೆ ಬರುವ ಸಾಧ್ಯತೆ ಇದೆ.
Vijaya Karnataka Web Rain


ಬೇಸಿಗೆಯ ಆರಂಭದಲ್ಲೇ ರಾಜ್ಯದಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಒಂದೇ ಬಾರಿಗೆ ಏರಿಕೆಯಾಗಿದ್ದು ಕೂಡ ಮಳೆ ಬರಲು ಕಾರಣ. ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಇರುವುದರಿಂದ ಹಾಗೂ ಮಧ್ಯ ಪ್ರದೇಶದಿಂದ ಕರ್ನಾಟಕವರೆಗೆ ಟ್ರಫ್‌ ಇರುವುದರಿಂದ ಕರಾವಳಿ ಭಾಗದಲ್ಲಿ ಹೆಚ್ಚು ಮಳೆ ಸುರಿದಿದೆ. ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಕೆಲವೆಡೆ ತುಂತುರು ಮಳೆಯಾಗಿದೆ.

ರಾಜ್ಯದ ವಿವಿಧೆಡೆ ವರ್ಷದ ಮೊದಲ ಮಳೆಯ ಸಿಂಚನ, ಶಿವಮೊಗ್ಗದಲ್ಲಿ ಬಿರುಸಿನ ಮಳೆ

ಸೋಮವಾರ ದಕ್ಷಿಣ ಕನ್ನಡದ ಬೆಳ್ತಂಗಡಿಯ ಮಲವಂತಿಗೆಯಲ್ಲಿ 43 ಮಿ.ಮೀ., ಚಾರ್ಮಾಡಿಯಲ್ಲಿ 20 ಮಿ.ಮೀ., ಸೂಲಿಕೆರೆ, ನಾವೂರಿನಲ್ಲಿ 28 ಮಿ.ಮೀ., ಹಾಸನದ ಕುಂದೂರಿನಲ್ಲಿ31 ಮಿ.ಮೀ., ಪನ್ನೂರಿನಲ್ಲಿ 23 ಮಿ.ಮೀ., ಹೆಗಡಿಹಳ್ಳಿಯಲ್ಲಿ 29 ಮಿ.ಮೀ., ಚಾಮರಾಜನಗರದ ದೊಡ್ಡಮೋಳೆಯಲ್ಲಿ 27 ಮಿ.ಮೀ., ಕೊಡಗಿನ ಸೋಮವಾರಪೇಟೆಯಲ್ಲಿ 23 ಮಿ.ಮೀ., ಕೊಡ್ಲಿಪೇಟೆಯಲ್ಲಿ19 ಮಿ.ಮೀ., ಮಂಡ್ಯದ ಮೈಗಾನಹಳ್ಳಿಯಲ್ಲಿ 23 ಮಿ.ಮೀ., ಕೆ.ಆರ್‌.ಪೇಟೆಯಲ್ಲಿ 30 ಮಿ.ಮೀ., ಮೈಸೂರು ನಗರದಲ್ಲಿ 23 ಮಿ.ಮೀ., ಶ್ರೀರಂಗಪಟ್ಟಣದಲ್ಲಿ 40 ಮಿ.ಮೀ., ಮಂಗಳೂರಿನಲ್ಲಿ 20 ಮಿ.ಮೀ., ಕಾರ್ಕಳ, ಇನಕಲ್‌ನಲ್ಲಿ11 ಮಿ.ಮೀ. ಮಳೆ ಸುರಿದಿದೆ.

ಇನ್ನೂ ಮೂರು ದಿನಗಳವರೆಗೆ ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

‘‘ತಾಪಮಾನ ಏರಿಕೆಯಾದಾಗ ಒತ್ತಡ ಹೆಚ್ಚಾಗಿ ಮಳೆ ಬರುವುದು ಸಹಜ. ಈ ಬಾರಿ ಮೇಲ್ಮೈ ಸುಳಿಗಾಳಿಯು ಮಳೆ ಬರಲು ಮುಖ್ಯ ಕಾರಣವಾಗಿದೆ. ಇನ್ನೂ ಮೂರು ದಿನ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ,’’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್‌. ಶ್ರೀನಿವಾಸರೆಡ್ಡಿ ತಿಳಿಸಿದರು.

ಕಲುಬುರ್ಗಿಯಲ್ಲಿ 35 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ