ಆ್ಯಪ್ನಗರ

ಉಮೇಶ್ ಜಾಧವ್‌ ರಾಜೀನಾಮೆ: ಕುತೂಹಲ ಕೆರಳಿಸಿದ ಸ್ಪೀಕರ್‌ ನಡೆ

ಸ್ಪೀಕರ್‌ ರಮೇಶ್‌ ಕುಮಾರ್‌ ಬುಧವಾರ ಬೆಂಗಳೂರಿಗೆ ಆಗಮಿಸಿದರೂ ರಾಜೀನಾಮೆ ವಿಚಾರದಲ್ಲಿ ನಿರ್ಧಾರ ತೆಗೆದುಕೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಚರ್ಚೆಯನ್ನೂ ನಡೆಸಿಲ್ಲ. ಜತೆಗೆ ಶಾಸಕರ ಅನರ್ಹತೆ ವಿಚಾರದ ಬಗ್ಗೆಯೂ ಪರಾಮರ್ಶೆ ನಡೆಸಿಲ್ಲ.

Vijaya Karnataka 7 Mar 2019, 5:30 am
ಬೆಂಗಳೂರು: ಶಾಸಕ ಸ್ಥಾನಕ್ಕೆ ಡಾ.ಉಮೇಶ್‌ ಜಾಧವ್‌ ಎರಡು ದಿನದ ಹಿಂದೆ ನೀಡಿರುವ ರಾಜೀನಾಮೆ ಸ್ವೀಕರಿಸುವ ವಿಚಾರದಲ್ಲಿ ಸ್ಪೀಕರ್‌ ರಮೇಶ್‌ ಕುಮಾರ್‌ ಮೌನಕ್ಕೆ ಶರಣಾಗಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ.
Vijaya Karnataka Web Umesh


ಸ್ಪೀಕರ್‌ ರಮೇಶ್‌ ಕುಮಾರ್‌ ಬುಧವಾರ ಬೆಂಗಳೂರಿಗೆ ಆಗಮಿಸಿದರೂ ರಾಜೀನಾಮೆ ವಿಚಾರದಲ್ಲಿ ನಿರ್ಧಾರ ತೆಗೆದುಕೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಚರ್ಚೆಯನ್ನೂ ನಡೆಸಿಲ್ಲ. ಜತೆಗೆ ಶಾಸಕರ ಅನರ್ಹತೆ ವಿಚಾರದ ಬಗ್ಗೆಯೂ ಪರಾಮರ್ಶೆ ನಡೆಸಿಲ್ಲ. ಹೀಗಾಗಿ ಪ್ರಕ್ರಿಯೆಯನ್ನು ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆಯೇ? ಎಂಬ ಅನುಮಾನ ಮೂಡುವಂತಾಗಿದೆ.

ಶಾಸಕರ ರಾಜೀನಾಮೆಗೆ ಸಂಬಂಧಪಟ್ಟಂತೆ ಕೇವಲ ಎರಡು ನಿಯಮಗಳು ಮಾತ್ರ ಇದೆ. ಯಾವುದೇ ಶಾಸಕ ಸ್ಪೀಕರ್‌ ಅವರನ್ನು ಖುದ್ದಾಗಿ ಭೇಟಿ ಮಾಡಿ ನಿಗದಿತ ನಮೂನೆಯಲ್ಲಿ ರಾಜೀನಾಮೆ ಪತ್ರವನ್ನು ಸಲ್ಲಿಸಿದರೆ ಯಾವುದೇ ವಿಳಂಬವಿಲ್ಲದೇ ಸ್ಪೀಕರ್‌ ಅಂಗೀಕರಿಸಬೇಕಾಗುತ್ತದೆ. ರಾಜೀನಾಮೆಯನ್ನು ಸ್ವ ಇಚ್ಛೆಯಿಂದ ನೀಡಿದ್ದಾರೆಯೋ, ಯಾವುದಾದರೂ ಒತ್ತಡಕ್ಕೆ ಒಳಗಾಗಿ ನೀಡಿದ್ದಾರೋ ಎಂಬುದನ್ನು ಮಾತ್ರ ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ಸಾಮಾನ್ಯವಾಗಿ ಶಾಸಕರು ಯಾವ ವಿಷಯವನ್ನೂ ನಮೂದಿಸದೇ ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದಷ್ಟೇ ಉಲ್ಲೇಖಿಸುತ್ತಾರೆ. ಒಂದೊಮ್ಮೆ ಕಾರಣ ನೀಡಿದ್ದರೂ ಅದನ್ನು ಸ್ಪೀಕರ್‌ ಬಹಿರಂಗಪಡಿಸುವಂತಿಲ್ಲ ಎಂಬುದು ಕಾನೂನು ಪಂಡಿತರ ವಾದ.

ಸ್ಪೀಕರ್‌ನ್ನು ಖುದ್ದಾಗಿ ಭೇಟಿ ಮಾಡದೇ ಅವರ ಕಚೇರಿ ಸಿಬ್ಬಂದಿಗೆ ರಾಜೀನಾಮೆ ಪತ್ರ ಕೊಟ್ಟಾಗ ಮಾತ್ರ ಈ ಬಗ್ಗೆ ಸಮಯ ತೆಗೆದುಕೊಳ್ಳುವುದಕ್ಕೆ ಅವಕಾಶವಿದೆ. 'ನೀವು ನಮ್ಮ ಸಿಬ್ಬಂದಿಗೆ ರಾಜೀನಾಮೆ ಪತ್ರ ನೀಡಿದ್ದೀರಿ. ಈ ಬಗ್ಗೆ ವಿಚಾರಣೆ ನಡೆಸಬೇಕಿದ್ದು, ನನ್ನನ್ನು ಭೇಟಿ ಮಾಡಿ ಸ್ಪಷ್ಟೀಕರಣ ನೀಡಿ' ಎಂದು ಶಾಸಕರಿಗೆ ನೋಟಿಸ್‌ ನೀಡಬಹುದು.

ಅನ್ವಯವಾಗದು
ಶಾಸಕರ ಅನರ್ಹತೆ ವಿಚಾರಕ್ಕೆ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ನೀಡಿರುವ ದೂರಿನ ವಿಚಾರಣೆಗೂ, ಜಾಧವ್‌ ರಾಜೀನಾಮೆಗೂ ಸಂಬಂಧವಿಲ್ಲ. ಅನರ್ಹತೆ ದೂರು ನಿಗದಿತ ಕಾಲಘಟ್ಟಕ್ಕೆ ಸಂಬಂಧಪಟ್ಟಿದ್ದು. ಆದರೆ ಜಾಧವ್‌ ರಾಜೀನಾಮೆ ನೀಡಿರುವುದರಿಂದ ವಿಚಾರಣೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಉಳಿದ ಮೂವರಿಗೆ ನೋಟಿಸ್‌ ನೀಡಿ ಸ್ಪಷ್ಟನೆ ಪಡೆದು ಕ್ರಮ ತೆಗೆದುಕೊಳ್ಳಬೇಕೋ, ಬೇಡವೋ ಎಂಬುದಕ್ಕೆ ಮಾತ್ರ ಸದ್ಯಕ್ಕೆ ಅವಕಾಶವಿದೆ. ಒಂದೊಮ್ಮೆ ಉಳಿದ ಮೂವರು ತಕ್ಷಣಕ್ಕೆ ರಾಜೀನಾಮೆ ನೀಡಿದರೆ ಸಿದ್ದರಾಮಯ್ಯ ನೀಡಿದ ದೂರಿಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂಬುದು ಕಾನೂನು ತಜ್ಞರ ಅಭಿಮತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ