ಆ್ಯಪ್ನಗರ

ಸಚಿನ್‌ ಬೆನ್ನು ನೋವಿನ ಭವಿಷ್ಯ ನುಡಿದಿದ್ದ ಸಂಶೋಧಕ ಇನ್ನಿಲ್ಲ

ದಕ್ಷಿಣ ಏಷ್ಯಾದಲ್ಲಿ 2004ನೇ ಡಿಸೆಂಬರ್ 26ರಂದು ಅಪ್ಪಳಿಸಿದ ಸುನಾಮಿ ಬಗ್ಗೆ ಎರಡು ವಾರಗಳ ಮುನ್ನವೇ ಎಚ್ಚರಿಕೆ ನೀಡಿದ್ದ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಭೇಟಿ ಮಾಡದೆಯೂ ಅವರ ಸೊಂಟ ನೋವು ಕಾಣಿಸಿಕೊಳ್ಳುವ ಬಗ್ಗೆ 3 ತಿಂಗಳು ಮೊದಲೇ ಸಂಶೋಧನಾ ಲೇಖನ ಬರೆದಿದ್ದ ಖ್ಯಾತ ಸಂಶೋಧಕ ಡಾ. ಅರುಣಾಚಲಂ ಕುಮಾರ್ ತಮ್ಮ ಕಡೇ ದಿನಗಳನ್ನು ಭದ್ರಾವತಿಯ ಕುಗ್ರಾಮವೊಂದರಲ್ಲಿ ಕಳೆದರು ಎಂಬುದು ಹೆಚ್ಚಿನ ಜನರಿಗೆ ಗೊತ್ತೇ ಇಲ್ಲ.

Vijaya Karnataka 8 Dec 2017, 3:39 pm
ಶಿವಮೊಗ್ಗ: ದಕ್ಷಿಣ ಏಷ್ಯಾದಲ್ಲಿ 2004ನೇ ಡಿಸೆಂಬರ್ 26ರಂದು ಅಪ್ಪಳಿಸಿದ ಸುನಾಮಿ ಬಗ್ಗೆ ಎರಡು ವಾರಗಳ ಮುನ್ನವೇ ಎಚ್ಚರಿಕೆ ನೀಡಿದ್ದ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಭೇಟಿ ಮಾಡದೆಯೂ ಅವರ ಸೊಂಟ ನೋವು ಕಾಣಿಸಿಕೊಳ್ಳುವ ಬಗ್ಗೆ 3 ತಿಂಗಳು ಮೊದಲೇ ಸಂಶೋಧನಾ ಲೇಖನ ಬರೆದಿದ್ದ ಖ್ಯಾತ ಸಂಶೋಧಕ ಡಾ. ಅರುಣಾಚಲಂ ಕುಮಾರ್ ತಮ್ಮ ಕಡೇ ದಿನಗಳನ್ನು ಭದ್ರಾವತಿಯ ಕುಗ್ರಾಮವೊಂದರಲ್ಲಿ ಕಳೆದರು ಎಂಬುದು ಹೆಚ್ಚಿನ ಜನರಿಗೆ ಗೊತ್ತೇ ಇಲ್ಲ.
Vijaya Karnataka Web rationalist dr arunachalam kumar passes away
ಸಚಿನ್‌ ಬೆನ್ನು ನೋವಿನ ಭವಿಷ್ಯ ನುಡಿದಿದ್ದ ಸಂಶೋಧಕ ಇನ್ನಿಲ್ಲ


ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳ ಪದವಿ, ಸಂಶೋಧನೆಗೆ ಮಾರ್ಗದರ್ಶಕರಾಗಿ ವೈದ್ಯಕೀಯ ಮತ್ತು ಸಂಶೋಧನಾ ವಲಯದಲ್ಲಿ ಬಹಳ ಜನಪ್ರಿಯರಾಗಿದ್ದ, ಅತಿಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ ಲಿಮ್ಕಾ ದಾಖಲೆಗೆ ಪಾತ್ರರಾದ ಡಾ. ಅರುಣಾಚಲಂ(67) ಅವರು ಭದ್ರಾವತಿ ತಾಲೂಕು ನಂಜಾಪುರದಲ್ಲಿ ಗುರುವಾರ ನಿಧನ ಹೊಂದಿದರು.

ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರನ್ನು ತಮ್ಮ ತಂದೆಯಂತೆ ಪ್ರೀತಿಸುತ್ತಿದ್ದ ರವಿ ಮತ್ತು ಲಕ್ಷ್ಮಿ ದಂಪತಿ ಮಂಗಳೂರಿನಿಂದ ತಮ್ಮೂರು ನಂಜಾಪುರಕ್ಕೆ ಕರೆತಂದಿದ್ದರು. ನಂಜಾಪುರದಲ್ಲಿ 6 ತಿಂಗಳ ಕಾಲ ವಾಸವಾಗಿದ್ದ ಅವರು ಮೃತಪಟ್ಟಾಗಲೆ ಗ್ರಾಮಸ್ಥರಿಗೆ ಗೊತ್ತಾಗಿದ್ದು ಅವರೊಬ್ಬ ದೇಶದ ಪ್ರತಿಷ್ಠಿತ ಸಂಶೋಧಕರು ಎಂಬುದು.

ಕ್ರಿಕೆಟ್ ಬಗ್ಗೆ ತುಂಬ ಆಸಕ್ತಿ ಹೊಂದಿದ್ದ ಅರುಣಾಚಲಂ ಅವರು ಸಚಿನ್ ತೆಂಡೂಲ್ಕರ್ ಆಟದ ವೈಖರಿಯನ್ನು ಟಿವಿಯಲ್ಲೇ ನೋಡಿ ತೆಂಡೂಲ್ಕರ್‌ಗೆ ಸ್ವಲ್ಪ ದಿನಗಳಲ್ಲೆ ಬೆನ್ನು ನೋವು ಕಾಣಿಸಿಕೊಳ್ಳಲಿದೆ ಎಂದು ಸಂಶೋಧನಾ ಲೇಖನ ಬರೆದಿದ್ದರು. ಅಚ್ಚರಿ ಎಂದರೆ ಅದಾಗಿ ಮೂರು ತಿಂಗಳಲ್ಲಿ ಸಚಿನ್ ಬೆನ್ನು ನೋವಿಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಇದು ಸಚಿನ್ ಅವರಲ್ಲಿ ತೀವ್ರ ಅಚ್ಚರಿಯನ್ನುಂಟು ಮಾಡಿತ್ತು.

ಇವರ ಬಗ್ಗೆ ತೀವ್ರ ಆಸಕ್ತಿ ಕೆರಳಿಸುವ ಮತ್ತೊಂದು ಸಂಗತಿ ಎಂದರೆ 2004ನೇ ಡಿಸೆಂಬರ್ 26ರಂದು ದಕ್ಷಿಣ ಏಷ್ಯಾದಲ್ಲಿ ಪ್ರಬಲ ಸುನಾಮಿ ಸಂಭವಿಸುವ ಬಗ್ಗೆ ಎರಡು ವಾರ ಮುನ್ನವೆ ಸಂಶೋಧನಾ ಲೇಖನ ಪ್ರಕಟಿಸಿದ್ದರಂತೆ. ಇಂಡೋನೇಷ್ಯಾದ ಕಡಲಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಲಿದ್ದು ಹಲವು ರಾಷ್ಟ್ರಗಳಲ್ಲಿ ಅಲ್ಲದೆ ದಕ್ಷಿಣಭಾರತದಲ್ಲೂ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಲಿದೆ ಎಂದು ಹೇಳಿದ್ದರಂತೆ. ಲೇಖನವನ್ನು ಕಡೆಗಣಿಸಿದ್ದ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಅದರ ಪರಿಣಾಮವೇನೆಂಬುದು ಸುನಾಮಿ ಅಪ್ಪಳಿಸಿದ ಬಳಿಕ ಗೊತ್ತಾಗಿತ್ತು.

ಅರುಣಾಚಲಂ ಅವರ ಅಂತಿಮ ಇಚ್ಚೆಯಂತೆ ಅವರ ದೇಹವನ್ನು ಕೆಎಂಸಿ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗುತ್ತಿದೆ. ಮೃತದೇಹವನ್ನು ಶುಕ್ರವಾರ ಬೆಳಗ್ಗೆ ಮಂಗಳೂರಿಗೆ ತೆಗೆದುಕೊಂಡು ಹೋಗಲಾಗಿದೆ.

ಪರಿಚಯ: 1949ನೇ ಏಪ್ರಿಲ್ 27ರಂದು ಜನಿಸಿದ ಅರುಣಾಚಲಂ ಅವರು ಮೂಲತಃ ಚೆನ್ನೈನವರಾದರೂ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಎಂಎಸ್ ಅಂಗರಚನಾಶಾಸ್ತ್ರ (ಅನಾಟಮಿ) ಪದವಿ ಪಡೆದಿದ್ದರು. ಕಸ್ತೂರಬಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅನಾಡಮಿ ವಿಭಾಗದ ಮುಖ್ಯಸ್ಥರಾಗಿದ್ದರು. ಅಷ್ಟೇ ಅಲ್ಲದೆ ಮಾಹೆ ವಿವಿ, ಮಂಗಳೂರು ವಿವಿ, ಕುವೈತ್‌ನ ಕುವೈತ್ ವಿವಿ ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಪ್ರಖ್ಯಾತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ವಿಜ್ಞಾನ ಮತ್ತು ವೈದ್ಯಕೀಯಕ್ಕೆ ಸಂಬಂಧಿಸಿದಂತೆ 150ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ 1994ರಲ್ಲಿ ದೇಶದಲ್ಲೇ ಅತಿಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ ಲಿಮ್ಕಾ ದಾಖಲೆಗೆ ಪಾತ್ರರಾಗಿದ್ದರು.

1984ರಲ್ಲಿ ವೈದ್ಯಕೀಯ ಸಂಶೋಧನೆಗೆ ಡಾ. ಟಿ.ಎಂ.ಪೈ ಚಿನ್ನದ ಪದಕ ಪಡೆದಿದ್ದ ಅವರು 2002ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ 16ಕ್ಕೂ ಹೆಚ್ಚು ಪ್ರಶಸ್ತಿ ಮತ್ತು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಕ್ರಾಸ್ ಡಿಕೋಡರ್, ಫೂಟ್‌ಪ್ರಿಂಟ್ಸ್, ಅಮೆರಿಕಾನ, ಎಬಿಸಿ ಹ್ಯಾಂಡ್‌ಬುಕ್ ಆಫ್ ಹ್ಯೂಮನ್ ಎಂಬ್ರಿಯಾಲಜಿ ಪುಸ್ತಕಗಳನ್ನು ಪ್ರಕಟಸಿದ್ದಾರೆ. ಅಷ್ಟೇ ಅಲ್ಲದೆ ದೇಶ ವಿದೇಶದ ಪತ್ರಿಕೆಗಳಲ್ಲಿ 130ಕ್ಕೂ ಹೆಚ್ಚು ಮತ್ತು ವೆಬ್‌ಸೈಟ್‌ಗಳಲ್ಲಿ 450ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಪ್ರಕಟವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ