ಆ್ಯಪ್ನಗರ

ರಣಂ ಚಿತ್ರ ಶೂಟಿಂಗ್‌ ವೇಳೆ ಸ್ಫೋಟ :ಇಬ್ಬರು ಸಾವು

ವಿ.ಸಮುದ್ರ ನಿರ್ದೇಶನದ 'ರಣಂ' ಚಲನಚಿತ್ರದ ಆ್ಯಕ್ಷನ್‌ ದೃಶ್ಯ ಚಿತ್ರೀಕರಣದ ವೇಳೆ ಕಂಪ್ರೆಸ್ಸಡ್‌ ಸಿಲಿಂಡರ್‌ ಸ್ಫೋಟಗೊಂಡು, ಶೂಟಿಂಗ್‌ ವೀಕ್ಷಿಸುತ್ತಿದ್ದ ತಾಯಿ-ಮಗಳು ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ಸಂಜೆ ಬಾಗಲೂರಿನಲ್ಲಿ ನಡೆದಿದೆ.

Vijaya Karnataka Web 30 Mar 2019, 5:00 am
ಬೆಂಗಳೂರು: ವಿ.ಸಮುದ್ರ ನಿರ್ದೇಶನದ 'ರಣಂ' ಚಲನಚಿತ್ರದ ಆ್ಯಕ್ಷನ್‌ ದೃಶ್ಯ ಚಿತ್ರೀಕರಣದ ವೇಳೆ ಕಂಪ್ರೆಸ್ಸಡ್‌ ಸಿಲಿಂಡರ್‌ ಸ್ಫೋಟಗೊಂಡು, ಶೂಟಿಂಗ್‌ ವೀಕ್ಷಿಸುತ್ತಿದ್ದ ತಾಯಿ-ಮಗಳು ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ಸಂಜೆ ಬಾಗಲೂರಿನಲ್ಲಿ ನಡೆದಿದೆ.
Vijaya Karnataka Web BNG-2903-2-2-CAR


ಬಾಗಲೂರು ನಿವಾಸಿಗಳಾದ ಸಮೀರಾ ಬಾನು ಹಾಗೂ ಇವರ ಪುತ್ರಿ ಅಹಿರಾ ಮೃತರು. ಮತ್ತೊಬ್ಬ ಮಗಳು ಜೈನಾಬಗೆ ಗಂಭೀರ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟದ ಬಳಿಕ ಚಿತ್ರತಂಡ ಸ್ಥಳದಿಂದ ಕಾಲ್ಕಿತ್ತಿದೆ. ಈ ಕುರಿತು ಮಾಹಿತಿಗಾಗಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟ ಚೇತನ್‌ ಅವರನ್ನು ಬಾಗಲೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳೆದ ತಿಂಗಳು ಶೂಟಿಂಗ್‌ ಆರಂಭವಾಗಿರುವ ರಣಂ ಸಿನಿಮಾದಲ್ಲಿ ನಟ ಚಿರಂಜೀವಿ ಸರ್ಜಾ ಹಾಗೂ ಚೇತನ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಮಿಳು ನಟ ಶರತ್‌ ಕುಮಾರ್‌ ಪುತ್ರಿ ವಿಜಯಲಕ್ಷ್ಮೇ ಅವರು ನಾಯಕ ನಟಿಯಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಬಾಗಲೂರಿನ ಕೈಗಾರಿಕಾ ಪ್ರದೇಶದಲ್ಲಿ ಶೂಟಿಂಗ್‌ ನಡೆಯುತ್ತಿತ್ತು. ದಕ್ಷಿಣ ಭಾರತದ ಪ್ರಮುಖ ಆ್ಯಕ್ಷನ್‌ ನಿರ್ದೇಶಕ ವಿಜಯನ್‌ ಅವರ ಮಾರ್ಗದರ್ಶನದಲ್ಲಿ ಒಂದರ ಮೇಲೆ ಒಂದು ಕಾರುಗಳನ್ನು ಇಟ್ಟು ಸ್ಫೋಟಿಸುವ ದೃಶ್ಯ ಚಿತ್ರೀಕರಿಸುವಾಗ ದುರ್ಘಟನೆ ಸಂಭವಿಸಿದೆ.

ಶೂಟಿಂಗ್‌ ನೋಡಲು ಕಾರು ನಿಲ್ಲಿಸಿದರು

ಚಿತ್ರೀಕರಣಕ್ಕಾಗಿ ಮಧ್ಯಾಹ್ನ 2.30ರಿಂದಲೇ ಸ್ಥಳದಲ್ಲಿ ರಸ್ತೆ ಬ್ಲಾಕ್‌ ಮಾಡಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಕಾರಿನಲ್ಲಿ ಬಾಗಲೂರಿನಿಂದ ಸೂಲಿಬೆಲೆಗೆ ಪ್ರಯಾಣಿಸುತ್ತಿದ್ದ ಸಮೀರಾ ಬಾನು ಅವರ ಪತಿ ಮತ್ತು ಇಬ್ಬರು ಮಕ್ಕಳು ಸಂಚಾರ ಸ್ಥಗಿತವಾಗಿದ್ದರಿಂದ ಕಾರನ್ನು ನಿಲ್ಲಿಸಿ ಶೂಟಿಂಗ್‌ ವೀಕ್ಷಿಸುತ್ತಿದ್ದರು. ಸ್ಥಳದಿಂದ ಸುಮಾರು 50 ಅಡಿ ದೂರದಲ್ಲಿ ನಿಂತಿದ್ದ ಸಮೀರಾ ಬಾನು ಮತ್ತು ಅವರ ಇಬ್ಬರು ಮಕ್ಕಳಿಗೆ ಕಂಪ್ರೆಸ್ಸಡ್‌ ಸಿಲಿಂಡರ್‌ ಸ್ಫೋಟದಿಂದ ಸಿಡಿದ ಭಾಗಗಳು ಬಡಿದಿವೆ. ಸ್ಫೋಟದ ರಭಸಕ್ಕೆ ಸಮೀರಾ ಬಾನು ಹಾಗೂ ಅಹಿರಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರ ದೇಹಗಳು ಪ್ರತ್ಯೇಕಗೊಂಡಿದ್ದವು. ಜೊತೆಯಲ್ಲೇ ನಿಂತಿದ್ದ ಜೈನಬಾಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮೀರಾ ಬಾನು ಪತಿ ಅಪಾಯದಿಂದ ಪಾರಾಗಿದ್ದಾರೆ.

ತುಂಬಾ ನೋವಾಗಿದೆ: ಚೇತನ್‌

''ನಿನ್ನೆ ಶೂಟಿಂಗ್‌ ಸ್ಥಳದಲ್ಲಿ ಓಪನಿಂಗ್‌ ಫೈಟ್‌ ದೃಶ್ಯಗಳು ಇದ್ದವು. ಎಲ್ಲವೂ ಚೆನ್ನಾಗಿ ನಡೆಯಿತು. ಆ ಸ್ಥಳದಲ್ಲಿ ಒಂದು ಕಾರ್‌ ಬ್ಲಾಸ್ಟ್‌ ಮಾಡುತ್ತಾರೆ ಎಂಬ ಮಾಹಿತಿ ಇತ್ತು. ಗುರುವಾರ ಶೂಟಿಂಗ್‌ ಮುಗಿಸಿದ್ದೆ. ಆದರೆ, ಶುಕ್ರವಾರ ನನ್ನ ಪಾತ್ರದ ಶೂಟಿಂಗ್‌ ಇಲ್ಲದ ಕಾರಣ ಅಲ್ಲಿ ಇರಲಿಲ್ಲ. ದುರಂತದಿಂದ ತುಂಬಾ ನೋವಾಗಿದೆ. ದುರ್ಘಟನೆ ಏಕೆ ಮತ್ತು ಹೇಗೆ ಆಯಿತು ಎಂಬುದು ತಿಳಿಯಬೇಕಿದೆ,'' ಎಂದು ನಟ ಚೇತನ್‌ ಪ್ರತಿಕ್ರಿಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ