ಆ್ಯಪ್ನಗರ

ಬಿಜೆಪಿಗೆ ಮತ ಹಾಕಿ ಎಂದ ರಮೇಶ್‌ ಜಾರಕಿಹೊಳಿ; ಬಂಡಾಯದ ಕಹಳೆ, ಮತ್ತೆ ಆಪರೇಷನ್‌ ಕಮಲ ಸಾಧ್ಯತೆ

ಡಿಸೆಂಬರ್‌ನಲ್ಲಿ ನಡೆದ ಸಚಿವ ಸಂಪುಟ ವಿಸ್ತರಣೆ ಬಳಿಕ ನಿಗೂಢ ನಡೆ ಅನುಸರಿಸುತ್ತಿರುವ ರಮೇಶ್‌ ಜಾರಕಿಹೊಳಿ ಕಳೆದ 4 ತಿಂಗಳಿಂದ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು ಕಾಂಗ್ರೆಸ್‌ ತ್ಯಜಿಸುವರು ಎಂಬ ದಟ್ಟ ವದಂತಿಗಳಿವೆ.

Vijaya Karnataka Web 21 Apr 2019, 7:18 am
ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜ್ಯದ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ಪತನಗೊಳ್ಳಲಿದೆಯೆಂದು ಬಿಜೆಪಿ ನಾಯಕರು ನಿತ್ಯ ಬೊಬ್ಬೆ ಹಾಕುತ್ತಿರುವುದರ ನಡುವೆಯೇ ಮಾಜಿ ಸಚಿವ ಹಾಗೂ ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ ಬಂಡಾಯದ ಕಹಳೆ ಮೊಳಗಿಸುವ ಸಾಧ್ಯತೆಗಳು ನಿಚ್ಚಳವಾಗುತ್ತಿವೆ.
Vijaya Karnataka Web ರಮೇಶ್‌ ಜಾರಕಿಹೊಳಿ
ರಮೇಶ್‌ ಜಾರಕಿಹೊಳಿ


ಡಿಸೆಂಬರ್‌ನಲ್ಲಿ ನಡೆದ ಸಚಿವ ಸಂಪುಟ ವಿಸ್ತರಣೆ ಬಳಿಕ ನಿಗೂಢ ನಡೆ ಅನುಸರಿಸುತ್ತಿರುವ ರಮೇಶ್‌ ಜಾರಕಿಹೊಳಿ ಕಳೆದ 4 ತಿಂಗಳಿಂದ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು ಕಾಂಗ್ರೆಸ್‌ ತ್ಯಜಿಸುವರು ಎಂಬ ದಟ್ಟ ವದಂತಿಗಳಿವೆ.

ಇದಕ್ಕೆ ಪೂರಕವೆಂಬಂತೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡುವಂತೆ ಬೆಂಬಲಿಗರಿಗೆ ಸೂಚಿಸಿದ್ದಾರೆಂದು ಹೇಳಲಾಗುತ್ತಿದೆ. ಈ ಬೆಳವಣಿಗೆ ಅವಲೋಕಿಸಿದರೆ ಅವರು ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗಿಟ್ಟಂತೆ ಕಾಣುತ್ತಿದೆ. ಲೋಕಸಮರ ಫಲಿತಾಂಶದ ಬಳಿಕ ರಮೇಶ್‌ ಜಾರಕಿಹೊಳಿ ಸ್ನೇಹಿತರು (ಮಹೇಶ್‌ ಕುಮಠಳ್ಳಿ, ಬಳ್ಳಾರಿಯ ಬಿ.ನಾಗೇಂದ್ರ, ಭೀಮಾನಾಯಕ್‌ ಮತ್ತಿತರರು) ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ. ಒಂದು ವೇಳೆ ಏಳೆಂಟು ಮಂದಿ ಕಾಂಗ್ರೆಸ್‌ ಶಾಸಕರು ರಾಜೀನಾಮೆ ಸಲ್ಲಿಸಿದರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸರಕಾರ ಇಕ್ಕಟ್ಟಿಗೆ ಸಿಲುಕಿಕೊಳ್ಳಲಿದೆ.

ಈ ಮಧ್ಯೆ ಬಿಜೆಪಿಯು 18 ರಿಂದ 20 ಕ್ಷೇತ್ರಗಳಲ್ಲಿ ಜಯಗಳಿಸಿದರೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನಿಂದ 15 ಮಂದಿ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ಈಗಾಗಲೇ ಕೆಲವು ಶಾಸಕರು ಪರೋಕ್ಷವಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ನೆರವಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಫಲಿತಾಂಶದ ಬಳಿಕ 'ಆಪರೇಷನ್‌ ಕಮಲ' ಮತ್ತೆ ಚಾಲನೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ರಮೇಶ್‌ ಜಾರಕಿಹೊಳಿ ಅಲ್ಲದೆ ಇನ್ನೂ ಇಬ್ಬರು ಹಿರಿಯ ಶಾಸಕರ ನೇತೃತ್ವದಲ್ಲಿ ಎರಡು ತಂಡಗಳು ಬಿಜೆಪಿ ಸೇರಲು ಉತ್ಸುಕವಾಗಿವೆ ಎನ್ನಲಾಗಿದೆ. ಈ ಮಧ್ಯೆ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಈ ಚುನಾವಣೆಯ ಫಲಿತಾಂಶದಲ್ಲಿ ತಮ್ಮ ಲೆಕ್ಕಾಚಾರ ತಲೆಕೆಳಗಾದರೆ ಯಾವುದೇ ಕಾರಣಕ್ಕೂ ಕುಮಾರಸ್ವಾಮಿ ಸರಕಾರವನ್ನು ಕಾಯುವ ಕೆಲಸ ಮಾಡುವುದಿಲ್ಲವೆಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಕುಮಾರಸ್ವಾಮಿ ಸರಕಾರ ಪತನಕ್ಕೆ ದಿನಗಣಗೆ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.

ನೋಟಿಸ್‌ ಜಾರಿ ಸಾಧ್ಯತೆ

ಗೋಕಾಕ್‌ನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಚುನಾವಣೆ ಪ್ರಚಾರ ಸಭೆಗೆ ಗೈರು ಹಾಜರಾಗಿದ್ದ ರಮೇಶ್‌ ಜಾರಕಿಹೊಳಿಗೆ ಕಾರಣ ಕೇಳಿ ಷೋಕಾಸ್‌ ನೋಟಿಸ್‌ ನೀಡಲು ಕೆಪಿಸಿಸಿ ನಿರ್ಧರಿಸಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಸಭೆಗೆ ರಮೇಶ್‌ ಜಾರಕಿಹೊಳಿ ಗೈರು ಹಾಜರಾಗಿದ್ದರು. ಸಹೋದರ ಹಾಗೂ ಅರಣ್ಯಸಚಿವ ಸತೀಶ್‌ ಜಾರಕಿಹೊಳಿ ಅವರು ಮತ್ತೊಬ್ಬ ಸಹೋದರ ಲಖನ್‌ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ನಡೆಸಿದ್ದರು. ಇದುವರೆಗೂ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ಮಾಡದೆ ತಟಸ್ಥವಾಗಿ ಉಳಿದಿರುವ ರಮೇಶ್‌ ಜಾರಕಿಹೊಳಿ ನಡೆ ಬಗ್ಗೆ ಪಕ್ಷದ ವರಿಷ್ಠರು ಸೇರಿದಂತೆ ರಾಜ್ಯ ಕಾಂಗ್ರೆಸ್‌ ನಾಯಕರು ಅಸಮಾಧಾನಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ವತಃ ಸಿದ್ದರಾಮಯ್ಯ ಹಾಗೂ ಸತೀಶ್‌ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮೇಲೆ ಒತ್ತಡ ತಂದು ನೋಟಿಸ್‌ ಜಾರಿಗೊಳಿಸುವಂತೆ ಸೂಚಿಸಿದ್ದಾರೆ. ಒಂದೆರಡು ದಿನಗಳಲ್ಲಿಯೇ ನೋಟಿಸ್‌ ಜಾರಿಯಾಗುವ ಸಾಧ್ಯತೆಗಳಿದ್ದು ನೋಟಿಸ್‌ ತಲುಪಿದ 7 ದಿನಗಳ ಒಳಗೆ ಸಮರ್ಪಕ ಉತ್ತರ ಕೊಡದೇ ಇದ್ದರೆ ಅವರನ್ನು ಕಾಂಗ್ರೆಸ್‌ ಪಕ್ಷದಿಂದ ಅಮಾನತುಗೊಳಿಸುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ