ಬೆಂಗಳೂರು: ನ್ಯಾಯಾಲಯದ ಹೊರಗೆ ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ಬೆಂಬಲ ವ್ಯಕ್ತಪಡಿಸಿ ಉತ್ತರ ಪ್ರದೇಶದ ಸುನ್ನಿ ವಕ್ಫ್ ಮಂಡಳಿ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸೇರಿದಂತೆ ಸುಮಾರು 16 ಮುಸ್ಲಿಂ ಸಂಘಟನೆಗಳ ಮುಖಂಡರು ಗುರುವಾರ ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥಅವರೊಂದಿಗೆ ಸಮಾಲೋಚನೆ ನಡೆಸಿದರು.
ಆರ್ಟ್ ಆಫ್ ಲಿವಿಂಗ್ಗೆ ಭೇಟಿ ನೀಡಿದ್ದ ಹಲವು ರಾಜ್ಯಗಳ ನಾನಾ ಸಂಘಟನೆಗಳ ನಾಯಕರು ಕೋರ್ಟ್ನ ಹೊರಗೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರು ಮಸೀದಿಯನ್ನು ಬೇರೊಂದು ಸ್ಥಳಕ್ಕೆ ವರ್ಗಾವಣೆ ಮಾಡುವ ಪ್ರಸ್ತಾಪಕ್ಕೂ ಸಹಮತ ಸೂಚಿಸಿದ್ದಾರೆ. ಸಭೆಯಲ್ಲಿ ಹಲವು ಪ್ರತಿನಿಧಿಗಳು ಹಾಗೂ ವಿದ್ವಾಂಸರು ಭಾಗವಹಿಸಿದ್ದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಅಯೋಧ್ಯೆಯಲ್ಲಿ ಸದ್ಯದಲ್ಲಿಯೇ ಬೃಹತ್ ಸಭೆ ನಡೆಯಲಿದೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಗುರುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್ಬಿ) ಕಾರ್ಯಕಾರಿ ಸದಸ್ಯ ಮೌಲಾನ ಸೈಯದ್ ಸಲ್ಮಾನ್ ಹುಸೇನ್ ನದ್ವಿ, ಉತ್ತರಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯ ಅಧ್ಯಕ್ಷ ಝಾಫರ್ ಫಾರೂಕಿ,ಲಖನೌದ ತೆಲೈ ವಾಲಿ ಮಸೀದಿಯ ಮೌಲಾನ ವಾಸಿಫ್ ಹಸನ್, ನಿವೃತ್ತ ಐಎಎಸ್ ಅಧಿಕಾರಿ ಅನೀಸ್ ಅನ್ಸಾರಿ, ಸಿಒಆರ್ಡಿ ನಿರ್ದೇಶಕ ಅತರ್ ಹುಸೇನ್ ಸಿದ್ದಿಕ್ಕಿ, ಉದ್ಯಮಿ ಎ.ಆರ್.ರೆಹಮಾನ್, ವರ್ಲ್ಡ್ ಇಸ್ಲಾಮಿಕ್ ಫೋರಂನ ಮೌಲನಾ ಇಸಾ ಮನ್ಸೂರಿ, ಭಾರತೀಯ ಹಜ್ ಸಮಿತಿಯ ಎ.ಅಬೂಬಕರ್, ಬೆಂಗಳೂರಿನ ವಕೀಲ ಎಂ.ಜಿ.ಎಸ್.ಕಮಲ್ ಮತ್ತು ಮೌಸಾ ಕೈಸರ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.