ಆ್ಯಪ್ನಗರ

ನನ್ನ ಬೆನ್ನ ಹಿಂದೆ ಗೊತ್ತಾಗದ ಬೆಳವಣಿಗೆ ನಡೆದವು: ನರೇಶ್‌, ಶ್ರವಣ್‌ ಗೇಮ್‌ ಬಗ್ಗೆ ಎಸ್‌ಐಟಿಗೆ ಪತ್ರ: ಉಲ್ಟಾ ಹೊಡೆದರಾ ಸಿ.ಡಿ. ಯುವತಿ?

ಎಸ್‌ಐಟಿ ತನಿಖಾಧಿಕಾರಿಗೆ ಪತ್ರ ಬರೆದ ಯುವತಿ, ''ಪ್ರಕರಣದ ಬಗ್ಗೆ ನನಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳಬೇಕಿದೆ. ತನಿಖಾ ತಂಡ ಮತ್ತು ನ್ಯಾಯಾಲಯದಲ್ಲೂ ಹೇಳಿಕೆ ನೀಡುತ್ತೇನೆ. ಅದಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ

Vijaya Karnataka Web 12 Apr 2021, 9:48 pm
ಬೆಂಗಳೂರು: 'ನನಗೆ ಗೊತ್ತಿಲ್ಲದಂತೆ ನನ್ನ ಬೆನ್ನ ಹಿಂದೆ ಅನೇಕ ಘಟನೆಗಳು, ಬೆಳವಣಿಗೆಗಳು ನಡೆದಿವೆ. ನನಗೆ ಗೊತ್ತಾಗಲಿಲ್ಲ' ಎಂದು ಹೇಳುವ ಮೂಲಕ ಸಿ.ಡಿ ಯುವತಿ 'ಯು ಟರ್ನ್‌' ಹೊಡೆಯುವ ಸುಳಿವು ನೀಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಸಿ.ಡಿ ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ.ಡಿ. ಪ್ರಕರಣದ ಯುವತಿ ಈ ಹಿಂದೆ ನೀಡಿದ್ದ ಹೇಳಿಕೆಗೆ ತದ್ವಿರುದ್ಧವಾಗಿ ಕೆಲ ವಿಚಾರಗಳನ್ನು ಎಸ್‌ಐಟಿ ಎದುರು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

ಎಸ್‌ಐಟಿ ತನಿಖಾಧಿಕಾರಿಗೆ ಪತ್ರ ಬರೆದ ಯುವತಿ, ''ಪ್ರಕರಣದ ಬಗ್ಗೆ ನನಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳಬೇಕಿದೆ. ತನಿಖಾ ತಂಡ ಮತ್ತು ನ್ಯಾಯಾಲಯದಲ್ಲೂ ಹೇಳಿಕೆ ನೀಡುತ್ತೇನೆ. ಅದಕ್ಕೆ ಅವಕಾಶ ನೀಡಿ'' ಎಂದು ಕೋರಿದ್ದರು.

ಸೋಮವಾರ ಬೆಂಗಳೂರಿನ ಆಡುಗೋಡಿಯಲ್ಲಿರುವ ಕಚೇರಿಗೆ ಹಾಜರಾದ ಯುವತಿ ಕೆಲ ಕಾಲ ಹೇಳಿಕೆ ದಾಖಲಿಸಿ, ''ಮೂರು ದಿನಗಳ ಕಾಲಾವಕಾಶ ನೀಡಿ ಮತ್ತೆ ಹಾಜರಾಗಿ ಹೇಳಿಕೆ ನೀಡುತ್ತೇನೆ'' ಎಂದು ಹೇಳಿ ಹೋಗಿದ್ದಾರೆ ಎಂದು ಹೇಳಲಾಗಿದೆ.

''ಈ ಪ್ರಕರಣದಲ್ಲಿ ನನ್ನನ್ನು ಬಳಸಿಕೊಂಡರು ಎಂದು ನನಗೆ ತಡವಾಗಿ ಗೊತ್ತಾಗುತ್ತಿದೆ. ಕಳೆದ ಕೆಲ ತಿಂಗಳಿಂದ ನನ್ನ ಬೆನ್ನ ಹಿಂದೆ ನಡೆದ ವಿಚಾರಗಳು ನನಗೆ ಗೊತ್ತಿರಲಿಲ್ಲ. ನಿಧಾನವಾಗಿ ವಿಚಾರಗಳು ಗೊತ್ತಾಗುತ್ತಿವೆ. ಎಲ್ಲ ವಿಚಾರಗಳನ್ನು ಹೇಳುತ್ತೇನೆ. ನನ್ನಿಂದ ನನ್ನ ಕುಟುಂಬಕ್ಕೆ, ಪಾಲಕರಿಗೆ ತೊಂದರೆಯಾಗಿದೆ'' ಎಂದು ಎಸ್‌ಐಟಿ ಎದುರು ಹೇಳಿದ್ದಾರೆ ಎನ್ನಲಾಗಿದೆ.

''ನನಗೆ ಮತ್ತು ನನ್ನ ಗೆಳೆಯ ಆಕಾಶ್‌ಗೆ ಗೊತ್ತಿಲ್ಲದಂತೆ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ನರೇಶ್‌ಗೌಡ ಮತ್ತು ಶ್ರವಣ್‌ ನಮಗೆ ಗೊತ್ತಿಲ್ಲದಂತೆ ಗೇಮ್‌ ಆಡಿದ್ದಾರೆ. ಇದರಿಂದ ನನಗೆ ಅನ್ಯಾಯವಾಗಿದೆ. ನನ್ನನ್ನು ತಪ್ಪಿತಸ್ಥೆ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನಗಳ ಕುರಿತು ಅರಿವಾಗಿದೆ. ನಾನು ಇನ್ನು ಮುಂದೆ ಸತ್ಯ ಹೇಳಲು ಬಯಸುತ್ತೇನೆ. ಮೂರು ದಿನ ಸಮಯಾವಕಾಶ ನೀಡಿ'' ಎಂದು ಯುವತಿ ಹೇಳಿದ್ದಾರೆಂದು ತಿಳಿದು ಬಂದಿದೆ.

ಕೆಲ ಕಾಲ ಹೇಳಿಕೆ ದಾಖಲಿಸಿಕೊಂಡ ಎಸ್‌ಐಟಿ ಮತ್ತೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

ಸಾಕ್ಷಿ ಒದಗಿಸಲು ಎಸ್‌ಐಟಿ ನೋಟಿಸ್‌

ಕಬ್ಬನ್‌ ಪಾರ್ಕ್ ಠಾಣೆಯಲ್ಲಿನೀವು ನೀಡಿದ ದೂರಿಗೆ ಸಂಬಂಧಿಸಿದಂತೆ ವಿಡಿಯೊ, ಆಡಿಯೊ, ಚಾಟಿಂಗ್‌, ಭಾವಚಿತ್ರ ಸೇರಿದಂತೆ ಯಾವುದೇ ಸಾಕ್ಷ್ಯಾಧಾರಗಳು ಇದ್ದಲ್ಲಿ ಹಾಜರುಪಡಿಸಿ ತನಿಖೆಗೆ ಸಹಕರಿಸಬೇಕು ಎಂದು ತನಿಖಾಧಿಕಾರಿ ಎಂ.ಸಿ ಕವಿತಾ ನೋಟಿಸ್‌ ನೀಡಿದ್ದಾರೆ. ಈ ಸಂಬಂಧ ಮಾಹಿತಿ ನೀಡಲು ಯುವತಿ ಕಾಲಾವಕಾಶ ಕೇಳಿದ್ದಾರೆ ಎಂದು ತಿಳಿದು ಬಂದಿದೆ.

ಯುವತಿ ಉಲ್ಟಾ ಹೊಡೆದಿಲ್ಲ: ವಕೀಲ

ಈ ನಡುವೆ, ''ಯುವತಿ ಆ ರೀತಿ ಯಾವುದೇ ಹೇಳಿಕೆ ನೀಡಿಲ್ಲ. ಅದು ಊಹಾಪೋಹ. ತನ್ನ ಬಳಿ ಇರುವ ಮಾಹಿತಿ ಒದಗಿಸಲು ಕಾಲಾವಕಾಶ ಬೇಕೆಂದು ಕೇಳಿದ್ದಾಳೆ. ವಿಚಾರಣೆಗೆ ಹಾಜರಾಗಿ ಹೋಗಿದ್ದಾರೆ. ಈ ಪ್ರಕರಣದಲ್ಲಿಆಕೆ ಹಿಂದೆ ಸರಿಯಲಾಗದು. ನ್ಯಾಯಾಲಯ, ತನಿಖಾಧಿಕಾರಿ, ಆಯುಕ್ತರಿಗೆ ನೀಡಿದ ದೂರುಗಳಿಗೆ ಸಂಬಂಧಿಸಿದಂತೆ ಆಕೆ ಬದ್ಧರಾಗಿದ್ದಾರೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ'' ಎಂದು ಯುವತಿ ಪರ ವಕೀಲ ಸೂರ್ಯ ಮುಕುಂದರಾಜ್‌ ಹೇಳಿದ್ದಾರೆ.

ಸಿ.ಡಿ. ಪ್ರಕರಣದ ಯುವತಿ ಎಸ್‌ಐಟಿ ಮುಂದೆ ಏನು ಹೇಳಿದ್ದಾಳೆ ಗೊತ್ತಿಲ್ಲ. ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ. ಎಸ್‌ಐಟಿ ತನಿಖೆ ಮಾಡಿ ತೀರ್ಮಾನ ಮಾಡಲಿ.
ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್‌ ಅಧ್ಯಕ್ಷ

ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದ ಯುವತಿ ಏನು ಹೇಳಿದ್ದಾರೆಂದು ಗಮನಿಸುತ್ತಿದ್ದೇನೆ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಪಿಪಿಇ ಕಿಟ್‌ ಹಾಕಿಕೊಂಡು ಯಾರು ಆಸ್ಪತ್ರೆಯಲ್ಲಿಮಲಗಿದ್ದಾರೆ ಎಂಬುದೂ ಗಮನಕ್ಕೆ ಬಂದಿದೆ. ಸಮಯ ಬಂದಾಗ ಪ್ರತಿಕ್ರಿಯಿಸಲಾಗುವುದು
-ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಕಾಂಗ್ರೆಸ್‌ನವರ ಸಿ.ಡಿ. ಷಡ್ಯಂತ್ರ ಫೇಲ್‌ ಆಗಿದೆ. ಅದೇನಿದ್ದರೂ ಈಗ ಹಳೇ ಪಿಚ್ಚರ್‌. ಇಂತಹ 100 ಸಿ.ಡಿ. ಬಂದರೂ ನಾವು ಹೆದರುವುದಿಲ್ಲ.
- ತೇಜಸ್ವಿನಿ ರಮೇಶ್‌, ವಿಪ ಸದಸ್ಯೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ