ಆ್ಯಪ್ನಗರ

ಬನ್ನೇರುಘಟ್ಟ 'ಇಎಸ್‌ಝಡ್‌' ಕಡಿತಕ್ಕೆ ಸಿದ್ದರಾಮಯ್ಯ ಗರಂ!

ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನದ ಇಎಸ್‌ಜೆಡ್ ವ್ಯಾಪ್ತಿಯನ್ನು ಕಡಿತಗೊಳಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದ್ವನಿ ಎತ್ತಿದ್ದು, ಯಡಿಯೂರಪ್ಪ ಸರಕಾರದ ಮೇಲೆ ಚಾಟಿ ಬೀಸಿದ್ದಾರೆ.

Vijaya Karnataka Web 16 Mar 2020, 1:12 pm
ಬೆಂಗಳೂರು: ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನದ ಇಎಸ್‌ಜೆಡ್ ವ್ಯಾಪ್ತಿಯನ್ನು ಕಡಿತಗೊಳಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದ್ವನಿ ಎತ್ತಿದ್ದು, ಯಡಿಯೂರಪ್ಪ ಸರಕಾರದ ಮೇಲೆ ಚಾಟಿ ಬೀಸಿದ್ದಾರೆ.
Vijaya Karnataka Web siddaramaiah new


ಪರಿಸರ ತಜ್ಞರ ಮಾತ್ರವಲ್ಲ ಹೈಕೋರ್ಟ್-ಸುಪ್ರೀಮ್ ಕೋರ್ಟ್ ವಿರೋಧದ ಹೊರತಾಗಿಯೂ ಬಿಎಸ್‌ ಯಡಿಯೂರಪ್ಪ ಅವರು ತರಾತುರಿಯಲ್ಲಿ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸಲು ಕಾರಣ ಏನು? ಸಮೃದ್ಧ ವನ್ಯಜೀವಿ ಸಂಕುಲ ಇರುವ ಪರಿಸರ ಸೂಕ್ಷ್ಮ ಪ್ರದೇಶವಾದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ರಕ್ಷಣೆಗಿಂತಲೂ, ಗಣಿ ಮತ್ತು ರಿಯಲ್ ಎಸ್ಟೇಟ್ ಲಾಬಿಗಳ ಹಿತರಕ್ಷಣೆಯೇ ತಮಗೆ ಮುಖ್ಯವಾಯಿತೇ? ಎಂದು ಯಡಿಯೂರಪ್ಪ ಅವರನ್ನು ಟ್ವಿಟ್ಟರ್ ಮೂಲಕ ಕಟುವಾಗಿ ಪ್ರಶ್ನಿಸಿದ್ದಾರೆ.


ಬನ್ನೇರುಘಟ್ಟ ಇಎಸ್‌ಝಡ್‌ 100 ಚ.ಕಿ.ಮೀ. ಕಡಿತ: ಪರಿಸರವಾದಿಗಳಿಂದ ವ್ಯಾಪಕ ವಿರೋಧ

ಬನ್ನೇರಘಟ್ಟ ಇಎಸ್‌ಜೆಡ್ ಉಳಿಸಲು ಹೋರಾಡುತ್ತಿದ್ದ ಸಂಸದರಾದ ಪಿ.ಸಿ. ಮೋಹನ್‌, ರಾಜೀವ್‌ ಚಂದ್ರಶೇಖರ್‌, ತೇಜಸ್ವಿ ಸೂರ್ಯ, ಮತ್ತು ಸಚಿವರಾದ ಎಸ್‌. ಸುರೇಶ್‌ ಕುಮಾರ್‌ ಅವರು ಈಗ ಯಾಕೆ ಹೋರಾಟ ಕೈ ಬಿಟ್ಟಿದ್ದಾರೆ? ಇವರ ಮೌನದ ನಿಗೂಢತೆ ಯ ರಹಸ್ಯ ಏನು? ಎಂದು ಬಿಜೆಪಿ ನಾಯಕರನ್ನು ಟ್ವಿಟ್ಟರ್‌ ಮೂಲಕವೇ ತರಾಟೆಗೆ ತೆಗೆದುಕೊಂಡಿದ್ದಾರೆ.



ಬನ್ನೇರುಘಟ್ಟ ಸೂಕ್ಷ್ಮ ವಲಯ ಕಡಿತ ಇಲ್ಲ, ಅರಣ್ಯ ಸಚಿವರ ಭರವಸೆ

ತಮ್ಮನ್ನು ರೈತ ನಾಯಕನೆಂದು ಬಿಂಬಿಸಿಕೊಳ್ಳುತ್ತಿರುವ ಯಡಿಯೂರಪ್ಪ ಅವರೇ,
ಸಾವಿರಾರು ಎಕರೆ ಭೂಮಿಯಿಂದ ರೈತರನ್ನು ಓಡಿಸಿ ಗಣಿಲೂಟಿಕೋರರು ಮತ್ತು ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಉಡುಗೊರೆ ನೀಡುವ ನಿರ್ಧಾರದಿಂದ ಯಾವ ರೈತರ ಉದ್ಧಾರವಾಗಲಿದೆ? ಉದ್ಯಾನನಗರಿ ಎಂಬ ಜಗದ್ವಿಖ್ಯಾತಿಯ ಬೆಂಗಳೂರನ್ನು ಬೆಂಗಾಡು ಮಾಡುವ ದುರಾಲೋಚನೆಯೇನಾದರೂ ಇದೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ. ನಗರದಲ್ಲಿ ಮಳೆ ಕಡಿಮೆಯಾಗುತ್ತಿದೆ, ಉಷ್ಣಾಂಶ ಹೆಚ್ಚುತ್ತಿದೆ, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕೆಂಪೇಗೌಡರು ಕಟ್ಟಿದ ನಗರವನ್ನು ಏನು ಮಾಡಲು ಹೊರಟಿದ್ದೀರಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.



ಕೇಂದ್ರ ಸರ್ಕಾರದಿಂದ ತೆರಿಗೆಹಂಚಿಕೆಯಲ್ಲಿ, 15ನೇ ಹಣಕಾಸು ಆಯೋಗದ ಶಿಫಾರಸಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇದನ್ನು ಪ್ರಶ್ನಿಸಿ ಕೇಂದ್ರಕ್ಕೆ ನಾಲ್ಕುಸಾಲಿನ ಪತ್ರ ಬರೆಯದೆ, ಇಎಸ್‌ಜೆಡ್ ಕಡಿತಗೊಳಿಸಲು ಪತ್ರ ಬರೆದಿದ್ದೀರಲ್ಲಾ? ನಿಮ್ಮ ಬದ್ಧತೆ ಯಾರಿಗೆ? ಎಂದು ಯಡಿಯೂರಪ್ಪ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ