ಆ್ಯಪ್ನಗರ

ಮಳೆ ಬಂದ್ರೆ ತಮಿಳುನಾಡಿಗೆ ನೀರು

ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ

Vijaya Karnataka Web 25 Jun 2019, 10:02 pm
ಹೊಸದಿಲ್ಲಿ : ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮುಂಗಾರು ಮಳೆ ಸುರಿದು ಜಲಾಶಯಗಳಿಗೆ ಗಟ್ಟಿ ಒಳ ಹರಿವು ಕಂಡು ಬಂದರಷ್ಟೇ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕಕ್ಕೆ ಸೂಚನೆ ನೀಡಿದೆ.
Vijaya Karnataka Web ಕಾವೇರಿ
ಕಾವೇರಿ


ಕೇಂದ್ರ ಜಲ ಆಯೋಗದ ಮುಖ್ಯಸ್ಥರೂ ಆಗಿರುವ ಪ್ರಾಧಿಕಾರದ ಅಧ್ಯಕ್ಷ ಎಸ್‌. ಮಸೂದ್‌ ಹುಸೇನ್‌ ನೇತೃತ್ವದಲ್ಲಿ ಮಂಗಳವಾರ ಹೊಸದಿಲ್ಲಿಯಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂಗಾರು ಮಳೆ ಇಲ್ಲದೇ ತಾನೇ ಬವಣೆಯಲ್ಲಿ ಸಿಲುಕಿರುವ ರಾಜ್ಯದ ಪಾಲಿಗೆ ಪ್ರಾಧಿಕಾರದ ಈ ತೀರ್ಮಾನ ತಾತ್ಕಾಲಿಕ ರಿಲೀಫ್‌ ತಂದಿದೆ.

ಜೂನ್‌, ಜುಲೈನಲ್ಲಿ ಕರ್ನಾಟಕವು ತನಗೆ ಹರಿಸಬೇಕಿರುವ ನೀರನ್ನು ಬಿಡಿಸುವಂತೆ ಕೋರಿ ತಮಿಳುನಾಡು ಪ್ರಾಧಿಕಾರದ ಮುಂದೆ ಸಲ್ಲಿಸಿದ ಮನವಿಯನ್ನು ಸಭೆ ಪರಿಶೀಲಿಸಿತು. ''ಕುರುವೈ ಬೆಳೆಗಾಗಿ ರೈತರು ಮೆಟ್ಟೂರು ಜಲಾಶಯದ ನೀರನ್ನು ಅವಲಂಬಿಸಿದ್ದಾರೆ. ಹಾಗಾಗಿ, ತಮಗೆ ನಿಗದಿಪಡಿಸಿರುವ ನೀರನ್ನು ಕರ್ನಾಟಕದಿಂದ ಬಿಡುಗಡೆ ಮಾಡಿಸುವಂತೆ,'' ತಮಿಳುನಾಡು ಕೋರಿತು.

ಇದಕ್ಕೆ ಪ್ರತಿಕ್ರಿಯಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿ ಅಧ್ಯಕ್ಷ ನವೀನ್‌ ಕುಮಾರ್‌,''ಕಾವೇರಿ ಕೊಳ್ಳದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿದೆ. ಜೂ.24ರ ಅವಧಿವರೆಗೆ ಸುರಿದಿರುವ ಮಳೆಯಿಂದ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಹರಿದಿರುವ ನೀರಿನ ಪ್ರಮಾಣ 1.77 ಟಿಎಂಸಿ ಅಡಿ ಮಾತ್ರ. ಈ ಹಿನ್ನೆಲೆಯಲ್ಲಿ ನೀರು ಹರಿಸುವುದು ಅಸಾಧ್ಯ,'' ಎಂದು ವಸ್ತುಸ್ಥಿತಿ ಮುಂದಿಟ್ಟರು.

ಈ ಹೇಳಿಕೆಯನ್ನು ಪ್ರಾಧಿಕಾರದ ಸಭೆ ಪುರಸ್ಕರಿಸಿತು. ಬಳಿಕ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಎಸ್‌. ಮಸೂದ್‌ ಹುಸೇನ್‌, ''ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡು ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯಗಳಲ್ಲಿ ಉತ್ತಮ ನೀರು ಸಂಗ್ರಹವಾದರೆ, ಕರ್ನಾಟಕವು ತಮಿಳುನಾಡಿಗೆ ಹರಿಸಬೇಕಾಗಿರುವ ಜೂನ್‌ ಪಾಲಿನ 9.19 ಟಿಎಂಸಿ ಅಡಿ ಹಾಗೂ ಜುಲೈ ಪಾಲಿನ 31.24 ಟಿಎಂಸಿ ಅಡಿ ನೀರನ್ನು ಹರಿಸಬೇಕಾಗುತ್ತದೆ. ಆದರೆ, ಇದು ಸಂಪೂರ್ಣ ಒಳಹರಿವಿನ ಪ್ರಮಾಣವನ್ನು ಆಧಾರಿಸಿರುತ್ತದೆ,'' ಎಂದು ಹೇಳಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹುಸೇನ್‌, ''ಕಾವೇರಿ ಜಲಾನಯದ ಪ್ರದೇಶದಲ್ಲಿನ ಮಳೆಯ ಪ್ರಮಾಣ, ನೀರಿನ ಲಭ್ಯತೆಯನ್ನು ಪರಿಶೀಲಿಸಲಾಯಿತು. ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದಿಂದ ಕೆಆರ್‌ಎಸ್‌, ಕಬಿನಿ ಸೇರಿದಂತೆ ಇತರೆ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆ ಆಗಿದೆ. ಉತ್ತಮ ಮಳೆ ಆದರಷ್ಟೇ ಸಮಸ್ಯೆಗೆ ಸರಳ ಪರಿಹಾರ ದೊರೆಯಲಿದೆ,'' ಎಂದು ವಿವರಿಸಿದರು. ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಪುದಚೇರಿ ಮತ್ತು ಕೇರಳದ ಪ್ರತಿನಿಧಿಗಳು ಭಾಗವಹಿಸಿದ್ದರು.

ಮೇಕೆದಾಟು ಯೋಜನೆಗೆ ವಿರೋಧ

ಕಾವೇರಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವ ಉದ್ದೇಶದಿಂದ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಮುಂದಾಗಿರುವ ರಾಜ್ಯ ಸರಕಾರದ ಪ್ರಸ್ತಾಪಕ್ಕೆ ತಮಿಳುನಾಡು ಮತ್ತೆ ಸಭೆಯಲ್ಲಿ ವಿರೋಧ ದಾಖಲಿಸಿದೆ. ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಅವಕಾಶ ನೀಡಿದರೆ ತಮಿಳುನಾಡಿನ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಅಭಾವ ಕಾಣಿಸಿಕೊಳ್ಳಲಿದೆ. ಇದಕ್ಕೆ ಅನುಮತಿ ನೀಡಬಾರದು ಎಂದು ತಮಿಳುನಾಡಿ ತಗಾದೆ ಎತ್ತಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ