*ಪರಿಶೀಲನೆ ಬಳಿಕ ಫಲಾನುಭವಿಗಳ ಮನೆಗೆ ಕಾರ್ಡ್
*ಕೇಂದ್ರದ ನೇರ ಹಣ ವರ್ಗಾವಣೆಗೆ ವಿರೋಧ
* ಶಾದಿ ಭಾಗ್ಯ ಯೋಜನೆಗೆ ಮುಂದಾದ ಕೇಂದ್ರ
*ರಾಜ್ಯದ ಅನಿಲ ಭಾಗ್ಯ ಯೋಜನೆ ಶೀಘ್ರ ಜಾರಿ
ಬೆಂಗಳೂರು: ಹೊಸ ಪಡಿತರ ಚೀಟಿಗಳಿಗೆ ರಾಜ್ಯದಲ್ಲಿ ಅಂದಾಜು 16 ಲಕ್ಷ ಅರ್ಜಿ ಸ್ವೀಕರಿಸಲಾಗಿದ್ದು ಈ ತಿಂಗಳ 15 ರೊಳಗೆ ಪರಿಶೀಲನೆ ನಡೆಸಿದ ಬಳಿಕ ಹೊಸ ಪಡಿತರ ಚೀಟಿಗಳನ್ನು ಅಂಚೆ ಮೂಲಕ ಸಂಬಂಧಪಟ್ಟವರಿಗೆ ಕಳುಹಿಸಿಕೊಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದರು.
''ಪ್ರತಿ ಗ್ರಾಮ ಪಂಚಾಯಿತಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷ ಕರ ನೇತೃತ್ವದಲ್ಲಿ ಹೊಸ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. ಈಗಾಗಲೇ 2.50 ಲಕ್ಷ ಅರ್ಜಿಗಳ ಪರಿಶೀಲನಾ ಕಾರ್ಯ ಪೂರ್ಣಗೊಂಡಿದೆ. ನಕಲಿ ಪಡಿತರ ಚೀಟಿಗಳ ಹಾವಳಿ ತಪ್ಪಿಸಲು ಆನ್ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಅರ್ಹ ಅರ್ಜಿದಾರರಿಗೆ ಕೆಲವೇ ದಿನಗಳಲ್ಲಿ ಕಾರ್ಡ್ಗಳನ್ನು ರವಾನಿಸಲಾಗುವುದು,'' ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
''ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್ದಾರರಿಗೆ ನೇರ ಹಣ ವರ್ಗಾವಣೆ ಮಾಡುವುದಕ್ಕೆ ನಮ್ಮ ವಿರೋಧವಿದೆ. ಬಿಪಿಎಲ್ ಕಾರ್ಡ್ದಾರರು ವಸ್ತುಗಳನ್ನು ಖರೀದಿಸಿದ ಅಂಗಡಿಗೆ ನೇರವಾಗಿ ಹಣ ನೀಡುವ ಕುರಿತು ಯೋಜನೆಯನ್ನು ರಾಜ್ಯ ಸರಕಾರ ರೂಪಿಸಿದೆ. ಹೀಗಾಗಿ ಕೇಂದ್ರದ ಯೋಜನೆ ನಾವು ಒಪ್ಪುವುದಿಲ್ಲ. ಕೇಂದ್ರ ಸರ್ಕಾರ ಒಂದೂ ಸಿಲಿಂಡರ್ ಹೆಚ್ಚಿಗೆ ಮಾಡಲಿಲ್ಲ. ಹಿಂದೆ ಯುಪಿಎ ಸರ್ಕಾರವಿದ್ದಾಗ ಇದರ ವಿರುದ್ಧ ಎಲ್ಲೆಡೆ ಪ್ರತಿಭಟನೆ ನಡೆಸಿದ್ದರು. ರಾಜ್ಯದಲ್ಲಿ ಆದಷ್ಟು ಬೇಗ ಅನಿಲಭಾಗ್ಯ ಯೋಜನೆಗೆ ಚಾಲನೆ ನೀಡಲಾಗುವುದು,'' ಎಂದು ತಿಳಿಸಿದರು.
''ಬಿಜೆಪಿಯವರು ಈ ಹಿಂದೆ ರಾಜ್ಯಸರ್ಕಾರದ ಶಾದಿಭಾಗ್ಯ ಯೋಜನೆಯನ್ನು ವಿರೋಧಿಸಿದ್ದರು. ಈಗ ಕೇಂದ್ರ ಸರ್ಕಾರವೇ ಈ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಕೇಂದ್ರದ ಈ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆಯೇ ಹೊರತು ವಿರೋಧಿಸುವುದಿಲ್ಲ. ಆದರೆ ಬಿಜೆಪಿಯವರು ವಿರೋಧಿಸಬೇಕೆಂಬ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಾರೆ. ನಿಜಕ್ಕೂ ರಾಜ್ಯ ಸರ್ಕಾರದ ಯೋಜನೆಗಳು ಕೇಂದ್ರಕ್ಕೆ ಮಾದರಿಯಾಗಿವೆ,'' ಎಂದು ಹೇಳಿಕೊಂಡರು.
ಬೆಂಗಳೂರಿನಲ್ಲಿ 1.50 ಲಕ್ಷ ಹೊಸ ಅರ್ಜಿಗಳು
ಬೆಂಗಳೂರು ನಗರದಲ್ಲಿಯೂ ಹೊಸ ಪಡಿತರ ಚೀಟಿಗಳಿಗೆ 1.50 ಲಕ್ಷ ಅರ್ಜಿಗಳು ಬಂದಿದ್ದು ಅವುಗಳ ಪರಿಶೀಲನೆಗೆ ಸಿಬ್ಬಂದಿ ಕೊರತೆ ಇತ್ತು.ಹೆಚ್ಚುವರಿ ಸಿಬ್ಬಂದಿ ನಿಯುಕ್ತಿಗೊಳಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು ,''1.50 ಲಕ್ಷ ಅರ್ಜಿಗಳ ಪರಿಶೀಲನೆಗೆ ಕೇವಲ 17 ಸಿಬ್ಬಂದಿ ಮಾತ್ರ ಇದ್ದರು. ರಾಜ್ಯದ ಬೇರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷ ಕರು ಪರಿಶೀಲಿಸುತ್ತಾರೆ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಅರ್ಜಿಗಳು ಬಂದಿರುವುದರಿಂದ ಈ ಕಡಿಮೆ ಸಿಬ್ಬಂದಿಯಿಂದ ಪರಿಶೀಲನೆ ಆಗುತ್ತಿರಲಿಲ್ಲ ,''ಎಂದು ತಿಳಿಸಿದರು.
''ಹೊಸ ಅರ್ಜಿಗಳ ಪರಿಶೀಲನೆಗೆ ಬಿಬಿಎಂಪಿ ತೆರಿಗೆ ಹಾಗೂ ಇತರೆ ವಿಭಾಗದ ಸಿಬ್ಬಂದಿ ನಿಯೋಜಿಸಲಾಗುವುದು. ಇನ್ನು ಮುಂದೆ ತ್ವರಿತಗತಿಯಲ್ಲಿ ಈ ಕಾರ್ಯ ನಡೆದು ಆದಷ್ಟು ಬೇಗ ಅರ್ಜಿಗಳ ಪರಿಶೀಲನೆ ನಡೆದು ಹೊಸ ರೇಷನ್ ಕಾರ್ಡುಗಳ ವಿತರಣೆ ಕಾರ್ಯ ನಡೆಯಲಿದೆ,'' ಎಂದು ಜಾರ್ಜ್ ತಿಳಿಸಿದರು.