ಆ್ಯಪ್ನಗರ

ಸಿಎಂ ಪ್ರವಾಸದಿಂದ ದೂರ ಉಳಿದ ಜಾರಕಿಹೊಳಿ ಟೀಂ, ಎಚ್ಚರಿಕೆ ಸಂದೇಶ ರವಾನೆ?

ಡಿಸಿಎಂ ಹುದ್ದೆಯನ್ನು ಜಾರಕಿಹೊಳಿ ಬಯಸಿದ್ದರು. ಈಗಾಗಾಗಲೇ ಮೂವರು ಡಿಸಿಎಂಗಳು ಇರುವುದರಿಂದ ಮತ್ತೊಬ್ಬರಿಗೆ ಡಿಸಿಎಂ ಸ್ಥಾನ ಕೊಡುವುದು ಅನುಮಾನ. ಕಡೆಪಕ್ಷ ಸಚಿವರಾಗಿ ಸಂಪುಟ ಸೇರ್ಪಡೆಯಾಗುವ ನಿರೀಕ್ಷೆಯಿದ್ದರೂ ಅದಕ್ಕೆ ಕಾಲ ಕೂಡಿ ಬಂದಿಲ್ಲ. ಇದು ಜಾರಕಿಹೊಳಿ ಅವರಿಗೆ ಅತೃಪ್ತಿ ತಂದಿದೆ.

Vijaya Karnataka 29 Jan 2020, 8:27 pm

ಬೆಂಗಳೂರು: ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಬೆಳಗಾವಿ ಪ್ರವಾಸದಿಂದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಟೀಮ್‌ ಅಂತರ ಕಾಯ್ದುಕೊಳ್ಳುವ ಮೂಲಕ ಸಂಪುಟ ವಿಸ್ತರಣೆ ವಿಳಂಬಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದೆ.
Vijaya Karnataka Web Ramesh Jarkiholi 01


ಸಿಎಂ ಅವರು ಬುಧವಾರ ಬೆಳಗಾವಿ ಜಿಲ್ಲೆಯಲ್ಲಿಅಧಿಕೃತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಾಕಷ್ಟು ಮುಂಚೆಯೇ ಈ ಪ್ರವಾಸ ನಿಗದಿಯಾಗಿತ್ತು. ಈ ನಡುವೆಯೂ ಜಿಲ್ಲೆಯ ಪ್ರಭಾವಿ ರಾಜಕಾರಣಿ ಹಾಗೂ ಅರ್ಹ ಶಾಸಕ ರಮೇಶ್‌ ಜಾರಕಿಹೊಳಿ ಬೆಂಗಳೂರಿನಲ್ಲೇ ಉಳಿದುಕೊಂಡರು. ಜತೆಗೆ ಜಾರಕಿಹೊಳಿ ತಂಡದ ಅರ್ಹರಾದ ಮಹೇಶ್‌ ಕುಮಠಳ್ಳಿ, ಶ್ರೀಮಂತ ಪಾಟೀಲ್‌ ಅವರೂ ಬೆಳಗಾವಿ ಕಡೆ ಮುಖ ಹಾಕಲಿಲ್ಲ.

ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಸರಕಾರ ಪತನಕ್ಕೆ ರಮೇಶ್‌ ಜಾರಕಿಹೊಳಿ ಅವರ ಬಂಡಾಯವೇ ಮೂಲ ಕಾರಣವಾಗಿತ್ತು. ಜಾರಕಿಹೊಳಿ ನಡೆಸಿದ ಸತತ ಪ್ರಯತ್ನದಿಂದಲೇ 17 ಶಾಸಕರು ದೋಸ್ತಿ ಸರಕಾರದಿಂದ ಹೊರಬಂದಿದ್ದರು. ಈ ಹಿನ್ನೆಲೆಯಲ್ಲಿ ಡಿಸಿಎಂ ಹುದ್ದೆಯನ್ನೂ ಜಾರಕಿಹೊಳಿ ಬಯಸಿದ್ದರು. ಈಗಾಗಾಗಲೇ ಮೂವರು ಡಿಸಿಎಂಗಳು ಇರುವುದರಿಂದ ಮತ್ತೊಬ್ಬರಿಗೆ ಡಿಸಿಎಂ ಸ್ಥಾನ ಕೊಡುವುದು ಅನುಮಾನ. ಕಡೆಪಕ್ಷ ಸಚಿವರಾಗಿ ಸಂಪುಟ ಸೇರ್ಪಡೆಯಾಗುವ ನಿರೀಕ್ಷೆಯಿದ್ದರೂ ಅದಕ್ಕೆ ಕಾಲ ಕೂಡಿ ಬಂದಿಲ್ಲ. ಇದು ಜಾರಕಿಹೊಳಿ ಅವರಿಗೆ ಅತೃಪ್ತಿ ತಂದಿದೆ.

ವಿಶ್ವನಾಥ್ ಅವರ ಹಿರಿತನಕ್ಕಾದರೂ ಅವರಿಗೆ ಸಚಿವ ಸ್ಥಾನ ನೀಡಬೇಕು: ರಮೇಶ್‌ ಜಾರಕಿಹೊಳಿ

ಈ ಕಾರಣದಿಂದ ಕಳೆದ ಕೆಲ ದಿನಗಳಿಂದ ಅವರು ತೆರೆಮರೆಯಲ್ಲೇ ಇದ್ದಾರೆ. ಸಿಎಂ ಅವರನ್ನೂ ಭೇಟಿ ಮಾಡುತ್ತಿಲ್ಲ. ಕುಮಠಳ್ಳಿ ಮತ್ತು ಶ್ರೀಮಂತ ಪಾಟೀಲ್‌ ಅವರಿಗೆ ಸಚಿವ ಸ್ಥಾನ ನೀಡಲು ಹಿಂದೇಟು ಹಾಕುತ್ತಿರುವುದಕ್ಕೂ ಜಾರಕಿಹೊಳಿ ಆಕ್ಷೇಪವಿದೆ. ಹಾಗಾಗಿ ಅವರು ಸಿಎಂ ಅವರ ಬೆಳಗಾವಿ ಪ್ರವಾಸದಿಂದ ದೂರ ಉಳಿಯುವ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ.

ಖಾಸಗಿ ಹೋಟೆಲ್‌ನಲ್ಲಿ ತಂಗಿರುವ ರಮೇಶ್‌ ಜಾರಕಿಹೊಳಿ ಮಾಧ್ಯಮದವರೊಂದಿಗೆ ಮಾತನಾಡುವುದಕ್ಕೂ ನಿರಾಕರಿಸಿದ್ದಾರೆ.

ಒಗ್ಗಟ್ಟಿದೆ!

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕುಮಠಳ್ಳಿ, “ಸಿಎಂ ಜತೆಗೆ ನಮ್ಮ ಸಂಬಂಧ ಉತ್ತಮವಾಗಿಯೇ ಇದೆ. ಬಿಜೆಪಿಯಲ್ಲಿರುವ 117 ಶಾಸಕರೂ ಒಗ್ಗಟ್ಟಿನಿಂದ ಇದ್ದೇವೆ. ನಮ್ಮ ಪ್ರತಿನಿಧಿಯಾಗಿ ಡಿಸಿಎಂ ಸವದಿ ಸಿಎಂ ಅವರೊಂದಿಗೆ ಬೆಳಗಾವಿಯಲ್ಲಿದ್ದಾರೆ. ಸಂಪುಟ ವಿಸ್ತರಣೆಯಾಗಿಲ್ಲ. ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ನೀಡದಿರುವ ಬಗ್ಗೆ ಅಸಮಾಧಾನವಿಲ್ಲ. ಸೋತವರಿಗೆ ಸಚಿವ ಸ್ಥಾನ ನೀಡಬೇಕೋ ಬೇಡವೊ ಎಂಬ ಬಗ್ಗೆ ಬಿಜೆಪಿ ಹೈಕಮಾಂಡ್‌ ನೋಡಿಕೊಳ್ಳುತ್ತದೆ. ಎಚ್‌ ವಿಶ್ವನಾಥ್‌ ಹಿರಿಯರಾಗಿದ್ದು ಅವರ ಬಗ್ಗೆ ಗೌರವವಿದೆ. ಜಂಟಿ ಅಧಿವೇಶನದ ಹೊತ್ತಿಗೆ ಸಚಿವರಾಗಿ ಕಲಾಪದಲ್ಲಿ ಭಾಗಿಯಾಗುವ ವಿಶ್ವಾಸವಿದೆ,” ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ